ಟೂಲ್ಕಿಟ್ ವಿವಾದ; ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ...
ನವದೆಹಲಿ, ಫೆಬ್ರುವರಿ 15: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಟ್ವಿಟ್ಟರ್ ಟೂಲ್ ಕಿಟ್ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಿಶಾ ರವಿ ಬಂಧಿಸಿದ್ದು, ನಿಖಿತಾ ಜೇಕಬ್ ಹಾಗೂ ಶಂತನು ಎಂಬುವರ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ವಿಚಾರಣೆ ನಂತರ ಸುದ್ದಿಗೋಷ್ಠಿ ನಡೆಸಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಬೆಂಗಳೂರಿನ ದಿಶಾ ರವಿ, ಶಂತನು ಹಾಗೂ ವಕೀಲೆ ನಿಖಿತಾ ಜೇಕಬ್ ಖಲಿಸ್ತಾನಿ ಪರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾಗೆ ಮುನ್ನವೇ ಟ್ವಿಟ್ಟರ್ ನಲ್ಲಿ ಭಾರತ ಸರ್ಕಾರದ ವಿರುದ್ಧ ಬಿರುಗಾಳಿ ಎಬ್ಬಿಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷ್ಯಗಳು ದೊರೆತಿರುವುದಾಗಿಯೂ ಹೇಳಿದ್ದಾರೆ.
ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ
"ಈ ಮೂರು ಕಾರ್ಯಕರ್ತರು ಖಲಿಸ್ತಾನಿ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಎಂಬ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಟೂಲ್ ಕಿಟ್ ರಚನೆಯಲ್ಲಿ ತೊಡಗಿಕೊಂಡಿದ್ದರು. ಆನಂತರ ಅದನ್ನು ಗ್ರೆಟಾ ಥನ್ಬರ್ಗ್ ಜೊತೆ ಹಂಚಿಕೊಂಡಿರುವುದು ಸಾಬೀತಾಗಿದೆ" ಎಂದು ಪೊಲೀಸ್ ಅಪರಾಧ ವಿಭಾಗದ ಜಂಟಿ ಆಯುಕ್ತ ಪ್ರೇಮನಾಥ್ ತಿಳಿಸಿದ್ದಾರೆ. ಮುಂದೆ ಓದಿ...
ಏನಿದು ಟೂಲ್ ಕಿಟ್ ಪ್ರಕರಣ?
ದೆಹಲಿಯಲ್ಲಿನ ರೈತರ ಹೋರಾಟದ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ವೀಡನ್ ಪರಿಸರ ಕಾರ್ಯಕರ್ತೆ, ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ಟ್ವೀಟ್ ಮಾಡಿದ್ದರು. ಇದು ಭಾರತ ಸರ್ಕಾರದ ವಿರುದ್ಧ ಬಹುದೊಡ್ಡ ಅಭಿಪ್ರಾಯ ವ್ಯಕ್ತವಾಗಲು ಕಾರಣವಾಯಿತು. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಗ್ರೇಟಾ ಥನ್ ಬರ್ಗ ಟ್ವೀಟ್ ಮಾಹಿತಿ ಆಧರಿಸಿ, ಜನವರಿ 26 ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಪೂರ್ವ ನಿಯೋಜಿತವಾದದ್ದು. ಖಲಿಸ್ತಾನಿ ಪ್ರತ್ಯೇಕವಾದಿ ಗುಂಪುಗಳು ರೈತರ ಹೋರಾಟವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಟೂಲ್ ಕಿಟ್ ರಚಿಸಿವೆ ಎಂದು ಆಪಾದಿಸಿ "ಕ್ರಿಯೇಟರ್ಸ್ ಆಫ್ ಟೂಲ್ ಕಿಟ್" ವಿರುದ್ಧ ಫೆ. 4 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ದಿಶಾ ರವಿ, ಶಂತನು, ನಿಖಿತಾ ಜೇಕಬ್ ವಿರುದ್ಧ ಆರೋಪ...
ಗ್ರೆಟಾ ಥನ್ಬರ್ಗ್ ಮೊದಲ ಬಾರಿ ಹಂಚಿಕೊಂಡು, ನಂತರ ಡಿಲೀಟ್ ಮಾಡಿದ್ದ ಟೂಲ್ ಕಿಟ್ಗಳ ಹಲವು ಸ್ಕ್ರೀನ್ ಶಾಟ್ ಗಳನ್ನು ಇಟ್ಟುಕೊಂಡು ಪೊಲೀಸರು ಫೆಬ್ರುವರಿ 4ರಂದು ಎಫ್ ಐಆರ್ ದಾಖಲಿಸಿ ತನಿಖೆ ನಡೆಸಲು ಆರಂಭಿಸಿದ್ದರು. ಆನಂತರ ಇದಕ್ಕೆ ಸಂಬಂಧಿಸಿದಂತೆ ಶನಿವಾರ ಬೆಂಗಳೂರಿನಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿಯವರನ್ನು ಬಂಧಿಸಲಾಗಿತ್ತು. ದಿಶಾ ರವಿ ಬಂಧನದ ಬೆನ್ನಲ್ಲೇ ಇನ್ನಿಬ್ಬರು ಕಾರ್ಯಕರ್ತರಾದ ನಿಕಿತಾ ಜೇಕಬ್ ಮತ್ತು ಶಂತನು ವಿರುದ್ಧ ವಾರಂಟ್ ಹೊರಡಿಸಿದೆ. ನಿಕಿತಾ ಜೇಕಬ್ ವಕೀಲೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ದಿಶಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಟೂಲ್ಕಿಟ್ ವಿವಾದ: ದಿಶಾ ರವಿ ಬಂಧನದ ಬಳಿಕ ವಕೀಲೆ ನಿಕಿತಾ ಜೇಕಬ್ ವಿರುದ್ಧ ವಾರಂಟ್
"ಝೂಮ್ ಮೀಟಿಂಗ್ ಕೂಡ ನಡೆಸಿದ್ದರು"
ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಪರವಾಗಿ ನಿಖಿತಾ ಅವರನ್ನು ಕೆನಡಾ ಮೂಲದ ಪುನೀತ್ ಎಂಬ ಮಹಿಳೆ ಸಂಪರ್ಕಿಸಿದ್ದರು. ಈ ಫೌಂಡೇಷನ್ ಸಂಸ್ಥಾಪಕ ಎಂಓ ದಲಿವಾಲ್ ಅವರೊಂದಿಗೆ ಝೂಂ ಮೀಟಿಂಗ್ ಕೂಡ ನಡೆದಿದೆ. ಜನವರಿ 11ರಂದು ನಿಖಿತಾ ಜೇಕಬ್, ದಿಶಾ ರವಿ, ಶಂತನು ಅವರನ್ನೊಳಗೊಂಡಂತೆ ಸುಮಾರು 60 ಮಂದಿ ಈ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ಅಲ್ಲಿ ಟೂಲ್ ಕಿಟ್ ಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಮೊದಲು ಜನವರಿ 26ರಂದು ಪ್ರತಿಭಟನೆಗೆ ಕರೆ ನೀಡುವ ಕುರಿತು ಟೂಲ್ ಕಿಟ್ ನಲ್ಲಿ ಪ್ರಸ್ತಾಪವಿದ್ದು, ಎರಡನೇ ಭಾಗದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ವಿದೇಶದಲ್ಲಿರುವ ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಟೂಲ್ ಕಿಟ್ ರಚನೆ ಮಾಡಲಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.
"ಸಾಕ್ಷ್ಯಗಳು ದೊರೆತ ನಂತರ ಬಂಧಿಸಲಾಗಿದೆ"
"ಟೂಲ್ ಕಿಟ್ ನ ಹಲವು ಸ್ಕ್ರೀನ್ ಶಾಟ್ ಗಳು ದೊರೆತಿದ್ದವು. ಅವುಗಳ ಕುರಿತು ತನಿಖೆ ನಡೆಸಲಾಗಿದೆ. ಸಾಕಷ್ಟು ಸಾಕ್ಷ್ಯಗಳು ದೊರೆತ ನಂತರವೇ ಫೆಬ್ರುವರಿ 9ರಂದು ನ್ಯಾಯಾಲಯದಿಂದ ನಿಖಿತಾ ಜೇಕಬ್ ವಿರುದ್ಧ ಸರ್ಚ್ ವಾರಂಟ್ ಹೊರಡಿಸಲಾಯಿತು. ಫೆ.9ರಂದು ನಿಖಿತಾ ಮನೆ ಮೇಲೆ ದಾಳಿ ನಡೆಸಿ ಎರಡು ಲ್ಯಾಪ್ ಟಾಪ್ ಹಾಗು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಿಂದ ದೊರೆತ ಮಾಹಿತಿ ಆಧಾರದ ಮೇಲೆ ದಿಶಾ ರವಿ ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ದಿಶಾ ರವಿ ಫೋನ್ನಲ್ಲೇನಿತ್ತು?
ದಿಶಾ ರವಿ ಅವರನ್ನು ಬಂಧಿಸಿ ಅವರಿಂದ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಗ್ರೆಟಾ ಥನ್ ಬರ್ಗ್ ಜೊತೆ ಟೆಲಿಗ್ರಾಮ್ ಮೂಲಕ ಟೂಲ್ ಕಿಟ್ ಹಂಚಿಕೊಂಡಿದ್ದರ ಸಾಕ್ಷ್ಯ ದೊರೆತಿದೆ. ಸ್ಬಲ್ಪ ದಿನಗಳು ಯಾವ ವಿಷಯದ ಕುರಿತೂ ಮಾತನಾಡದಂತೆ ದಿಶಾ ರವಿ ಗ್ರೆಟಾಗೆ ಸೂಚಿಸಿದ್ದರು ಎನ್ನಲಾದ ವಾಟ್ಸ್ ಆಪ್ ಚಾಟ್ ದೊರೆತಿದೆ. ಈ ಪ್ರಕರಣದಲ್ಲಿ ನಮ್ಮ ಹೆಸರು ಕೇಳಿಬರುತ್ತಿದೆ. ಪೊಲೀಸರಿಗೆ ಇದು ಸಾಕ್ಷ್ಯವಾಗಬಹುದು ಎಂದಿರುವ ಮಾಹಿತಿ ಇದ್ದು, ಈ ವಿಚಾರದ ಬಗ್ಗೆ ಕೆಲ ದಿನಗಳ ಕಾಲ ಏನೂ ಹೇಳದಿರುವುದು ಒಳ್ಳೆಯದು. ನಾನು ವಕೀಲರೊಂದಿಗೆ ಮಾತನಾಡುತ್ತೇನೆ ಎಂದು ಉಲ್ಲೇಖಿಸಿರುವ ಚಾಟ್ ದೊರೆತಿದೆ ಎಂದು ತಿಳಿಸಿದ್ದಾರೆ.
"ತುಂಬಾ ಬುದ್ಧಿವಂತಿಕೆಯಿಂದ ಟೂಲ್ ಕಿಟ್ ರಚನೆ ಮಾಡಲಾಗಿದೆ"
ಭಾರತದ ಸರ್ಕಾರದ ವಿರುದ್ಧ ಅಸಮಾಧಾನ ಸೃಷ್ಟಿಸುವ ಅಂಶಗಳು ಅದರಲ್ಲಿದ್ದವು. ತುಂಬಾ ಬುದ್ಧಿವಂತಿಕೆಯಿಂದ ಇದನ್ನು ಸೃಷ್ಟಿಸಲಾಗಿದೆ. ಯಾರನ್ನು ಫಾಲೋ ಮಾಡಬೇಕು, ಯಾರನ್ನು ಟ್ಯಾಗ್ ಮಾಡಬೇಕು, ಯಾರಿಗೆ ಶೇರ್ ಮಾಡಬೇಕು ಎಂಬುದರ ಸಂಪೂರ್ಣ ವಿವರವಿದೆ. ಅದರಲ್ಲಿ ಹಲವು ಹೈಪರ್ ಲಿಂಕ್ ಗಳಿದ್ದು, ಅಲ್ಲಿಯೇ ಖಲಿಸ್ತಾನಿ ಪರ ಅಂಶಗಳು ದೊರೆತಿವೆ. ಭಾರತ ಸರ್ಕಾರದ ಬಗ್ಗೆ ಸಾಧ್ಯವಾದಷ್ಟು ಸುಳ್ಳು ಮಾಹಿತಿಗಳನ್ನು ಹರಡಿಸಲು ಪ್ರಯತ್ನಿಸುವುದರ ಬಗ್ಗೆ ಇದರಲ್ಲಿ ಚರ್ಚಿಸಲಾಗಿತ್ತು ಎಂದು ಹೇಳಿದ್ದಾರೆ.