'ಪ್ರಜಾಪ್ರಭುತ್ವ ಮುಂದುವರಿಯುತ್ತದೆ': ದೆಹಲಿಯಿಂದ ಹಿಂದಿರುವಾಗ ಮಮತಾ ಪ್ರತಿಕ್ರಿಯೆ
ನವದೆಹಲಿ, ಜು.31: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರೊಂದಿಗೆ ಐದು ದಿನಗಳ ಭೇಟಿಯ ನಂತರ ಶುಕ್ರವಾರ ದೆಹಲಿಯಿಂದ ಮತ್ತೆ ಪಶ್ಚಿಮ ಬಂಗಾಳಕ್ಕೆ ವಾಪಾಸ್ ತೆರಳಿದ್ದಾರೆ. ತನ್ನ ರಾಜ್ಯಕ್ಕೆ ಹಿಂದಿರುಗುವಾಗ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನಾನು ಎರಡು ತಿಂಗಳಿಗೊಮ್ಮೆ ರಾಷ್ಟ್ರ ರಾಜಧಾನಿಗೆ ಮರಳುತ್ತೇನೆ, ಪ್ರಜಾಪ್ರಭುತ್ವ ಮುಂದುವರಿಯುತ್ತದೆ," ಎಂದು ಹೇಳಿದರು.
ಇನ್ನು ತನ್ನ ಐದು ದಿನಗಳ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸವನ್ನು "ಯಶಸ್ವಿ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಉಳಿಸಿಕೊಂಡ ನಂತರದ ಮೊದಲನೆಯ ದೆಹಲಿ ಭೇಟಿ ಇದಾಗಿದೆ. ಮುಂದಿನ ಲೋಕಸಭೆಗೂ ಮುನ್ನ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿರುವುದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಲಾಢ್ಯ ವಿಪಕ್ಷಗಳ ಒಕ್ಕೂಟ ಎದುರಾಳಿಯಾಗುವ ಮುನ್ಸೂಚನೆ ನೀಡಿದೆ.
2024 ರ ಲೋಕಸಭಾ ಚುನಾವಣೆ: ಬಿಜೆಪಿ ವಿರುದ್ಧ ಪಕ್ಷಗಳನ್ನು ಒಟ್ಟುಗೂಡಿಸುತ್ತಾರಾ ಮಮತಾ?
ತನ್ನ ಪ್ರವಾಸ ಮುಗಿದು ಪಶ್ಚಿಮ ಬಂಗಾಳಕ್ಕೆ ಹಿಂದಿರುಗುವ ಮುನ್ನ ಮಾತನಾಡಿದ ಮಮತಾ ಬ್ಯಾನರ್ಜಿ, "ಪ್ರಜಾಪ್ರಭುತ್ವ ಮುಂದುವರಿಯಬೇಕು" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
"ನನ್ನ ಈ ದೆಹಲಿ ಭೇಟಿ ಯಶಸ್ವಿಯಾಗಿದೆ. ನಾವು ರಾಜಕೀಯ ಕಾರಣಗಳಿಗಾಗಿ ನನ್ನ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದೇವೆ. ಪ್ರಜಾಪ್ರಭುತ್ವ ಮುಂದುವರಿಯಬೇಕು. ನಮ್ಮ ಘೋಷಣೆ 'ಪ್ರಜಾಪ್ರಭುತ್ವವನ್ನು ಉಳಿಸಿ, ದೇಶವನ್ನು ಉಳಿಸಿ' ಎಂಬುದಾಗಿದೆ. ನಾನು ಪ್ರತಿ ಎರಡು ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತೇನೆ, ನಾವು ರಾಜಕೀಯ ಉದ್ದೇಶಕ್ಕಾಗಿ ಭೇಟಿಯಾದೆವು," ಎಂದು ಮಮತಾ ಬ್ಯಾನರ್ಜಿ ಆಕೆಯ ಸೋದರಳಿಯ ಮತ್ತು ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ನಿವಾಸದಿಂದ ತೆರಳುವ ಮೊದಲು ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಐಕ್ಯ ವಿಪಕ್ಷದ ನಾಯಕರು ಯಾರು?: 'ನಾನು ಜ್ಯೋತಿಷಿಯಲ್ಲ' ಎಂದ ಮಮತಾ
"ಇಂದು ನಾನು ಶರದ್ ಪವಾರ್ ಜಿ ಜೊತೆ ಮಾತನಾಡಿದೆ. ಪವಾರ್ ಜಿ ಮುಂಬೈಗೆ ವಾಪಾಸ್ ಹೋಗಿದ್ದಾರೆ. ಮುಂದಿನ ಬಾರಿ ನಾವು ಕೂಡ ಭೇಟಿಯಾಗುತ್ತೇವೆ," ಎಂದರು. ಇದೇ ವೇಳೆ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ದೇಶವು ಕೆಲಸ ಮಾಡಬೇಕಾದ ಪ್ರಮುಖ ವಿಷಯ ಪ್ರಜಾಪ್ರಭುತ್ವವನ್ನು ಉಳಿಸುವುದು ಆಗಿದೆ. ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಹಾಗೂ ಇದಿರಂದಾಗಿ ದೇಶವು ಅಪಾಯದಲ್ಲಿದೆ. ಪ್ರಜಾಪ್ರಭುತ್ವವನ್ನು ಉಳಿಸಿ ಮತ್ತು ರಾಷ್ಟ್ರವನ್ನು ಉಳಿಸಿ," ಎಂದು ಘೋಷಣೆ ಕೂಗಿದರು.
"ರಾಜಕೀಯ ಉದ್ದೇಶಕ್ಕಾಗಿ ಪ್ರತಿಪಕ್ಷ ಐಕ್ಯತೆ ಹೊಂದಿರುವ ವಿಚಾರಕ್ಕಿಂತ ಬೇರೆ ಯಾವುದೂ ಉತ್ತಮವಾದದ್ದು ಇರಲಾರದು. ಕೋವಿಡ್ ಮಾರ್ಗಸೂಚಿಗಳ ಹಿನ್ನೆಲೆಯಿಂದಾಗಿ ನಾನು ಬಯಸಿದ ಪ್ರತಿಯೊಬ್ಬ ನಾಯಕರನ್ನು ನನಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ನಾಯಕರೊಂದಿಗೆ ನಡೆದ ಎಲ್ಲಾ ಸಭೆಗಳ ಫಲಿತಾಂಶವು ಉತ್ತಮವಾಗಿದೆ. ನಾವು ಒಟ್ಟಾಗಿ ಕೆಲಸ ಮಾಡೋಣ," ಎಂದಿದ್ದಾರೆ.
ಈ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಒಕ್ಕೂಟಕ್ಕಾಗಿ ವಿಪಕ್ಷಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಈ ವಿಚಾರದಲ್ಲಿ ಅನೇಕ ಊಹಾಪೋಹಗಳು ಕೂಡಾ ಹುಟ್ಟಿಕೊಂಡಿದೆ.
ಕಾಂಗ್ರೆಸ್ ಮತ್ತು ತೃಣಮೂಲವು ಏಪ್ರಿಲ್-ಮೇನಲ್ಲಿ ಬಂಗಾಳ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಿದ ನಂತರ ಬುಧವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಮಮತಾ ಬ್ಯಾನರ್ಜಿ ಭೇಟಿಯಾದರು. ಈ ಭೇಟಿಗಳು 2024 ರ ರಾಷ್ಟ್ರೀಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಿನ ಹೋರಾಟಕ್ಕೆ ಸೇರುವ ಮಹತ್ವದ ಸಂಕೇತವಾಗಿದೆ.
Recommended Video
(ಒನ್ಇಂಡಿಯಾ ಸುದ್ದಿ)