ನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆ
ನವದೆಹಲಿ, ಫೆಬ್ರವರಿ 27: ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮಾ ಅವರ ದೇಹ ಚಾಂದ್ ಬಾಗ್ನ ಜಫ್ರಾಬಾದ್ನಲ್ಲಿನ ಚರಂಡಿಯಲ್ಲಿ ಬುಧವಾರ ಪತ್ತೆಯಾಗಿದೆ.
ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದ ನಿವಾಸಿಯಾಗಿದ್ದ ಅಂಕಿತ್ ಶರ್ಮಾ, ಅವರ ದೇಹ ಅತ್ಯಂತ ಗಲಭೆ ಪೀಡಿತ ಪ್ರದೇಶಗಳಲ್ಲಿ ಒಂದಾದ ಜಫ್ರಾಬಾದ್ನಲ್ಲಿ ಸಿಕ್ಕಿದೆ. ಅಂಕಿತ್ ಸಾವಿಗೆ ಎಎಪಿ ಮುಖಂಡ ತಾಹೀರ್ ಹುಸೇನ್ ಕಾರಣ ಎಂದು ಅವರ ತಂದೆ ರವೀಂದರ್ ಶರ್ಮಾ ಆರೋಪಿಸಿದ್ದಾರೆ.
ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ
ತಾಹೀರ್ ಹುಸೇನ್ ಮುಸ್ತಫಾಬಾದ್ನ ನೆಹರೂ ವಿಹಾರ್ ಪ್ರದೇಶದ ಎಎಪಿ ಕಾರ್ಪೊರೇಟರ್ ಆಗಿದ್ದಾರೆ. ಅಂಕಿತ್ ಶರ್ಮಾ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಅವರು ಕಲ್ಲು ತೂರಾಟದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
'ನನ್ನ ಮಗ ಮಂಗಳವಾರ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ತಾಹೀರ್ನ ಮನೆಯಿಂದ ಧಾವಿಸಿ ಬಂದ 15-20 ಜನರು ನನ್ನ ಮಗ ಹಾಗೂ ಇತರೆ ಕೆಲವರನ್ನು ಎಲ್ಲಿಗೋ ಎಳೆದೊಯ್ದರು. ಅವರನ್ನು ಬಿಡುಗಡೆ ಮಾಡಿಕೊಂಡು ಬರಲು ತೆರಳಿದ ಜನರ ಮೇಲೆ ಅವರು ಗುಂಡು ಹಾರಿಸಿದರು ಮತ್ತು ಪೆಟ್ರೋಲ್ ಬಾಂಬ್ಗಳಿಂದ ದಾಳಿ ನಡೆಸಿದರು. ಅವರ ಮೇಲೆ ಆಸಿಡ್ ಕೂಡ ಎಸೆದರು' ಎಂದು ರವೀಂದರ್ ಶರ್ಮಾ ಆರೋಪಿಸಿದ್ದಾರೆ.
ಹುಸೇನ್ ಕೈವಾಡ- ಕಪಿಲ್ ಮಿಶ್ರಾ
ಹುಸೇನ್ ನೇತೃತ್ವದಲ್ಲಿ ಕಲ್ಲು ತೂರಾಟಗಾರರು ನಡೆಸಿದ್ದಾರೆ ಎನ್ನಲಾದ ದಾಳಿಯ ವಿಡಿಯೋವನ್ನು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಹುಸೇನ್ ಅವರೇ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಮತ್ತು ಕಲ್ಲು ತೂರಾಟ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಂಕಿತ್ ಹತ್ಯೆಯ ಹಿಂದೆ ಹುಸೇನ್ ಕೈವಾಡ ಇದೆ ಎಂದು ಅವರ ಕುಟುಂಬ ಹೇಳಿದೆ ಎಂದು ತಿಳಿಸಿದ್ದಾರೆ.
|
ಕೇಜ್ರಿವಾಲ್ ಜತೆ ಸಂಪರ್ಕ
ಕಂದು ಬಣ್ಣದ ಅರೆ ಸ್ವೆಟರ್ ಧರಿಸಿ, ಲಾಠಿ ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಮನೆಯ ಮಹಡಿ ಮೇಲೆ ಇರುವುದನ್ನು ಈ ವಿಡಿಯೋ ತೋರಿಸುತ್ತದೆ. ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದು ಇದೇ ಹುಸೇನ್ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. ಈ ಗಲಭೆಯುದ್ದಕ್ಕೂ ಹುಸೇನ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.
ದೆಹಲಿ ಸಂಘರ್ಷ: ಹೆಡ್ ಕಾನ್ಸ್ಟೆಬಲ್ ಸಾವಿನ ಪ್ರಕರಣಕ್ಕೆ ತಿರುವು
|
ವಿಡಿಯೋದಲ್ಲಿ ಹೇಳಿಕೆ ದಾಖಲು
ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರ ಕಚೇರಿ ಕೂಡ ಇದೇ ರೀತಿಯ ಆರೋಪಗಳನ್ನು ಮಾಡುವ ವಿಡಿಯೋವನ್ನು ಹಂಚಿಕೊಂಡಿದೆ. ಮನೆಯೊಂದರ ಹಿಂಭಾಗದಿಂದ ದಟ್ಟವಾದ ಹೊಗೆ ಏಳುವುದು ಇದರಲ್ಲಿ ಕಾಣಿಸುತ್ತದೆ. ಮನೆ ಮಹಡಿ ಮೇಲೆ ದೊಣ್ಣೆಗಳನ್ನು ಹಿಡಿದ ವ್ಯಕ್ತಿಗಳು ನಿಂತಿದ್ದಾರೆ. ಈ ವಿಡಿಯೋವನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯದ್ದಾಗಿರಬಹುದಾದ ಹಿನ್ನೆಲೆ ಧ್ವನಿಯು, ಕಂದು ಬಣ್ಣದ ಸ್ವೆಟರ್ ಧರಿಸಿರುವುದು ತಾಹಿರ್ ಹುಸೇನ್ ಆಗಿದ್ದು, ಕಲ್ಲಿನ ಮೂಟೆಗಳನ್ನು ತಂದು ಕೆಳಗೆ ಇರುವ ಸಾರ್ವಜನಿಕರಿಗೆ ಹೊಡೆಯಲು ಆತನ ಜನರಿಗೆ ಹಣ ನೀಡುತ್ತಾನೆ. ರಾತ್ರಿಯಿಡೀ ಕಲ್ಲು ತೂರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳುವುದು ಕೇಳಿಸುತ್ತದೆ.
ಆರೋಪ ಅಲ್ಲಗೆಳೆದ ಎಎಪಿ
ಆದರೆ, ಎಎಪಿ ಮೂಲಗಳು ಈ ಆರೋಪವನ್ನು ಅಲ್ಲಗಳೆದಿವೆ. ಹುಸೇನ್ ಸೋಮವಾರ ತಮ್ಮ ಮನೆಯೊಳಗೇ ಎಂಟು ಗಂಟೆಗೂ ಹೆಚ್ಚು ಸಮಯ ಸಿಲುಕಿದ್ದರು ಎಂದು ಹೇಳಲಾಗಿದೆ. 'ಫೆ. 24ರಂದು ಅವರು ತಮ್ಮದೇ ಮನೆಯೊಳಗೆ ಸುಮಾರು ಎಂಟು ಗಂಟೆ ಸಿಲುಕಿಕೊಂಡಿದ್ದರು. ಅವರನ್ನು ಪೊಲೀಸರು ಹೊರಗೆ ಕರೆದುಕೊಂಡು ಹೋಗಿದ್ದರು' ಎಂದು ಎಎಪಿ ಮೂಲವೊಂದು ತಿಳಿಸಿದೆ.
ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು?
|
ನಾನು ಮನೆಗೇ ಹೋಗಿಲ್ಲ-ಹುಸೇನ್
ಬುಧವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಹುಸೇನ್, ಗುಂಪು ಹಿಂಸಾಚಾರದಲ್ಲಿ ತಾವು ಕೂಡ ಸಂತ್ರಸ್ತರಾಗಿದ್ದು, ಎರಡು ದಿನಗಳ ಹಿಂದೆ ಪೊಲೀಸರು ತಮ್ಮನ್ನು ರಕ್ಷಿಸಿದ್ದಾಗಿ ಹೇಳಿಕೊಂಡಿದ್ದಾರೆ. ಗುಂಪೊಂದು ತಮ್ಮ ಮನೆಯನ್ನು ಮುತ್ತಿಗೆ ಹಾಕಿತ್ತು. ದಾಳಿಗಳನ್ನು ನಡೆಸಿತ್ತು. ಅಂದಿನಿಂದ ಮನೆಗೆ ವಾಪಸ್ ಹೋಗಿಲ್ಲ ಎಂದು ತಿಳಿಸಿದ್ದಾರೆ. ಹುಸೇನ್ ವಿರುದ್ಧದ ಆರೋಪಗಳ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
|
ಕ್ರಮ ಕೈಗೊಳ್ಳದ ಪೊಲೀಸರು
ಐಬಿಯಲ್ಲಿ ಭದ್ರತಾ ಸಹಾಯಕರಾಗಿರುವ ಅಂಕಿತ್ ಶರ್ಮಾ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಚಾಂದ್ ಬಾಗ್ ಸೇತುವೆ ಬಳಿ ಗುಂಪೊಂದು ದಾಳಿ ನಡೆಸಿ ಹೊಡೆದು ಕೊಲೆ ಮಾಡಿದೆ. ಬಳಿಕ ಅವರ ದೇಹವನ್ನು ಚರಂಡಿಗೆ ಎಸೆದಿದೆ ಎಂದು ಆರೋಪಿಸಲಾಗಿದೆ. ಕಳೆದ ರಾತ್ರಿಯೇ ದೂರು ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಬುಧವಾರ ಬೆಳಿಗ್ಗೆ ಮೊದಲ ದೂರು ದಾಖಲಿಸಿಕೊಳ್ಳಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.