ವಿದ್ಯುತ್ ದರ ಇಳಿಸಿ, ಉಚಿತ ನೀರು ಕೊಟ್ಟರೂ ಜನ ವೋಟು ಹಾಕ್ಲಿಲ್ಲ
ನಡೆದ ದೆಹಲಿಯ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣಾ ಫಲಿತಾಂಶ ಬುಧವಾರ ಹೊರಬಿದ್ದಿದ್ದು ಬಿಜೆಪಿಯು ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಮರಳಿದ ಹಿನ್ನೆಲೆಯಲ್ಲಿ ಆಪ್ ಅಳಲು.
ನವದೆಹಲಿ, ಏಪ್ರಿಲ್ 26: ಜನ ಸಾಮಾನ್ಯರಿಗೆ ಅತ್ಯಗತ್ಯವಾಗಿ ಬೇಕಿದ್ದ ವಿದ್ಯುತ್ ದರ, ಉಚಿತ ನೀರು ಮುಂತಾದ ಸೌಕರ್ಯಗಳನ್ನು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಆಪ್) ನೀಡಿದ್ದರೂ, ಜನರು ಅದನ್ನು ಮರೆತಿರುವುದು ದುರದೃಷ್ಟಕರ ಎಂದು ದೆಹಲಿಯ ಆಪ್ ಮುಖಂಡ ಆಶುತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿಯ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣಾ ಫಲಿತಾಂಶ ಬುಧವಾರ ಹೊರಬಿದ್ದಿದ್ದು ಬಿಜೆಪಿಯು ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಮರಳಿದೆ.[ಬಿಜೆಪಿಯ ದೆಹಲಿ ವಿಜಯ ಹುತಾತ್ಮ ಸಿಆರ್ ಪಿಎಫ್ ಜವಾನರಿಗೆ ಅರ್ಪಣೆ]
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿದ್ಯುತ್, ನೀರು ಮಾತ್ರವಲ್ಲದೆ, ದೆಹಲಿ ಜನರಿಗೆ ಸಾಕಷ್ಟು ಅನುಕೂಲತೆಗಳನ್ನೂ ಆಪ್ ಸರ್ಕಾರ ಕೊಟ್ಟಿದೆ. ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿಸಿ ಅವುಗಳ ಸ್ಥಿತಿಗತಿಗಳನ್ನು ಮೇಲ್ಮಟ್ಟಕ್ಕೆ ತಂದಿದೆ. ಸರ್ಕಾರಿ ಆಸ್ಪತ್ರೆಗಳನ್ನೂ ಅಭಿವೃದ್ಧಿಗೊಳಿಸಲಾಗಿದೆ. ಹಾಗಿದ್ದರೂ, ಜನರು ಅದನ್ನು ಮರೆತಿರುವುದು ದುರದೃಷ್ಟಕರ ಎಂದಿದ್ದಾರೆ.[ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ!]
ಒಟ್ಟು 270 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 181ರಲ್ಲಿ ಜಯ ಸಾಧಿಸಿದ್ದರೆ, ಆಪ್ 40 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇನ್ನುಳಿದಂತೆ, ಕಾಂಗ್ರೆಸ್ 38 ಹಾಗೂ ಇತರರು 11 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸತತ ಮೂರನೇ ಬಾರಿ ಅಧಿಕಾರ ಗ್ರಹಣ ಮಾಡಿದೆ. ಹೀಗಾಗಿ, ಬಿಜೆಪಿಯು ಸತತ ಮೂರನೇ ಬಾರಿಗೆ ಸ್ಥಳೀಯ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.