ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಆರಂಭ
ನವದೆಹಲಿ, ಸೆಪ್ಟೆಂಬರ್ 21: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಆರಂಭಗೊಂಡಿದೆ.
ಡಿಕೆ ಶಿವಕುಮಾರ್ ಅವರು ಕಾನೂನು ಬಾಹಿರವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಇಡಿ ಪರ ವಕೀಲ ನಟರಾಜನ್ ವಾದ ಮಂಡಿಸುತ್ತಿದ್ದಾರೆ. ಗಳಿಸಿದ ಆಸ್ತಿಗಳಿಗೆ ತೆರಿಗೆ ಪಾವತಿಸಿರುವುದಾಗಿ ಹೇಳುತ್ತಾರೆ, ಆದರೆ ಅಕ್ರಮ ಆಸ್ತಿಗಳಿಗೆ ಸಕ್ರಮದ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಟರಾಜನ್ ವಾದ ಮಂಡಿಸಿದ್ದಾರೆ.
ಜಪ್ತಿ ಮಾಡಿದ ಆಸ್ತಿ ಸರ್ಕಾರಕ್ಕೆ ಸೇರಬೇಕು, ಅಕ್ರಮವಾಗಿ ಗಳಿಸಿದ ಹಣವನ್ನು ಅವರು ಅನುಭವಿಸಲು ಸಾಧ್ಯವಿಲ್ಲ, ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸಕ್ರಮವಾಗಿಸಲು ಬಿಡುವುದಿಲ್ಲ.
ಕಪ್ಪು ಹಣ ಯಾವಾಗಲೂ ಕಪ್ಪು ಹಣವೇ ಆಗಿರುತ್ತದೆ. ಪಿಎಂಎಲ್ ಕಾಯ್ಸೆ ಸೆಕ್ಷನ್ 9ರ ಪ್ರಕಾರ ಆಸ್ತಿಯನ್ನು ಜಪ್ತಿ ಮಾಡಬೇಕು. ಹಾಗಾಗಿ ಅವರು ಅಕ್ರಮ ಆಸ್ತಿಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ.
ಶುಕ್ರವಾರವೂ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು, ಆದರೆ ಕೆಲ ಕಾರಣಗಳಿಂದ ಅರ್ಜಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಲಾಗಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಇಡಿ ಪರ ವಕೀಲ ನಟರಾಜನ್ ವಾದ ಮಂಡಿಸಲು ಆರಂಭಿಸಿದ್ದಾರೆ.
ಪ್ರತಿ ದಿನ 8-9 ಗಂಟೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ, ಆದರೆ 4 ಗಂಟೆ ಮಾತ್ರ ಡಿಕೆಶಿ ಉತ್ತರ ಕೊಟ್ಟಿದ್ದಾರೆ. ವೈಟ್ ಯಾವಾಗಲೂ ವೈಟ್, ಬ್ಲಾಕ್ ಯಾವಾಗಲೂ ಬ್ಲಾಕ್ , ಪಿಎಂಎಲ್ ಕಾಯ್ದೆಯಡಿ ಕೆಲವು ವಿಷಯಗಳು ನಿಮ್ಮ ಗಮನಕ್ಕೆ ಇರುತ್ತವೆ. ಸೆಕ್ಷನ್ 53ರ ಪ್ರಕಾರ ಆರೋಪಿ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.
ಅದಕ್ಕಾಗಿಯೇ ಚಿದಂಬರಂಗೆ ಜಾಮೀನು ನಿರಾಕರಿಸಲಾಗಿದೆ. ಸೆಕ್ಷನ್ 3ರ ಪ್ರಕಾರ ಆರೋಪಿ ಸತ್ಯ ಹೇಳಬೇಕು. ನಾವು ಕೇಳುವ ಪ್ರಶ್ನೆಗಳಿಗೆ ಡಿಕೆಶಿ ನೀಡುವ ಉತ್ತರಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ನಟರಾಜ್ ತಮ್ಮ ವಾದ ಮಂಡನೆಯಲ್ಲಿ ತಿಳಿಸಿದ್ದಾರೆ.