ಬುರಾರಿ ಸಾಮೂಹಿಕ ಆತ್ಮಹತ್ಯೆ: ಮತ್ತೊಂದು ಸ್ಫೋಟಕ ಮಾಹಿತಿ
ದೆಹಲಿಯ ಬುರಾರಿಯಲ್ಲಿ ನಡೆದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಚಿತ್ರ-ವಿಚಿತ್ರ ಸುದ್ದಿಗಳು ಹೊರಬರುತ್ತಲೇ ಇವೆ. ಇದೀಗ ಬಂದ ತಾಜಾ ಮಾಹಿತಿಯ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಕುಟುಂಬದ ಹಿರಿಯ ಮಹಿಳೆ ನಾರಾಯಣ ದೇವಿ ಸಹ ನೇಣು ಬಿಗಿದುಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ದೃಢವಾಗಿದೆ.
ನಾರಾಯಣ ದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅವರ ಶವವೇಕೆ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂಬುದು ಈಗ ಅರ್ಥವಾಗದ ವಿಷಯವಾಗಿ ಉಳಿದಿದೆ.
ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ
10 ಜನರ ಮರಣೋತ್ತರ ಪರೀಕ್ಷೆ ವರದಿಯೂ 'ನೇಣು ಬಿಗಿದುಕೊಂಡೇ ಸಾವಿಗೀಡಾಗಿದ್ದನ್ನು' ಸಾಬೀತು ಪಡಿಸಿತ್ತು. ಆದರೆ ನಾರಾಯಣ ದೇವಿ(77) ಅವರ ಮರಣೋತ್ತರ ಪರೀಕ್ಷೆ ವರದಿಯನ್ನು ಕಾಯ್ದಿರಿಸಲಾಗಿತ್ತು.
ನೆಲದ ಮೇಲೆ ಬಿದ್ದಿದ್ದ ನಾರಾಯಣ ದೇವಿ ಶವ
ನಾರಾಯಣ ದೇವಿ ಅವರು ದೆಹಲಿಯ ಬುರಾರಿಯಲ್ಲಿರುವ ಬಾಟಿಯಾ ಕುಟುಂಬದ ಹಿರಿಯ ಮಹಿಳೆ. ಇವರ ಪತಿ ತೀರಿಹೋಗಿ ಹತ್ತು ವರ್ಷವಾಗಿತ್ತು. ತುಂಬು ಕುಟುಂಬದಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆಗಿದ್ದ ನಾರಾಯಣ ದೇವಿ, ಜೂನ್ 30-ಜುಲೈ 1ರ ನಡುವೆ ನಡೆದ 11 ಜನರ ಆತ್ಮಹತ್ಯೆ ದುರಂತದಲ್ಲಿ ತಮ್ಮ ಮನೆಯ ನೆಲದ ಮೇಲೆ ಬಿದ್ದಿದ್ದ ಸ್ಥಿತಿಯಲ್ಲಿ ಮೃತರಾಗಿದ್ದರು. ಉಳಿದ ಸದಸ್ಯರು ನೇಣು ಹಾಕಿಕೊಂಡು ಸಾವಿಗೀಡಾಗಿದ್ದರು. ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು.
ದೆಹಲಿ ಸಾಮೂಹಿಕ ಆತ್ಮಹತ್ಯೆ: ಪೋಸ್ಟ್ ಮಾರ್ಟಮ್ ವರದಿ ಏನು ಹೇಳುತ್ತೆ?
ನಾರಾಯಣ ದೇವಿ ಶವದ ಪಕ್ಕ ಸಿಕ್ಕ ಬೆಲ್ಟು!
ನಾರಾಯಣ ದೇವಿ ಅವರ ಶವದ ಪಕ್ಕ ಬೆಲ್ಟೊಂದು ಬಿದ್ದಿರುವುದು ಪೊಲೀಸರಿಗೆ ಕಾಣಿಸಿತ್ತು. 'ನಾರಾಯಣ ದೇವಿ ಆವರಿಗೆ ವಯಸ್ಸಾಗಿದ್ದರಿಂದ, ಅವರಿಗೆ ಸ್ಟೂಲ್ ಹತ್ತಲು ಕಷ್ಟವಾಗಿತ್ತು. ಆದ್ದರಿಂದ ಬಹುಶಃ ಅವರನ್ನು ಮನೆ ಜನರೇ ಯಾರೋ ಕೊಂದು, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು' ಮೇಲ್ನೋಟಕ್ಕೆ ಅನ್ನಿಸುತ್ತಿತ್ತು. ಬೆಲ್ಟನ್ನು ನಾರಾಯಣ ದೇವಿ ಆವರ ಕತ್ತಿಗೆ ಸುತ್ತಿ ಉಸಿರುಗಟ್ಟಿಸಿ ಸಾಯಿಸಿರಬಹುದೆಂದು ಅಂದಾಜಿಸಲಾಗಿತ್ತು.
ಮರಣೋತ್ತರ ಪರೀಕ್ಷೆ ವರದಿಯ ಅರ್ಥವೇನು?
ಈಗ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹನ್ನೊಂದು ಜನರೂ ನೇಣು ಬಿಗಿದುಕೊಂಡೇ ಸಾವಿಗೀಡಾಗಿದ್ದಾರೆಂಬುದು ಸಾಬೀತಾಗಿದೆ. ಹಾಗಾದರೆ ನಾರಾಯಣ ದೇವಿಯವರ ಶವ ಸಹ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಬೇಕಿತ್ತು. ಅವರ ದೇಹ ನೆಲದ ಮೇಲೆ ಬಿದ್ದಿದ್ದಿದ್ದು ಹೇಗೆ? ಅವರನ್ನು ಬೇರೆ ಯಾರಾದರೂ ಸಾಯಿಸಿದ್ದರೆ, ಅವರು ಪ್ರತಿರೋಧಿಸುವ ಸಮಯದಲ್ಲಿ ಮೈಮೇಲೆ ಸಣ್ಣ ಗಾಯವಾದರೂ ಆಗುತ್ತಿತ್ತು. ಅವರು ಸಾಯುವುದಕ್ಕೆ ಸಿದ್ಧವಿದ್ದರೂ, ಬಲವಂತವಾಗಿ ಸಾಯಿಸುವಾಗ ಅವರು ಸ್ವಲ್ಪವಾದರೂ ಪ್ರತಿರೋಧ ವ್ಯಕ್ತಪಡಿಸಿರುತ್ತಿದ್ದರು. ಆಗ ಮೈಮೇಲೆ ತೀರಾ ಅಲ್ಲದಿದ್ದರೂ, ಕೊಂಚವಾದರೂ ಗಾಯವಾಗುತ್ತಿತ್ತು. ಆದರೆ ಅವರ ಮೇಲೆ ಮಾತ್ರವಲ್ಲ, ಕುಟುಂಬದ ಯಾವ ಸದಸ್ಯರ ಮೈಮೇಲೂ ಗಾಯದ ಕಲೆಯಿಲ್ಲ. ಆದ್ದರಿಂದ ಇದು ಬಲವಂತದಿಂದ ಮಾಡಿದ ಕೃತ್ಯವಲ್ಲ ಎನ್ನುತ್ತದೆ ಪೋಸ್ಟ್ ಮಾರ್ಟಮ್ ವರದಿ.
ಗುಟ್ಟನ್ನು ರಟ್ಟು ಮಾಡೀತೇ ಸೈಕಾಲಾಜಿಕಲ್ ಅಟಾಪ್ಸಿ?
ಘಟನೆಗೆ ಸಂಬಂಧಿಸಿದಂತೆ ಪೊಲಿಸರು ಸೈಕಾಲಾಜಿಕಲ್ ಅಟಾಪ್ಸಿ ಮಾಡಲು ನಿರ್ಧರಿಸಿದ್ದಾರೆ. ಅಂದರೆ ಮೃತರ ಸಮಂಬಂಧಿಕರ, ಸ್ನೇಹಿತರ ಸಂದರ್ಶನ ಮಾಡಲಾಗುತ್ತದೆ. ಸಾಯುವ ಕೊನೆಯ ದಿನಗಳಲ್ಲಿ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನೂ ಈ ಮಾನಸಿಕ ಅಟಾಪ್ಸಿಯ ಮೂಲಕ ತಿಳಿಯಲಾಗುತ್ತದೆ. ಮನೆಯಲ್ಲಿ ಸಸಿಕ್ಕ ಹನ್ನೊಂದು ಡೈರಿಗಳು ಅದರಲ್ಲಿರುವ ಚಿತ್ರ-ವಿಚಿತ್ರ ಸಂಕೇತಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಏನಿದು ಘಟನೆ?
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.