ದೆಹಲಿ ಹಿಂಸಾಚಾರ: ಪ್ರಚೋದನಾತ್ಮಕ ಹೇಳಿಕೆ ಬಗ್ಗೆ ಪೊಲೀಸರ ವಾದವೇನು?
ನವದೆಹಲಿ, ಫೆಬ್ರವರಿ.27: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನಕಾರಿ ಹೇಳಿಕೆ ನೀಡಿದ ನಾಯಕರ ಪಟ್ಟಿ ಸಿದ್ಧಪಡಿಸಿ ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಹೈಕೋರ್ಟ್ ಒಂದು ತಿಂಗಳ ಕಾಲಾವಕಾಶ ನೀಡಿದೆ.
ಗುರುವಾರ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ಸಿ. ಹರಿಶಂಕರನ್ ನೇತೃತ್ವದ ದ್ವಿಸದಸ್ಯ ಪೀಠ ಮುಂದಿನ ಎಪ್ರಿಲ್.13ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ದೆಹಲಿ ಹಿಂಸಾಚಾರ: ಮದುವೆಯಾಗಿ 13 ದಿನಕ್ಕೆ ಪತಿಯ ಕಳೆದುಕೊಂಡ ಪತ್ನಿ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಗೆ ಸಂಬಂಧಿಸಿದಂತೆ ಪರ ವಿರೋಧ ಪ್ರತಿಭಟನೆ ಹಿಂಸಾತ್ಮಕ್ಕೆ ತಿರುಗಿದ್ದು ಘರ್ಷಣೆಯಲ್ಲಿ ಇದುವರೆಗೂ 34 ಮಂದಿ ಬಲಿಯಾಗಿದ್ದರೆ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೆಹಲಿ ಪೊಲೀಸ್ ಪರ ಸ್ಯಾಲಿಸಿಟರಿ ಜನರಲ್ ವಾದ ಮಂಡನೆ
ಪೊಲೀಸರ ಪರ ಸ್ಯಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದು, ಅರ್ಜಿದಾರರು ಕೇವಲ ಮೂವರು ನಾಯಕರು ನೀಡಿದ ಪ್ರಚೋದನಕಾರಿ ಹೇಳಿಕೆ ಬಗ್ಗೆ ಮಾತ್ರ ಉಲ್ಲೇಖಿಸಿದ್ದಾರೆ. ಉಳಿದಂತೆ ಬೇರೆ ಯಾರಾದರೂ ಅಂಥ ಪ್ರಚೋದನಕಾರಿ ಹೇಳಿಕೆ ನೀಡಿರುವವರ ಬಗ್ಗೆ ಪಟ್ಟಿ ಮಾಡಲು ಕಾಲಾವಕಾಶ ನೀಡುವಂತೆ ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡರು.
ಯಾವ ರಾಜಕಾರಣಿಗಳ ವಿರುದ್ಧವೂ ಎಫ್ಐಆರ್ ಇಲ್ಲ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ಪರ ಅಥವಾ ವಿರುದ್ಧವಾಗಿ ಪ್ರಚೋದಕಾರಿ ಹೇಳಿಕೆ ನೀಡಿದ ನಾಯಕರ ವಿರುದ್ಧ ಈ ಹಂತದಲ್ಲಿ ಎಫ್ಐಆರ್ ದಾಖಲು ಮಾಡುವುದು ಸೂಕ್ತವಲ್ಲ. ಏಕೆಂದರೆ ದೆಹಲಿಯಲ್ಲಿ ಅದರಿಂದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಯಾವುದೇ ರೀತಿ ಸಹಾಯ ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಯ ಮೂವರ ವಿರುದ್ಧ ಎಫ್ಐಆರ್ ಗೆ ಸೂಚನೆ
ದೆಹಲಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವಂತಾ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಮತ್ತು ಬಿಜೆಪಿ ಮುಖಂಡ ಪರ್ವೇಜ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಜೊತೆಗೆ 1984ರಲ್ಲಿ ನಡೆದ ಸಿಖ್ ದಂಗೆಯಂತಾ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹೈಕೋರ್ಟ್ ಬುಧವಾರ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿತ್ತು. ತಪ್ಪಿತಸ್ಥರ ವಿರುದ್ಧ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು.
48 ಮಂದಿ ವಿರುದ್ಧ ಎಫ್ಐಆರ್ ದಾಖಲು
ಕಳೆದ ಮೂರು ದಿನಗಳಲ್ಲಿ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರ ಇದೀಗ ಕೊಂಚ ಹತೋಟಿಗೆ ಬಂದಿದೆ. ಈವರೆಗೂ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 48 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ದೆಹಲಿ ಪೊಲೀಸರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.