ಅನರ್ಹರ ಹಣೆಬರಹ ಸುಪ್ರೀಂಕೋರ್ಟ್ನಲ್ಲಿ ಇಂದು ನಿರ್ಧಾರ
ನವದೆಹಲಿ, ಸೆಪ್ಟೆಂಬರ್ 26: ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇಂದು ಸುಪ್ರೀಂಕೋರ್ಟ್ನಲ್ಲಿ ನಿರ್ಧಾರವಾಗಲಿದೆ.
ನಿನ್ನೆ ಸತತ ವಿಚಾರಣೆ ನಡೆದು ಅನರ್ಹ ಶಾಸಕರ ಪರ ಮುಕುಲ್ ರೊಹ್ಟಗಿ ಸುದೀರ್ಘ ವಾದ ಮಂಡಿಸಿದ್ದರು. ಇದರ ಜೊತೆಗೆ ಶಾಸಕ ಸುಧಾಕರ್, ಎಂ ಶಂಕರ್, ಶ್ರೀಮಂತ ಪಾಟೀಲ್ ಅವರ ಪರವಾಗಿಯೂ ವಕೀಲರು ವಾದಗಳನ್ನು ಮಂಡಿಸಿದ್ದರು.
ಮುಗಿಯದ ಅನರ್ಹ ಶಾಸಕರ ಬಿಕ್ಕಟ್ಟು, ಪ್ರಕರಣ ನಾಳೆಗೆ ಮುಂದೂಡಿಕೆ
ಅನರ್ಹತೆ ರದ್ದು ಗೊಳಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಿ, ಅಥವಾ ಉಪಚುನಾವಣೆಗೆ ತಡೆ ನೀಡಿ, ಪ್ರಕರಣ ಇತ್ಯರ್ಥವಾಗುವವರೆಗೆ ಉಪಚುನಾವಣೆ ಮುಂದೂಡಿ ಎಂದು ಅನರ್ಹ ಶಾಸಕರ ಪರ ವಕೀಲರು ತ್ರಿಸದಸ್ಯ ಪೀಠವನ್ನು ಕೇಳಿಕೊಂಡರು.
ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅನರ್ಹತೆಯ ತೀರ್ಪು ನೀಡಿದ್ದಾರೆ. ರಾಜೀನಾಮೆ ಸರಿಇಲ್ಲವೆನ್ನಲು ಸೂಕ್ತ ಸಾಕ್ಷ್ಯ ನೀಡಿಲ್ಲ ಅದಲ್ಲದೆ ಸ್ಪೀಕರ್ ಅವರು ಸದನದ ಒಳಗೆ ಶಾಸಕರ ನಡವಳಿಕೆಗಳ ಮೇಲೆ ನಿಗಾ ಇಡಲು ಸ್ಪೀಕರ್ ಅವರು ಸದನದ ಹೊರಗಿನ ನಡವಳಿಕೆ ಗಮನಿಸಿ ಅನರ್ಹರನ್ನಾಗಿಸಿರುವುದಾಗಿ ಹೇಳಿದ್ದಾರೆ ಎಂದು ವಾದ ಮಂಡಿಸಿದರು.
ಕಾಂಗ್ರೆಸ್ ಪರ ವಕೀಲರು ಇಂದು ತಮ್ಮ ಲಿಖಿತ ವಾದ ಒಪ್ಪಿಸುವುದಾಗಿ ನ್ಯಾಯಾಲಯವನ್ನು ಕೇಳಿದರು. ಅಲ್ಲದೆ ಇಂದು ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪರವಾಗಿಯೂ ವಾದ ಮಂಡನೆ ಆಗಲಿದೆ. ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಪರವಾಗಿಯೂ ವಾದ ಮಂಡನೆ ಆಗಲಿದೆ.
ಇಂದೂ ಸಹ ಸುದೀರ್ಘ ವಾದ ಮಂಡನೆ ಆಗಲಿದ್ದು, ಇಂದೇ ನ್ಯಾಯಾಲಯವು ತನ್ನ ಆದೇಶ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.