ಬಿಜೆಪಿ ಸಂಸದೀಯ ಸಭೆಯಲ್ಲಿ 'ಧಾರವಾಡ ಪೇಡಾ' ಸದ್ದು
ನವದೆಹಲಿ, ಡಿಸೆಂಬರ್ 13: ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯ ದಾಖಲಿಸಿದಕ್ಕೆ ಖುಷಿಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಂಸದರಿಗೂ ಧಾರವಾಡ ಪೇಡಾ ತಿನ್ನಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸೂಚಿಸಿದರು.
ಧಾರವಾಡ ಪೇಡಾ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಅದರ ಸಿಹಿ ನೋಡಬೇಕೆಂಬ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲೂ ಧಾರವಾಡ ಪೇಡಾ ಸುದ್ದಿ ಮಾಡಿದೆ.
ಉಪ ಚುನಾವಣೆ ಬಳಿಕ ಕರ್ನಾಟಕಕ್ಕೆ ಉಡುಗೊರೆ ಕೊಟ್ಟ ಕೇಂದ್ರ
ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸಚಿವ ಪ್ರಹ್ಲಾದ ಜೋಶಿ ಅವರು ರಾತ್ರೋರಾತ್ರಿ ಧಾರವಾಡದಿಂದ ಪೇಡಾ ತರಿಸಿ ಗುರುವಾರ ಸಂಸತ್ತಿನ ಎಲ್ಲ ಬಿಜೆಪಿ ಸಂಸದರು, ಸಚಿವರು ಮತ್ತು ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಉಪ ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕೆ ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ್ದರು. ಸಭೆಯ ನಂತರ ಪ್ರಹ್ಲಾದ ಜೋಶಿ ಅವರಿಗೆ "ನಿಮ್ಮ ಊರಿನ ಪೇಡಾ ತುಂಬಾ ಪ್ರಸಿದ್ಢ, ನಮಗೆ ತಿನ್ನಿಸುವುದಿಲ್ಲವೇ? ಎಂದು ಕೇಳಿದ್ದರು.
"ಬೆಳ್ಳಿ ಬೆಡಗು" ಆಹ್ವಾನ ಸಂದರ್ಭ ಅನಂತ ಕುಮಾರ್ ನೆನೆದ ಮೋದಿ
ಮೋದಿಯವರು ಹಾಸ್ಯವಾಗಿ ಹೇಳಿದ್ದನ್ನು ಸಚಿವ ಪ್ರಹ್ಲಾದ ಜೋಶಿ ಅವರು ನಿಜವಾಗಿಸಿದ್ದಾರೆ. ಧಾರವಾಡದಿಂದ ವಿಮಾನದ ಮೂಲಕ ಬರೋಬ್ಬರಿ 100 ಕೆ.ಜಿ ಪೇಡಾ ತರಿಸಿ ಹಂಚಿದ್ದಾರೆ. ಪ್ರಧಾನಿ ಮೋದಿ ಅವರು ಪ್ರವಾಸದ ಕಾರಣ ಕಚೇರಿಯಲ್ಲಿ ಇಲ್ಲ. ಅವರಿಗೆ ಧಾರವಾಡ ಪೇಡಾ ವಿತರಿಸಿಲ್ಲ, ಬಂದ ನಂತರ ಅವರಿಗೂ ವಿತರಿಸಲಾಗುವುದು ಎಂದು ಪ್ರಹ್ಲಾದ ಜೋಶಿ ಕಚೇರಿ ತಿಳಿಸಿದೆ.