ದೆಹಲಿ ಹಿಂಸಾಚಾರ: ಫೋಟೋ, ವಿಡಿಯೋ ನೀಡುವಂತೆ ಸಾರ್ವಜನಿಕರಿಗೆ ಮನವಿ
ನವದೆಹಲಿ, ಫೆಬ್ರವರಿ.28: ನಾಲ್ಕು ದಿನಗಳಿಂದ ಹಿಂಸಾಚಾರದಿಂದ ಹೊತ್ತಿ ಉರಿದ ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ ವಾತಾವರಣ ತಿಳಿಗೊಂಡಿದೆ. ಈಶಾನ್ಯ ಭಾಗದ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.
Recommended Video
ಸಾರ್ವಜನಿಕರು ಸುಳ್ಳು ಸುದ್ದಿ, ವಿಡಿಯೋ ಮತ್ತು ಫೋಟೋ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕಳೆದ ನಾಲ್ಕು ದಿನಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳಿದ್ದರೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ದೆಹಲಿಯ ನಡುರಸ್ತೆಯಲ್ಲಿ ಗನ್ ಹಿಡಿದು ಗುಂಡು ಹಾರಿಸಿದವನ ಬಂಧನವಾಗಿಲ್ಲ"
ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಎರಡು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ಈ ನಂಬರ್ ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಹೀಗೆ ಮಾಹಿತಿ ನೀಡಿದವರು ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ದೆಹಲಿಯ ಈಶಾನ್ಯ ಭಾಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ ಮತ್ತು ವಿರೋಧಿ ಪ್ರತಿಭಟನಾನಿರತರ ಗುಂಪಿನ ನಡುವೆ ಘರ್ಷಣೆ ಉಂಟಾಗಿತ್ತು. ಇದರಿಂದ ಕಳೆದ ಫೆಬ್ರವರಿ.23 ರಿಂದ ಫೆಬ್ರವರಿ.26ರವರೆಗೂ ರಾಷ್ಟ್ರ ರಾಜಧಾನಿ ಬೂದಿ ಮುಚ್ಚಿದ ಕೆಂಡದಂತೆ ಆಗಿತ್ತು.
ಇನ್ನು, ದೆಹಲಿ ಹಿಂಸಾಚಾರದಲ್ಲಿ ಈವರೆಗೂ 38 ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ವರದಿಯಾಗಿದೆ. ಗುರು ತೇಜ್ ಬಹದೂರ್ ಆಸ್ಪತ್ರೆಯಲ್ಲಿ 34, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ 3 ಮತ್ತು ಜಗ ಪರ್ವೇಶ್ ಚಂದೇರ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಳೆದ ನಾಲ್ಕು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಲು ಎರಡು ವಿಶೇಷ ತನಿಖಾ ತಂಡ(SIT)ವನ್ನು ರಚನೆ ಮಾಡಲಾಗಿದೆ.