ದೆಹಲಿ ಹಿಂಸಾಚಾರಕ್ಕೆ ಪ್ರಚೋದಿಸಿದವರ ವಿರುದ್ಧವೇಕಿಲ್ಲ ಎಫ್ಐಆರ್?
ನವದೆಹಲಿ, ಫೆಬ್ರವರಿ.29: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ ಮತ್ತು ವಿರೋಧಿ ಪ್ರತಿಭಟನೆಯಲ್ಲಿ ರಾಷ್ಟ್ರ ರಾಜಧಾನಿಯೇ ಹೊತ್ತಿ ಉರಿದಿದೆ. ಇದುವರೆಗೂ 42 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರ ಪ್ರಕರಣವನ್ನು ಎರಡು ಎಸ್ಐಟಿ ತಂಡಗಳು ತನಿಖೆ ನಡೆಸುತ್ತಿವೆ.
ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 123 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಕನಿಷ್ಠ 630 ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಪ್ರಚೋದನಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ದೆಹಲಿ ಹಿಂಸಾಚಾರ: ಪ್ರಚೋದನಾತ್ಮಕ ಹೇಳಿಕೆ ಬಗ್ಗೆ ಪೊಲೀಸರ ವಾದವೇನು?
ರಾಷ್ಟ್ರ ರಾಜಧಾನಿ ಹೊತ್ತಿ ಉರಿಯಲು ಕಾರಣವಾಗಿದ್ದೇ ಕೆಲವು ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳು. ಅಂಥವರ ವಿರುದ್ಧ ತನಿಖಾಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದವರ ಹೆಸರನ್ನು ಸೇರಿಸಲಾಗಿದೆಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಹಿಂಸಾಚಾರ ಪ್ರಚೋದಕರ ವಿರುದ್ಧ ಕ್ರಮಕ್ಕೆ ಒತ್ತಾಯ:
ಕಳೆದ ಫೆಬ್ರವರಿ.23 ರಿಂದ 26ವರೆಗೂ ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಬಿಜೆಪಿ ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗೂ ಕಾರಣ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ದೂರಿದ್ದಾರೆ. ಜನರನ್ನು ಹಿಂಸೆಗೆ ಪ್ರೇರೇಪಿಸಿದವರ ವಿರುದ್ಧ ಎಸ್ಐಟಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಎಫ್ಐಆರ್ ನಲ್ಲಿ ತಪ್ಪಿತಸ್ಥರ ಹೆಸರನ್ನೂ ಸಹ ಸೇರಿಸಬೇಕು ಎಂದು ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಎಫ್ಐಆರ್ ದಾಖಲಿಸಲು ಸೂಚಿಸಿದ್ದ ಹೈಕೋರ್ಟ್:
ದೆಹಲಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವಂತಾ ಹೇಳಿಕೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಮತ್ತು ಬಿಜೆಪಿ ಮುಖಂಡ ಪರ್ವೇಜ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ಕೂಡಾ ಸೂಚನೆ ನೀಡಿತ್ತು. 1984ರಲ್ಲಿ ನಡೆದ ಸಿಖ್ ದಂಗೆಯಂತಾ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹೈಕೋರ್ಟ್ ಬುಧವಾರ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿತ್ತು.