ದೊಡ್ಡ ಪ್ರಮಾದವಾಗಿದೆ, ಮುಂದೆ ಹೀಗಾಗುವುದಿಲ್ಲ: ವಾಯುಸೇನಾ ಮುಖ್ಯಸ್ಥ
ಶ್ರೀನಗರ, ಅಕ್ಟೋಬರ್ 04: 'ನಮ್ಮದೇ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದು ದೊಡ್ಡ ಪ್ರಮಾದ' ಎಂದು ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದುರಿಯಾ ಹೇಳಿದ್ದಾರೆ.
ಫೆಬ್ರವರಿ 27 ರಂದು ಎಂಐ 17, ವಿ5 ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಸೇನೆಯು ಹೊಡೆದುರುಳಿಸಿತ್ತು. ಈ ಅವಘಡದಲ್ಲಿ ವಾಯುಸೇನೆಗೆ ಸೇರಿದ ಆರು ಮಂದಿ ಮತ್ತು ಒಬ್ಬ ನಾಗರೀಕರೂ ಬಲಿಯಾಗಿದ್ದರು.
ಭಾರತೀಯ ವಾಯು ಸೇನೆಯ ಮುಂದಿನ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ
ಫೆಬ್ರವರಿ 27 ರಂದೇ ಭಾರತ ಮತ್ತು ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣಾ ರೇಖೆ ಬಳಿ ಪರಸ್ಪರ ಗುಂಡಿನ ದಾಳಿ ನಡೆಸಿದ್ದವು. ಅದೇ ದಿನ ಕೆಲವು ಪಾಕಿಸ್ತಾನದ ವಿಮಾನಗಳು ಗಡಿ ಪ್ರವೇಶಿಸಿದ್ದವು. ಶತ್ರು ದೇಶದ ಹೆಲಿಕಾಪ್ಟರ್ ಎಂದುಕೊಂಡು ಭಾರತದ ಹೆಲಿಕಾಪ್ಟರ್ ಅನ್ನೇ ಭಾರತೀಯ ವಾಯುಪಡೆಯು ಹೊಡೆದು ಉರುಳಿಸಿತ್ತು.
'ದೊಡ್ಡ ತಪ್ಪು ಅಂದು ನಮ್ಮಿಂದಾಗಿದೆ. ನಾವದನ್ನು ಒಪ್ಪಿಕೊಳ್ಳುತ್ತಿದ್ದೇವೆ, ನಾವು ಹಾರಿಸಿದ ಮಿಸೈಲ್ ನಮ್ಮ ಹೆಲಿಕಾಪ್ಟರ್ಗೆ ತಗುಲಿದೆ. ಇಂತಹಾ ತಪ್ಪು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ' ಎಂದು ವಾಯುಸೇನಾ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದುರಿಯಾ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ
ಘಟನೆ ನಡೆದ ಹಿಂದಿನ ದಿನವಷ್ಟೆ ಭಾರತದ ಕೆಲವು ಯುದ್ಧವಿಮಾನಗಳು ಪಾಕಿಸ್ತಾನದ ಬಾಲಾಕೋಟ್ಗೆ ತೆರಳಿ ಉಗ್ರ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಅದರ ಮರುದಿನ ಫೆಬ್ರವರಿ 27 ರಂದು ಕೆಲವು ಪಾಕ್ ವಿಮಾನಗಳು ಭಾರತದ ಗಡಿ ಪ್ರವೇಶಿಸಿ ಬಾಂಬ್ ದಾಳಿ ನಡೆಸಿದ್ದವು, ಅದೇ ದಿನ ವಾಯುಪಡೆಯ ಅಭಿನಂದನ್ ವರ್ದಮಾನ್ ಪಾಕ್ ಪ್ರದೇಶದಲ್ಲಿ ಹೋಗಿ ಸೇನೆಗೆ ಸಿಕ್ಕಿಬಿದ್ದಿದ್ದರು.
ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ ವಿಸ್ತರಣೆ ಸ್ವಾಗತಿಸಿದ ಚೀನಾ
ವಾಯು ಭದ್ರತೆ ಮಿಸೈಲ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಯ ತಪ್ಪಿನಿಂದಾಗಿ ನಮ್ಮದೇ ಹೆಲಿಕಾಪ್ಟರ್ಗೆ ನಾವೇ ಗುರಿ ಇಟ್ಟು ಹೊಡೆದು ಉರುಳಿಸಿದ್ದೇವೆ ಎಂದ ವಾಯುಸೇನೆ ಮುಖ್ಯಸ್ಥ, ಮಿಸೈಲ್ ಹೊಡೆತಕ್ಕೆ ಹೆಲಿಕಾಪ್ಟರ್ ಆಕಾಶದಲ್ಲಿಯೇ ಬೆಂಕಿ ಹೊತ್ತಿಕೊಂಡು ಎರಡು ತುಂಡಾಗಿ ಕೆಳಗೆ ಉರುಳಿತು ಎಂದು ಮಾಹಿತಿ ನೀಡಿದ್ದಾರೆ.