ರಕ್ತ ಒಸರುತ್ತಿದ್ದರೂ ವಿಚಾರಣೆಗೆ ಕರೆದೊಯ್ದರು: ಡಿ.ಕೆ.ಶಿವಕುಮಾರ್
Recommended Video
ನವದೆಹಲಿ, ಸೆಪ್ಟೆಂಬರ್ 14: ಮಾಜಿ ಮಂತ್ರಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ನಿನ್ನೆ ನ್ಯಾಯಾಧೀಶರ ಮುಂದೆ ಇಡಿ ಅಧಿಕಾರಿಗಳ ದೌರ್ಜನ್ಯದ ಬಗ್ಗೆ ದೂರು ಹೇಳಿದರು.
ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಡಿ.ಕೆ.ಶಿವಕುಮಾರ್, 'ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆ ಸೇರಿದ್ದಾಗ ಅಲ್ಲಿ ಸೂಜಿ ಚುಚ್ಚಿದರು, ಆಗ ಕೈಯಿಂದ ರಕ್ತ ಜಿನುಗಲು ಆರಂಭಿಸಿತು ಆದರೂ ಇಡಿ ಅಧಿಕಾರಿಗಳು ಬಲವಂತವಾಗಿ ನನ್ನನ್ನು ವಿಚಾರಣೆಗೆ ಕರೆದೊಯ್ದರು' ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು.
ಇಡಿ ಅಧಿಕಾರಿಗಳ ಈ ಹೇಳಿಕೆ, ರಾಜಕಾರಣಿಗಳು ತಲೆತಗ್ಗಿಸುವಂತದ್ದು
ಡಿ.ಕೆ.ಶಿವಕುಮಾರ್ ಅವರಿಗೆ ರಕ್ತದೊತ್ತಡ ಹೆಚ್ಚಾದ ಕಾರಣ ಸೆಪ್ಟೆಂಬರ್ 12 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಡಿಕೆಶಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ ಮಾಹಿತಿ ಪ್ರಕಾರ ಡಿಕೆಶಿ ಆರೋಗ್ಯ ಇನ್ನೂ ಸುಧಾಕರಣೆ ಆಗಿಲ್ಲ, ಬಿಪಿ ಹತೋಟಿಗೆ ಬಂದಿರಲಿಲ್ಲ.
ಚಿತ್ರದಲ್ಲಿ ಕಾಣುತ್ತಿರುವಂತೆ ಡಿ.ಕೆ.ಶಿವಕುಮಾರ್ಅವರ ಮುಂಗೈಗೆ ಬ್ಯಾಂಡೆಜ್ ಹಾಕಲಾಗಿದೆ. ಅವರಿಗೆ ರಕ್ತದೊತ್ತಡ ಹೆಚ್ಚಿದ್ದ ಕಾರಣ ಸೂಜಿ ಚುಚ್ಚಿದ್ದಾಗ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ.
ನ್ಯಾಯಾಧೀಶರ ಮುಂದೆ ಇಡಿ ಅಧಿಕಾರಿಗಳ ವಿರುದ್ಧ ದೂರು ಹೇಳಿದ ಡಿ.ಕೆ.ಶಿವಕುಮಾರ್, 'ವಿಚಾರಣೆ ಹೆಸರಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ, ವಿಶ್ರಾಂತಿಗೂ ನನಗೆ ಅವಕಾಶ ಕೊಡಲಾಗುತ್ತಿಲ್ಲ' ಎಂದರು.
ಡಿ.ಕೆ.ಶಿವಕುಮಾರ್ ಮಾತು ಆಲಿಸಿದ ನ್ಯಾಯಾಧೀಶರು, ನಿಮಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು ಎಂದರು. ಇಡಿಗೆ ಸಹ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ನಂತರವೇ ವಿಚಾರಣೆ ಮಾಡಿ ಎಂದು ಸೂಚಿಸಿದರು.
ನ್ಯಾಯಾಲಯದಿಂದ ಹೊರ ಬಂದ ಡಿಕೆಶಿ, ಮಾಧ್ಯಮದವರನ್ನುದ್ದೇಶಿಸಿ, 'ನನ್ನ ಹತ್ರ 317 ಬ್ಯಾಂಕ್ ಖಾತೆ ಇದಾವೆ ಎನ್ನುತ್ತಾರಲ್ಲಾ ಅದು ನಿಜವೇ ಆಗಿದ್ರೆ ಎಲ್ಲವನ್ನೂ ಇವರ ಹೆಸರಿಗೆ ಬರೆದುಕೊಡುತ್ತೀನಿ' ಎಂದು ಹೇಳಿದರು. ಆಗ ಇಡಿ ಅಧಿಕಾರಿಗಳು ಡಿಕೆಶಿ ಸುತ್ತಲೇ ಇದ್ದರು.
ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ನಿನ್ನೆ ಆದೇಶ ಹೊರಡಿಸಿದೆ. ಮಂಗಳವಾರದ ವರೆಗೆ ಡಿ.ಕೆ.ಶಿವಕುಮಾರ್ ಅವರು ಇಡಿ ವಶದಲ್ಲಿಯೇ ಇರಲಿದ್ದಾರೆ.