ಸುಪ್ರೀಂಗೆ ಅರ್ಜಿ ಸಲ್ಲಿಸಲಿರುವ ಅನರ್ಹಗೊಂಡ ಶಾಸಕರು
ಬೆಂಗಳೂರು, ಜುಲೈ 29: ಅನರ್ಹಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರು ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಎಚ್. ವಿಶ್ವನಾಥ್ ಸೇರಿದಂತೆ ಉಳಿದ ಶಾಸಕರಿಂದ ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹ
ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅನರ್ಹಗೊಳಿಸಿರುವ ತೀರ್ಪಿಗೆ ತಕ್ಷಣ ತಡೆಯಾಜ್ಞೆ ತರಲು ಸಿದ್ದತೆ, ಆ ನಂತರ ಸ್ಪೀಕರ್ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
7 ಶಾಸಕರ ಅನರ್ಹತೆಯಿಂದ ಸದನದ ಬಲ 207ಕ್ಕೆ ಕುಸಿದಿದೆ. ಆಂಗ್ಲೋ ಇಂಡಿಯನ್ ಸದಸ್ಯ ಸೇರಿ ಸದನ ಬಲ ಒಟ್ಟು 208. ಈಗ ಅಧಿಕಾರ ಹಿಡಿಯುವ ಮ್ಯಾಜಿಕ್ ನಂಬರ್ 105 ಆಗಿದೆ. ಬಿಜೆಪಿ ಬಲ ಪಕ್ಷೇತರ ಶಾಸಕ ಸೇರಿ 106.
ಈಗಾಗಲೇ ಕಾಂಗ್ರೆಸ್ ಶಾಸಕ ನಾಗೇಂದ್ರ ಅನರ್ಹತೆಯಿಂದ ಪಾರಾಗಿದ್ದು, ಆಂಗ್ಲೋ ಇಂಡಿಯನ್ ಶಾಸಕಿ ಸೇರಿ ದೋಸ್ತಿ ಬಲ 101 ಆಗಿದೆ. ಅತೃಪ್ತ ಶಾಶಕರು ಅನರ್ಹಗೊಂಡಿದ್ದರೂ ಬಿಜೆಪಿ ಬಹುಮತ ಸಾಬೀತಿಗೆ ಬಹುತೇಕ ಭೀತಿ ನಿವಾರಣೆಯಾಗಿದೆ. ಈಗಾಗಲೇ ಬಿಜೆಪಿ ಬಳಿ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ನಂಬರ್ 105ಕ್ಕಿಂತ ಒಂದು ಮತ ಹೆಚ್ಚು ಇದೆ. ಒಂದು ವೇಳೆ ಬಿಜೆಪಿ ನಾಯಕರೇ ಉಲ್ಟಾ ಹೊಡೆದರೆ ಮಾತ್ರ ಸಂಕಷ್ಟ ಎದುರಾಗಲಿದೆ.
LIVE: ಯಡಿಯೂರಪ್ಪಗೆ ವಿಶ್ವಾಸಮತದ ಅಗ್ನಿ ಪರೀಕ್ಷೆ
ಭಾನುವಾರದಂದು 11 ಕಾಂಗ್ರೆಸ್ ಹಾಗೂ 3 ಜೆಡಿಎಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ 2023ರ ತನಕ ಅನರ್ಹಗೊಳಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 17 ಶಾಸಕರು ಉಪಚುನಾವಣೆ ಎದುರಿಸುವಂತಿಲ್ಲ, ವಿಧಾನಸಭೆ ಸದನಕ್ಕೆ ಹಾಜರಾಗುವಂತಿಲ್ಲ. ಮಂತ್ರಿಗಿರಿಯನ್ನು ಹೊಂದುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಸ್ಪೀಕರ್ ಆದೇಶ ಹಾಗೂ ಆದೇಶದಲ್ಲಿ ಉಲ್ಲೇಖಿಸಿರುವ ಹಳೆ ಪ್ರಕರಣ ಹಾಗೂ ನೀಡಿರುವ ಕಾರಣಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅತೃಪ್ತರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.