ಕೃಷಿ ಕಾಯ್ದೆಗಳ ವಿರುದ್ಧದ ಕೂಗು ಅಡಗಿಸಲು ಸರ್ಕಾರದ ಹುನ್ನಾರ!?
ನವದೆಹಲಿ, ಆಗಸ್ಟ್ 12: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅನ್ನದಾತರು ಪ್ರತಿಭಟನೆ ನಡೆಸುವುದಕ್ಕೆ ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆ. ಬಿಸಿಲು, ಚಳಿ, ಗಾಳಿ ಮತ್ತು ಮಳೆ ಕುಗ್ಗದೇ ಜಗ್ಗದೇ ರೈತರು ಸರ್ಕಾರದ ವಿರುದ್ಧ ಧಿಕ್ಕಾರದ ಕೂಗು ಹಾಕುತ್ತಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ನಮ್ಮ ಪರ ಧ್ವನಿ ಎತ್ತುತ್ತವೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಫಲ ಸಿಗಲಿದೆ ಎಂಬ ರೈತರ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ. ಕಳೆದ ಜುಲೈ 19ರಿಂದ ಆರಂಭಗೊಂಡ ಸಂಸತ್ ಅಧಿವೇಶನವು ಕೇವಲ ಸದ್ದು-ಗದ್ದಲ-ಗಲಾಟೆಯಲ್ಲೇ ಅಂತ್ಯಗೊಂಡಿದೆ. ಬುಧವಾರ ರಾಜ್ಯಸಭೆಯಲ್ಲಿ ನಡೆದ ಒಂದೇ ಒಂದು ಘಟನೆಯಿಂದ ಎರಡು ದಿನಕ್ಕೂ ಮೊದಲೇ ಅಧಿವೇಶನವನ್ನು ಅಂತ್ಯಗೊಳಿಸುವಂತೆ ಮಾಡಿತು.
ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ಹಲ್ಲೆ ಆರೋಪ: ವಿಪಕ್ಷ ನಾಯಕರಿಂದ ಪ್ರತಿಭಟನೆ
ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸಿರುವ ಬಗ್ಗೆ ಪ್ರತಿಪಕ್ಷಗಳು ಪಟ್ಟು ಸಡಿಲಿಸದೇ ಪ್ರಶ್ನೆ ಮಾಡುವುದರಲ್ಲಿ ಬ್ಯುಸಿ ಆಗಿದ್ದವು. ಪ್ರತಿಪಕ್ಷಗಳ ಪೈಕಿ ಕೆಲವು ಪಕ್ಷದ ಸಂಸದರು ಮಾತ್ರ ರೈತ ಪರ ಧ್ವನಿ ಎತ್ತುವುದರ ಮೂಲಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕೆಲಸ ಮಾಡಿದರು. ಇನ್ನೊಂದು ದಿಕ್ಕಿನಲ್ಲಿ ರಾಷ್ಟ್ರ ರಾಜಧಾನಿ ಮೂರು ಗಡಿಗಳಲ್ಲಿ ಹಾಗೂ ಜಂತರ್ ಮಂತರ್ ಬಳಿ ರೈತರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಒಗ್ಗೂಡಿರುವ ಪ್ರತಿಪಕ್ಷಗಳು ದೇಶದಲ್ಲಿ "ಪ್ರಜಾಪ್ರಭುತ್ವದ ಕಗ್ಗೊಲೆ"ಯಾಗಿದೆ ಎಂದು ದೂಷಿಸುತ್ತಿವೆ.
ರಾಷ್ಟ್ರ ರಾಜಧಾನಿಯಲ್ಲಿ ವಿಪಕ್ಷ ನಾಯಕರ ಕಾಲ್ನಡಿಗೆ
ರಾಜ್ಯಸಭೆ ಪ್ರತಿಪಕ್ಷಗಳ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಂಸತ್ತಿನಿಂದ ವಿಜಯ್ ಚೌಕ್ ವರೆಗೂ ಕಾಲ್ನಡಿಗೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಹುಲ್ ಗಾಂಧಿ, ಶರದ್ ಪವಾರ್, ಸಂಜಯ್ ರಾವತ್, ತಿರುಚಿ ಸಿವಾ, ಮನೋಜ್ ಝಾ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. ಬುಧವಾರ ಸಂಸತ್ ಮೇಲ್ಮನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರಿಗೆ ದೂರು ಸಲ್ಲಿಸಿದರು. ಕೆಲ ಮಸೂದೆಗಳನ್ನು ಅಂಗೀಕರಿಸಿದ ಮರುದಿನ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿವಾದಿತ ಕೃಷಿ ಕಾಯ್ದೆ ರದ್ದುಗೊಳಿಸಲು ಪ್ರತಿಪಕ್ಷಗಳ ಒತ್ತಾಯ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇದೇ ವಿಚಾರಕ್ಕೆ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಬ್ಯಾನರ್ ಮತ್ತು ಪೋಸ್ಟರ್ ಅನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ರೈತರ ಹೋರಾಟಕ್ಕೆ ಬೆಂಬಲಿಸುವುದು ಹಾಗೂ ತೈಲ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಈ ಸಂಬಂಧ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಶಿವಸೇನೆ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ(ಸಿಪಿಐ), ಸಿಪಿಐ(ಎಂ), ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆರ್ಎಸ್ ಪಿ, ಕೇರಳ ಕಾಂಗ್ರೆಸ್(ಎಂ) ಮತ್ತು ವಿಸಿಕೆ ಪಕ್ಷದ ನಾಯಕರು ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಸಭೆ ನಡೆಸಿದ್ದವು.
ಮೋದಿ ಸರ್ಕಾರದಿಂದ "ಪ್ರಜಾಪ್ರಭುತ್ವದ ಕಗ್ಗೊಲೆ"
"ಮುಂಗಾರು ಸಂಸತ್ ಅಧಿವೇಶನ ಅಂತ್ಯವಾಗಿದೆ. ದೇಶದ ಶೇ.60ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದ್ದು, ಅವರನ್ನು ಅವಮಾನಿಸಲಾಗುತ್ತಿದೆ. ನಿನ್ನೆ ದೈಹಿಕವಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಪ್ರತಿಪಕ್ಷಗಳು ಪೆಗಾಸಸ್ ಹಗರಣ, ವಿವಾದಿತ ಕೃಷಿ ಕಾಯ್ದೆ, ತೈಲ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ ವಿಷಯ ಪ್ರಸ್ತಾಪಿಸಿತು. ಆದರೆ ಸಂಸತ್ತಿನಲ್ಲಿ ವಿರೋಧ ಪಕ್ಷ ನಾಯಕರಿಗೆ ಮಾತನಾಡುವುದಕ್ಕೂ ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲದೇ ಬೇರೇನೂ ಅಲ್ಲ", ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ಯಮಿಗಳಿಗೆ ಮಾರಾಟ ಮಾಡುವುದಕ್ಕೆ ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಿಸಾನ್ ಸಂಸತ್
ಸಂಸತ್ ಅಧಿವೇಶನದಲ್ಲಿ ತಮ್ಮ ಬೇಡಿಕೆ ಬಗ್ಗೆ ಪ್ರಸ್ತಾಪವಾಗುವುದೇ ಅನುಮಾನ ಎಂದು ರೈತರು ಮೊದಲೇ ಅರಿತುಕೊಂಡಿದ್ದರು. ಈ ಹಿನ್ನೆಲೆ ನವದೆಹಲಿಯಲ್ಲಿ ಕೃಷಿ ಕಾಯ್ದೆಗಳ ಕುರಿತು ಚರ್ಚಿಸುವುದಕ್ಕಾಗಿ ಕಿಸಾನ್ ಸಂಸತ್ ಅನ್ನು ನಡೆಸಲಾಯಿತು. ರೈತರು ನಡೆಸುತ್ತಿರುವ ಕೃಷಿ ಸಂಸತ್ತಿನಲ್ಲಿ ಮೂರು ವಿವಾದಿತ ಕಾಯ್ದೆಗಳ ಪೈಕಿ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ)ಯ ಬಗ್ಗೆ ಚರ್ಚಿಸಲಾಯಿತು. ಕೇಂದ್ರ ಸರ್ಕಾರದ ಕಾಯ್ದೆಯು ಅಸಂವಿಧಾನಿಕವಾಗಿದ್ದು, ಖಾಸಗಿಯವರಿಗೆ ಲಾಭದಾಯಕವಾಗಿದೆ. ಇಂಥ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಕಿಸಾನ್ ಸಂಸತ್ತಿನಲ್ಲಿ ಸಂಕಲ್ಪ ಮಾಡಲಾಯಿತು. ಈ ಕಾಯ್ದೆ ಮೂಲಕ ರೈತರಿಂದ ಕಾರ್ಪೊರೇಟ್ಗಳು ಸಂಪತ್ತನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ.ವಾಸ್ತವದಲ್ಲಿ ಕಾರ್ಪೊರೇಟ್ ಕೃಷಿಯನ್ನು ಉತ್ತೇಜಿಸಲು ತರಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದರು.
ತೋಮರ್ ಹಾಡಿದ ಅದೇ ರಾಗ, ಅದೇ ಹಾಡು
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭದಾಯವಾಗಿದ್ದು, ಅನ್ನದಾತರ ಪರವಾಗಿವೆ ಎಂಬುದಕ್ಕೆ ದೇಶವೇ ಸಾಕ್ಷಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು. "ಮೂರು ಕೃಷಿ ಕಾಯ್ದೆಗಳ ಬಗ್ಗೆ ಈ ಹಿಂದೆಯೂ ನಾವು ಚರ್ಚೆ ನಡೆಸಿದ್ದೇವೆ. ರೈತರಿಗೆ ಈ ಕಾಯ್ದೆಗಳಲ್ಲಿ ಲೋಪದೋಷಗಳು ಕಂಡು ಬಂದರೆ ಅದನ್ನು ಪ್ರಸ್ತಾಪ ಮಾಡಲಿ. ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ನಾವು ಸಿದ್ಧವಾಗಿದ್ದೇವೆ," ಎಂದು ತೋಮರ್ ತಿಳಿಸಿದ್ದರು.
ದೆಹಲಿಯ ಗಡಿಯಲ್ಲಿ ರೈತರ ಹೋರಾಟ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.