ಸಂಸತ್ ಪ್ರಶ್ನಾವಳಿ ರದ್ದುಗೊಳಿಸಿದ ಹಿನ್ನೆಲೆ ಸರ್ಕಾರಕ್ಕೆ 'ಟ್ವೀಟ್' ಏಟು!
ನವದೆಹಲಿ, ಸಪ್ಟೆಂಬರ್.02: ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ ಇರುವುದಿಲ್ಲ ಎಂದು ರಾಜ್ಯಸಭಾ ಕಾರ್ಯದರ್ಶಿ ಹೊರಡಿಸಿರುವ ಆದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Recommended Video
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಅಸ್ತ್ರವಾಗಿ ಬಳಸಿಕೊಂಡು ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದಕ್ಕೆ ಹೊರಟಿದೆ ಎಂದು ಟ್ವಿಟ್ಟಿಗರು ಟೀಕಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧ ನಡೆ ಅನುಸರಿಸಲಾಗುತ್ತಿದೆ ಎಂದು ಕೆಂಡ ಕಾರುತ್ತಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಗಿಲ್ಲ ಅವಕಾಶ
ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ನಿರ್ವಹಣೆ, ಪಿಎಂ ಕೇರ್ ಪರಿಹಾರದ ಹಣ, ಜಿಡಿಪಿ ಕುಸಿತ ಮತ್ತು ಆರ್ಥಿಕ ಹೊಡೆತಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಕೇಳು ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರವು ಸಮರ್ಥವಾಗಿಲ್ಲ. ಈ ಹಿನ್ನೆಲೆ ಕೊವಿಡ್-19 ನೆಪವನ್ನಿಟ್ಟುಕೊಂಡು ಪ್ರಶ್ನಾವಳಿ ಅವಧಿಯನ್ನು ತೆಗೆದು ಹಾಕಲಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟಿಗರು ಕೇಂದ್ರದ ವಿರುದ್ಧ ಮಾಡುತ್ತಿರುವ ಆರೋಪಗಳೇನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
|
ಕೊರೊನಾವೈರಸ್ ಭೀತಿ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೇ?
ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೇ ನೀಟ್, ಜೆಇಇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. "ಮಹಾಮಾರಿ ಭೀತಿ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೇ, ಆದರೆ ಸಂಸತ್ ಅಧಿವೇಶನದಲ್ಲಿ ಮಾತ್ರ ಪ್ರಶ್ನಾವಳಿ ಅವಧಿ ಇರುವುದಿಲ್ಲ. ಹೋಗಲಿ ಬಿಡಿ ಅವರು ಯಾವಾಗಲೂ ಉತ್ತರ ಕೊಡುವುದೇ ಬೇಡ" ಎಂದು ಅಶ್ವಿನ್ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ನಿಮ್ಮ ಜೀವಗಳಿಗಷ್ಟೇ ಬೆಲೆ, ವಿದ್ಯಾರ್ಥಿಗಳ ಜೀವಕ್ಕಿಲ್ಲವೇ?
"ಮೊಟ್ಟ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ಹಿನ್ನೆಲೆಯಲ್ಲಿ ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನು ತೆಗೆದು ಹಾಕಲಾಗಿದೆ. ಆದರೆ ಅದೇ ಸರ್ಕಾರವು ವಿದ್ಯಾರ್ಥಿಗಳು ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ಹಾಜರಾಗಬೇಕೆಂದು ಬಯಸುತ್ತದೆ. ಸರ್ಕಾರಕ್ಕೆ ಅದನ್ನು ನಡೆಸುವವರ ಜೀವಗಳ ಬೆಲೆಯಷ್ಟೇ ಗೊತ್ತಿದೆ. ಹಾಗಿದ್ದರೆ ವಿದ್ಯಾರ್ಥಿಗಳ ಜೀವಕ್ಕೆ ಕಿಮ್ಮತ್ತು ಇಲ್ಲವೇ" ಎಂದು ವಾಸಿಫ್ ಉಸ್ಮಾನಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
"ಪ್ರಶ್ನೆ, ಲೆಕ್ಕ, ತನಿಖೆ ಇಲ್ಲದಿದ್ದಲ್ಲಿ ಭ್ರಷ್ಟಾಚಾರವಿಲ್ಲ"
"ಸಂಸತ್ ನಲ್ಲಿ ಪ್ರಶ್ನಾವಳಿ ಅವಧಿ ಇಲ್ಲ. ಪ್ರಧಾನಮಂತ್ರಿಯವರು ಸುದ್ದಿಗೋಷ್ಠಿ ನಡೆಸುವುದಿಲ್ಲ. ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸುವುದಿಲ್ಲ. ಸಿಎಜಿ ಲೆಕ್ಕಾಚಾರ ಮಾಡುವುದಿಲ್ಲ. ಸರ್ಕಾರವನ್ನು ಮಾಧ್ಯಮಗಳು ಪ್ರಶ್ನೆ ಮಾಡುವುದಿಲ್ಲ. ಲೋಕಪಾಲ್ ಅಂತೂ ಏನೂ ಮಾಡುವುದಿಲ್ಲ. ಇದು ಮೋದಿ ಅವರ ಪಾರದರ್ಶಕ ಆಡಳಿತದ ವೈಖರಿಯಾಗಿದೆ. ಪ್ರಶ್ನೆಯೂ ಇಲ್ಲ, ಲೆಕ್ಕವೂ ಇಲ್ಲ, ತನಿಖೆಯೂ ಇಲ್ಲ, ಹಾಗೆಂದ ಮೇಲೆ ಭ್ರಷ್ಟಾಚಾರ ಎಲ್ಲಿಂದ ಬರಬೇಕು" ಎಂದು ಶ್ರೀವಸ್ತ್ ಟ್ವೀಟ್ ಮಾಡಿದ್ದಾರೆ.
|
ಕಪಟತನ ಪ್ರದರ್ಶಿಸುತ್ತಿರುವ ಬಿಜೆಪಿ ಸರ್ಕಾರ
"ಕೊರೊನಾವೈರಸ್ ಸೋಂಕಿನ ಭೀತಿಯಿಂದಾಗಿ ಸಂಸತ್ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನು ತೆಗೆದುಹಾಕಲಾಗಿದೆ. ಆದರೆ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮಾತ್ರ ತಡೆ ಹಿಡಿಯುವುದಕ್ಕೆ ಆಗಲಿಲ್ಲ. ಇದು ಬಿಜೆಪಿ ಸರ್ಕಾರದ ಕಪಟತನ ಮತ್ತು ಬೂಟಾಟಿಕೆಗೆ ಹಿಡಿದ ಕೈಗನ್ನಡಿ" ಎಂದು ರೋಹನ್ ಗುಪ್ತಾ ಎಂಬುವವರು ಟ್ವಿಟರ್ ನಲ್ಲಿ ಕಿಡಿ ಕಾರಿದ್ದಾರೆ.
ಸಪ್ಟೆಂಬರ್.14ರಿಂದ ಆರಂಭವಾಗಲಿರುವ ಅಧಿವೇಶನ
ಸಂಸತ್ ಮುಂಗಾರು ಅಧಿವೇಶನವು ಸಪ್ಟೆಂಬರ್.14 ರಿಂದ ಆಕ್ಟೋಬರ್.01ರವರೆಗೂ ನಡೆಯಲಿದೆ. ಈ ಬಾರಿ ಖಾಸಗಿ ವ್ಯಕ್ತಿಗಳಿಗೂ ಕಲಾಪದಲ್ಲಿ ಪ್ರವೇಶ ಇರುವುದಿಲ್ಲ. ಶೂನ್ಯ ವೇಳೆ ಚರ್ಚೆ ಸೇರಿದಂತೆ ಉಳಿದ ಕಾರ್ಯಕಲಾಪಗಳು ನಿಗದಿಯಂತೆ ನಡೆಯಲಿವೆ ಎಂದು ರಾಜ್ಯಸಭಾ ಕಾರ್ಯದರ್ಶಿಗಳು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಮೊದಲ ದಿನ ಲೋಕಸಭೆ ಕಲಾಪ ಬೆಳಗ್ಗೆ 1 ರಿಂದ 3 ಗಂಟೆವರೆಗೂ ನಡೆಯಲಿದ್ದು, ರಾಜ್ಯಸಭಾ ಕಲಾಪ ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಯಲಿದೆ. ಸಪ್ಟೆಂಬರ್.14ರ ನಂತರದಲ್ಲಿ ರಾಜ್ಯಸಭಾ ಕಲಾಪವು ಬೆಳಗ್ಗೆ 1 ರಿಂದ 3 ಗಂಟೆವರಗೂ ಹಾಗೂ ಲೋಕಸಭಾ ಕಲಾಪವು ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಸಲು ಸಮಯ ನಿಗದಿಗೊಳಿಸಲಾಗಿದೆ.