ಕರ್ನಾಟಕ ಕಾಂಗ್ರೆಸ್ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ರನ್ನು ಬಂಧಿಸಿದ ಇ.ಡಿ.
ನವದೆಹಲಿ, ಸೆಪ್ಟೆಂಬರ್ 3: ಅಕ್ರಮ ಹಣ ವರ್ಗಾವಣೆ (ಮನಿ ಲಾಂಡ್ರಿಂಗ್)ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕರ್ನಾಟಕ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲೇ ಬಂಧಿಸಿದ್ದಾರೆ.
ಕಳೆದ ಶುಕ್ರವಾರದಿಂದ ಸುದೀರ್ಘ ವಿಚಾರಣೆ ಮಾಡಿದ ಬಳಿಕ ಇ.ಡಿ. ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಊಟಕ್ಕಾಗಿ ಸಹ ಕಚೇರಿಯಿಂದ ಹೊರಗೆ ಕಳುಹಿಸದೆ ಶಿವಕುಮಾರ್ ರ ವಿಚಾರಣೆ ನಡೆಸಲಾಗಿತ್ತು.
LIVE Updates: ಸತತ ವಿಚಾರಣೆ ಬಳಿಕವೂ ಡಿಕೆಶಿ ಬಂಧನ
ಆದರೆ, ಡಿ.ಕೆ. ಶಿವಕುಮಾರ್ ತನಿಖೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಬರುತ್ತಿದೆ. ಇದೀಗ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಆ ನಂತರ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ.
ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಫ್ಲ್ಯಾಟ್ ನಲ್ಲಿ ಎರಡು ವರ್ಷ ಹಿಂದೆ ಎಂಟು ಕೋಟಿ ಅರವತ್ತೊಂಬತ್ತು ಲಕ್ಷ ರುಪಾಯಿ ನಗದು ಹಣ ದೊರೆತಿತ್ತು. ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯವು ಅಂತಿಮವಾಗಿ ಅವರನ್ನು ಬಂಧಿಸಿದೆ.
ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಡಿ.ಕೆ. ಶಿವಕುಮಾರ್ ಪರ ವಕೀಲರು ಅರ್ಜಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಂತೆ ಜಾಮೀನು ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ..