ಅನರ್ಹ ಶಾಸಕರು ಚುನಾವಣೆ ಸ್ಪರ್ಧಿಸಲು ಅಭ್ಯಂತರವಿಲ್ಲ: ಆಯೋಗ ವಾದ
ನವದೆಹಲಿ, ಸೆಪ್ಟೆಂಬರ್ 23: ಅನರ್ಹ ಶಾಸಕರ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಮೃದು ಧೋರಣೆ ತಳೆದಂತಿದೆ.
ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯಂತರವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ಸುಪ್ರೀಂಕೋರ್ಟ್ನಲ್ಲಿ ಇಂದು ಹೇಳಿದೆ.
ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ: ಹೆಚ್ಚಿದ ಆತಂಕ
ಸುಪ್ರೀಂಕೋರ್ಟ್ನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ವೇಳೆ ಚುನಾವಣೆ ಆಯೋಗದ ಪರವಾಗಿ ವಾದ ಮಂಡಿಸಿದ ವಕೀಲರು, ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಲು ನಮ್ಮ ಅಭ್ಯಂತರವಿಲ್ಲ, ಅವರು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದರು.
ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸಬಹುದು ಆದರೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲಾರರು, ಅದರ ನಿರ್ಣಯ ಚುನಾವಣಾ ಆಯೋಗದ್ದು ಎಂದು ಸಹ ವಾದ ಮಂಡಿಸಲಾಯಿತು.
ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, 'ಚುನಾವಣಾ ಆಯೋಗದ ಅಭಿಪ್ರಾಯವನ್ನು ಇಲ್ಲಿ ಕೇಳಲಾಗಿಲ್ಲ, ಈ ಪ್ರಕರಣದಲ್ಲಿ ಚುನಾವಣಾ ಆಯೋಗ ವಾದಿ ಅಥವಾ ಪ್ರತಿವಾದಿ ಎರಡೂ ಅಲ್ಲ ಎಂದು ವಾದಿಸಿದರು.
ಬಿವೈ ರಾಘವೇಂದ್ರಗೆ ಹಿನ್ನಡೆ, ಅಕ್ರಮ ಆಸ್ತಿ ಗಳಿಕೆ ಕೇಸ್ ವಿಚಾರಣೆಗೆ
ಆದರೆ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ರಾಜ್ಯ ಚುನಾವಣಾ ಆಯೋಗ ಆಯುಕ್ತ ಸಂಜೀವ್ ಕುಮಾರ್, ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಇಂದು ಕೇಂದ್ರ ಚುನಾವಣೆ ಆಯೋಗ ಸುಪ್ರೀಂನಲ್ಲಿ ಮಂಡಿಸಿರುವ ವಾದ ಇದಕ್ಕೆ ವಿರುದ್ಧವಾಗಿದೆ.