ಅಧಿಕಾರಿಯ ದೇಹದ ಇಂಚಿಂಚೂ ಬಿಡದೆ 400 ಬಾರಿ ಇರಿದು ಕೊಂದರು
ನವದೆಹಲಿ, ಫೆಬ್ರವರಿ 28: ದೆಹಲಿಯಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು 400ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಕ್ರೂರವಾಗಿ ಇರಿದು ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಅಂಕಿತ್ ಶರ್ಮಾ ಅವರನ್ನು ಹೊತ್ತೊಯ್ದಿದ್ದ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ ಚಾಂದ್ ಬಾಗ್ನ ಚರಂಡಿಯೊಳಕ್ಕೆ ಎಸೆದಿದ್ದರು. ಅವರ ಮೃತದೇಹದ ಮೇಲೆ ಭಯಾನಕ ಗಾಯದ ಕಲೆಗಳು ಕಂಡುಬಂದಿದ್ದವು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಅವರ ದೇಹದ ಮೇಲೆ ಅತ್ಯಂತ ಕ್ರೂರವಾಗಿ ದಾಳಿ ನಡೆಸಿದ ಕುರುಹುಗಳು ಪತ್ತೆಯಾಗಿವೆ.
ನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆ
ಅಂಕಿತ್ ಶರ್ಮಾ ಅವರ ದೇಹವನ್ನು ಸುಮಾರು ನಾಲ್ಕರಿಂದ ಆರು ಗಂಟೆಯವರೆಗೆ ಚಾಕುವಿನಿಂದ ಸತತವಾಗಿ ಇರಿದು ಕೊಲ್ಲಲಾಗಿದೆ. ಆರು ಮಂದಿ ಒಟ್ಟಿಗೆ ಚಾಕುವಿನಿಂದ ಇರಿದಿರುವ ಸಾಧ್ಯತೆ ಇದೆ. ಅಂಕಿತ್ ಶರ್ಮಾ ಅವರ ದೇಹದ ಒಂದೇ ಒಂದು ಭಾಗವನ್ನೂ ಬಿಡದೆ ಪ್ರತಿ ಜಾಗವನ್ನೂ ಚುಚ್ಚಲಾಗಿದೆ ಎಂಬ ಎದೆನಡುಗಿಸುವ ಸಂಗತಿಯನ್ನು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಿದೆ.
ಚರಂಡಿಯಲ್ಲಿ ಅಂಕಿತ್ ದೇಹ ಪತ್ತೆ
2017ರಿಂದ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಸಹಾಯಕ ಭದ್ರತಾ ಅಧಿಕಾರಿಯಾಗಿದ್ದ ಅಂಕಿತ್ ಶರ್ಮಾ ಅವರು ಮಂಗಳವಾರ ಸಂಜೆ ಮನೆಗೆ ಮರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಬುಧವಾರ ನಸುಕಿನ 3 ಗಂಟೆಯವರಿಗೂ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಅವರ ಮೃತದೇಹ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಅಂಕಿತ್ ಶರ್ಮಾ ಅವರನ್ನು ಗುಂಪೊಂದು ಎಳೆದೊಯ್ದು ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದೆ ಎಂದು ಹೇಳಲಾಗಿತ್ತು. ಅವರನ್ನು ಸಾಯಿಸುವ ಮುನ್ನ ಕ್ರೂರವಾಗಿ ಹಿಂಸೆ ನೀಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.
ಎಎಪಿಯ ತಾಹಿರ್ ವಿರುದ್ಧ ಆರೋಪ
ಅಂಕಿತ್ ಶರ್ಮಾ ಅವರ ಸಾವಿಗೆ ಜಫ್ರಾಬಾದ್ನ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಕಾರಣ ಎಂದು ಅವರ ತಂದೆ ರವೀಂದರ್ ಶರ್ಮಾ ಆರೋಪಿಸಿದ್ದರು. ತಾಹಿರ್ ಬೆಂಬಲಿಗರು ತಮ್ಮ ಮಗನನ್ನು ಎಳೆದುಕೊಂಡು ಹುಸೇನ್ ಅವರಿಗೆ ಸೇರಿದ ಕಟ್ಟಡದೊಳಗೆ ಕರೆದೊಯ್ದಿದ್ದರು. ಬಳಿಕ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ ಎಂದು ದೂರು ನೀಡಿದ್ದರು. ತಾಹಿತ್ ಹುಸೇನ್ ಅವರು ತಮ್ಮ ಪ್ರದೇಶದಲ್ಲಿ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾದ ವಿಡಿಯೋಗಳನ್ನು ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದಾರೆ. ತಾಹಿರ್ ಮನೆ ಸಮೀಪದ ಚರಂಡಿಯಲ್ಲಿ ಮೃತದೇಹ ಸಿಕ್ಕಿತ್ತು.
ಗುಪ್ತಚರ ಇಲಾಖೆ ಅಧಿಕಾರಿ ಸಾವು: ಎಎಪಿ ಮುಖಂಡನ ಮೇಲೆ ಎಫ್ಐಆರ್
ತಾಹಿರ್ ಮನೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆ
ತಾಹಿರ್ ಹುಸೇನ್ ವಿರುದ್ಧ ರವೀಂದರ್ ಕುಮಾರ್ ಶರ್ಮಾ ಅವರ ದೂರಿನ ಅನ್ವಯ ದಯಾಳಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಗಲಭೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ತಾಹಿರ್ ಮನೆಯಿಂದ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ಎಸೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಪೊಲೀಸರು ತಾಹಿರ್ ನಿವಾಸವನ್ನು ಪರಿಶೀಲಿಸಿದಾಗ ಮಹಡಿಯ ಮೇಲೆ ಕಲ್ಲುಗಳು ಹಾಗೂ ಪೆಟ್ರೋಲ್ ಬಾಂಬ್ಗಳು ಪತ್ತೆಯಾಗಿವೆ. ಹೀಗಾಗಿ ಅವರ ನಿವಾಸವನ್ನು ವಶಕ್ಕೆ ಪಡೆದುಕೊಂಡು ಬೀಗಮುದ್ರೆ ಹಾಕಲಾಗಿದೆ.
ಎಎಪಿಯಿಂದ ತಾಹಿರ್ ಅಮಾನತು
ತಾಹಿರ್ ಹುಸೇನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷವು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಈ ಅಮಾನತು ಮುಂದುವರಿಯಲಿದೆ. ತಾಹಿರ್ ಅವರು ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡಿರುವುದು ದೃಢಪಟ್ಟರೆ ದುಪ್ಪಟ್ಟು ಶಿಕ್ಷೆ ವಿಧಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.