ದೆಹಲಿ ಸಾಮೂಹಿಕ ಆತ್ಮಹತ್ಯೆ: ಪೋಸ್ಟ್ ಮಾರ್ಟಮ್ ವರದಿ ಏನು ಹೇಳುತ್ತೆ?
ದೆಹಲಿ, ಜುಲೈ 11: ಕುತೂಹಲ ಕೆರಳಿಸಿರುವ ದೆಹಲಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಗಳು ಬಂದಿದ್ದು, ಹನ್ನೊಂದರಲ್ಲಿ 10 ಜನ ನೇಣು ಬಿಗಿದುಕೊಂಡೇ ಸತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕುಟುಂಬದ ಹಿರಿಯ ಮಹಿಳೆ ನಾರಾಯಣ ದೇವಿ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. 10 ಜನರ ದೇಹದ ಮೇಲೂ ಯಾವುದೇ ರೀತಿಯ ಗಾಯದ ಗುರುತುಗಳು ಕಂಡು ಬಂದಿಲ್ಲವಾದ್ದರಿಂದ ಇದನ್ನು ಆತ್ಮಹತ್ಯೆ ಎಂದೇ ಪೋಸ್ಟ್ ಮಾರ್ಟಮ್ ವರದಿಗಳು ಹೇಳುತ್ತಿವೆ.
ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ
ಆದರೆ ನಾರಾಯಣ ದೇವಿ(77)ಯವರ ದೇಹ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿತ್ತಾದ್ದರಿಂದ ಅವರದ್ದು ಸಹಜ ಸಾವು ಹೌದೋ, ಅಲ್ಲವೋ ಎಂಬ ತನಿಖೆ ನಡೆಯುತ್ತಿದೆ. ಅವರಿಗೆ ಸ್ಟೂಲ್ ಹತ್ತಲು ಸಾಧ್ಯವಾಗದ ಕಾರಣ ಅವರನ್ನು ಮನೆಯ ಸದಸ್ಯರೇ ಒಬ್ಬರು ಕತ್ತು ಹಿಡಿದು ಸಾಯಿಸಿ, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.