ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ
ನವದೆಹಲಿ, ಮಾರ್ಚ್ 16: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಸೋಂಕಿನಿಂದ ವಿಶ್ವದಾದ್ಯಂತ ಇಲ್ಲಿಯವರೆಗೂ 6518 ಮಂದಿ ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ 169,612 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಅದರಲ್ಲಿ 77,776 ಮಂದಿ ಗುಣಮುಖರಾಗಿದ್ದಾರೆ.
Recommended Video
ಭಾರತದಲ್ಲಿ ಇಲ್ಲಿಯವರೆಗೂ 114 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ ಈಗಾಗಲೇ 13 ಮಂದಿ ಸಾವನ್ನೇ ಗೆದ್ದು ಬಂದಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವಿನ ಮನೆಯಿಂದ ಎದ್ದು ಬಂದ 45 ವರ್ಷದ ದೆಹಲಿಯ ಉದ್ಯಮಿ ತಮ್ಮ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.
ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!
ಹಾಗ್ನೋಡಿದ್ರೆ, ಕೊರೊನಾ ಸೋಂಕು ದೆಹಲಿಯಲ್ಲಿ ಮೊಟ್ಟ ಮೊದಲು ದೃಢಪಟ್ಟಿದ್ದು 45 ವರ್ಷದ ದೆಹಲಿಯ ಉದ್ಯಮಿಗೆ (ಹೆಸರು ಬಹಿರಂಗ ಪಡಿಸಿಲ್ಲ). 15 ದಿನಗಳ ಕಾಲ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯಮನ ಪಾಶದಿಂದ ದೆಹಲಿಯ ಉದ್ಯಮಿ ತಪ್ಪಿಸಿಕೊಂಡಿದ್ದಾರೆ.
ಭಯಪಡುವ ಅಗತ್ಯ ಇಲ್ಲ
''ಕೊರೊನಾ ವೈರಸ್ ಸೋಂಕಿಗೆ ಭಯಪಡುವ ಅಗತ್ಯ ಇಲ್ಲ. ಅದು ಸಾಮಾನ್ಯ ಜ್ವರದಂತೆಯೇ. ನಾನು ಫೆಬ್ರವರಿ 25 ರಂದು ಯೂರೋಪ್ ನಿಂದ ಭಾರತಕ್ಕೆ ವಾಪಸ್ ಬಂದೆ. ಮಾರನೇ ದಿನ ನನಗೆ ಜ್ವರ ಕಾಣಿಸಿಕೊಳ್ತು. ವೈದ್ಯರ ಬಳಿಗೆ ತೆರಳಿದಾಗ ಗಂಟಲು ಸೋಂಕಿದೆ ಎಂದು ತಿಳಿಸಿದರು. ಮೂರು ದಿನಗಳಿಗಾಗಿ ಔಷಧಿ ನೀಡಿದರು. ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು''
ಮತ್ತೆ ಜ್ವರ ಬಂತು
''ಫೆಬ್ರವರಿ 29 ರಂದು ನನಗೆ ಮತ್ತೆ ಜ್ವರ ಕಾಣಿಸಿಕೊಳ್ತು. ಹೀಗಾಗಿ ನಾನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿದೆ. ಮಾರ್ಚ್ 1 ರಂದು ಕೋವಿಡ್-19 ಪಾಸಿಟಿವ್ ಎಂಬ ರಿಪೋರ್ಟ್ ಬಂತು. ದೆಹಲಿಯ ಸಫ್ದಾರ್ಜಂಗ್ ಆಸ್ಪತ್ರೆಗೆ ನನ್ನನ್ನು ಶಿಫ್ಟ್ ಮಾಡಲಾಯಿತು. ಅಲ್ಲಿನ ವೈದ್ಯರು ನನ್ನನ್ನು ನೋಡಲು ಬಂದಾಗ, ''ನೀವು ಆರೋಗ್ಯವಾಗಿದ್ದೀರಾ. ಚಿಂತೆ ಬಿಡಿ. ಕೆಮ್ಮು-ನೆಗಡಿ ವಾಸಿಯಾಗಲು ಸ್ವಲ್ಪ ಸಮಯ ಹಿಡಿಯುತ್ತದೆ'' ಎಂದು ಧೈರ್ಯ ತುಂಬಿದರು''
ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ
''ಸಾಮಾನ್ಯ ನೆಗಡಿ ಮತ್ತು ಕೆಮ್ಮಿಗೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ ಎಂಬುದು ನಿಜ. ಸಫ್ದಾರ್ಜಂಗ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿದ್ದು ನಾನು ಚಿಕಿತ್ಸೆ ಪಡೆದೆ. ಅಲ್ಲಿನ ಸೌಲಭ್ಯಗಳು ಚೆನ್ನಾಗಿತ್ತು. ಬಾತ್ ರೂಮ್ ಇರುವ ಪ್ರತ್ಯೇಕ ಕೊಠಡಿಯನ್ನ ನನಗೆ ನೀಡಲಾಗಿತ್ತು'' ಎಂದು ತಮ್ಮ ಅನುಭವನ್ನು ದೆಹಲಿಯ ಉದ್ಯಮಿ ಹಂಚಿಕೊಂಡಿದ್ದಾರೆ.
ಕೊರೊನಾದಿಂದ 68,313 ಮಂದಿ ಗುಣಮುಖ: ಆದರೂ ಕ್ಷೀಣಿಸದ ಭಯ!
ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಚ್
15 ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆದ 45 ವರ್ಷದ ದೆಹಲಿ ಉದ್ಯಮಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಅವರಿಗೆ ಇನ್ನೂ 14 ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಭಾರತದಲ್ಲಿ ಕೊರೊನಾ
ಭಾರತದಲ್ಲಿ ಈಗ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೆ ಏರಿದೆ. ಕೇರಳ ಮತ್ತು ಮಹಾರಾಷ್ಟ್ರಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ನಿಂದಾಗಿ ಭಾರತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.