ದೆಹಲಿ ಹಿಂಸಾಚಾರದ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ನವದೆಹಲಿ, ಫೆಬ್ರವರಿ.25: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ. ದೆಹಲಿಯಲ್ಲಿ ಶಾಂತಿ ಸ್ಥಾಪಿಸುವುದು ಎಲ್ಲರಿಗೂ ಬೇಕಾಗಿದ್ದು, ಈ ನಿಟ್ಟಿನಲ್ಲಿ ತುರ್ತುಸಭೆಯಲ್ಲಿ ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
Recommended Video
ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡೆಸಿದ ತುರ್ತುಸಭೆ ಬಳಿಕ ಮಾಧ್ಯಮಗಳಿಗೆ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಅಗತ್ಯವೆನಿಸಿದ ಕಡೆಯಲ್ಲಿ ಭದ್ರತೆ ಒದಗಿಸಲು ಗೃಹ ಸಚಿವಾಲಯ ಸಮ್ಮತಿಸಿದೆ.
ದೆಹಲಿಯ ಹಿಂಸಾಚಾರ ಫೋಟೋ ಜರ್ನಲಿಸ್ಟ್ ಕಂಡಂತೆ
ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಆದೇಶ ಬರುವರೆಗೂ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಬರುವುದಿಲ್ಲ. ಇಂಥ ಪರಿಸ್ಥಿತಿಯನ್ನು ದೆಹಲಿ ಪೊಲೀಸರು ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇನೆ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು.
ದೆಹಲಿಯಲ್ಲಿ ಪೊಲೀಸರ ಕೈಕಟ್ಟಿ ಹಾಕಿದಂತಾ ಪರಿಸ್ಥಿತಿ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ-ವಿರೋಧದ ವಿಚಾರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ, ಕಲ್ಲುತೂರಾಟ ನಡೆಸುತ್ತಿದ್ದರೂ, ಪೊಲೀಸರು ತುರ್ತು ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಹಿರಿಯ ಅಧಿಕಾರಿಗಳ ಅನುಮತಿಗಾಗಿ ಕಾದು ನಿಲ್ಲುವಂತಾ ಪರಿಸ್ಥಿತಿಯಿದೆ. ಇದರಿಂದ ಪೊಲೀಸರಿಗೂ ತೊಂದರೆ ಎದುರಾಗುತ್ತಿದೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಕೇಜ್ರಿವಾಲ್ ತಿಳಿಸಿದರು.
ದೆಹಲಿಯಲ್ಲಿ ಸೃಷ್ಟಿಯಾದ ದುಸ್ಥಿತಿ ಬಗ್ಗೆ ಸಿಎಂ ವಿಷಾದ
ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಪ್ರಾಣ ಬಿಟ್ಟ ಪೊಲೀಸ್ ಕಾನ್ಸ್ ಟೇಬಲ್ ರತನ್ ಲಾಲ್ ಹಾಗೂ ಡಿಸಿಪಿ ಸೇರಿದಂತೆ ಗಾಯಗೊಂಡ ಎಲ್ಲ ಪೊಲೀಸರು ಕೂಡಾ ದೆಹಲಿಯ ಪ್ರಜೆಗಳು. ರಾಷ್ಟ್ರ ರಾಜಧಾನಿಯಲ್ಲಿಯೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಉತ್ತಮ ಬೆಳವಣಿಗೆಯಲ್ಲ. ಬೆಂಕಿಗೆ ಆಹುತಿಯಾದ ಅಂಗಡಿ ಮತ್ತು ಮನೆಗಳೆಲ್ಲ ಒಂದಲ್ಲ ಒಂದು ಕುಟುಂಬದ ಭಾಗವಾಗಿವೆ ಎಂದು ಹೇಳಿದರು.
ದೆಹಲಿ ಹಿಂಸಾಚಾರದ ಹಿಂದೆ ಹೊರಗಿನವರ ಕೈವಾಡ
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಹೊರಗಿನಿಂದ ಬಂದವರ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಹೀಗಾಗಿ ಮುಂದಿನ ಕೆಲವು ದಿನಗಳವರೆಗೂ ದೆಹಲಿಗೆ ಆಗಮನಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ 7 ಸಾವು, 100 ಮಂದಿಗೆ ಗಾಯ
ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಇದುವರೆಗೂ ಒಬ್ಬ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ 7 ಮಂದಿ ಪ್ರಾಣ ಬಿಟ್ಟಿದ್ದಾರೆ. 10 ಮಂದಿ ಪೊಲೀಸರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 35 ಕಂಪನಿಗಳ ಪ್ಯಾರಾ ಮಿಲಿಟರಿ ಫೋರ್ಸ್ ನ್ನು ಈಶಾನ್ಯ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ದೆಹಲಿ ಪೊಲೀಸರ ವಿಶೇಷ ಪಡೆ, ಕ್ರೈಂ ಬ್ರ್ಯಾಂಚ್ ಸಿಬ್ಬಂದಿ, ಆರ್ಥಿಕ ಅಪರಾಧ ಪಡೆಯನ್ನು ನಿಯೋಜಿಸಲಾಗಿದೆ. ಇಷ್ಟಲ್ಲೇ ನೆರೆ ರಾಜ್ಯಗಳ ಪೊಲೀಸರನ್ನು ಭದ್ರತೆಗಾಗಿ ದೆಹಲಿಗೆ ಕರೆಸಿಕೊಳ್ಳಲಾಗಿದೆ.