ಮಧ್ಯರಾತ್ರಿ ದೆಹಲಿ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್
ನವದೆಹಲಿ, ಫೆಬ್ರವರಿ.26: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ದೆಹಲಿ ಪೊಲೀಸರಿಗೆ ಖಡಕ್ ಸೂಚನೆಯನ್ನು ರವಾನಿಸಿದೆ.
ಮಂಗಳವಾರ ಮಧ್ಯರಾತ್ರಿ ವಕೀಲ ಸುರೂರ್ ಮಂದೇರ್ ಸಲ್ಲಿಸಿದ ರಿಟ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ತಮ್ಮ ನಿವಾಸದಲ್ಲಿಯೇ ತುರ್ತು ವಿಚಾರಣೆ ನಡೆಸಿದರು. ದೆಹಲಿಯಲ್ಲಿ ಹಿಂಸಾಚಾರ ತಡೆಗೆ ಸುರಕ್ಷಿತ ಮಾರ್ಗವನ್ನು ಅನುಸರಿಸುವಂತೆ ಸೂಚನೆ ನೀಡಿದರು.
ಶಾಹಿನ್ ಬಾಗ್ ಹೋರಾಟ: ಸುಪ್ರೀಂಕೋರ್ಟ್ ನಲ್ಲಿ ಬಗೆಹರಿಯುತ್ತಾ ಸಮಸ್ಯೆ?
ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ದೆಹಲಿ ಪೊಲೀಸರು ಈ ಬಗ್ಗೆ ಹೆಚ್ಚು ಗಮನ ಹರಿಸುವಂತೆ ನ್ಯಾಯಮೂರ್ತಿ ಎಸ್.ಮುರಳೀದರ್ ತಿಳಿಸಿದ್ದಾರೆ.
ಗಾಯಗೊಂಡವ ದುಸ್ಥಿತಿಯ ಬಗ್ಗೆ ರಿಟ್ ಅರ್ಜಿ:
ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ 13 ಮಂದಿ ಪ್ರಾಣ ಬಿಟ್ಟಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಗಾಯಾಳುಗಳ ಪರಿಸ್ಥಿತಿಯ ಬಗ್ಗೆ ವಕೀಲ ಸುರೂರ್ ಮಂದೇರ್ ತಮ್ಮ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಹಿಂಸಾಚಾರದಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಷ್ಟು ಅನುಕೂಲಸ್ಥರಾಗಿಲ್ಲ. ಈ ಹಿನ್ನೆಲೆಯಲ್ಲಿ ಗಾಯಾಳುಗಳ ಚಿಕಿತ್ಸೆಗೆ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ವಕೀಲರು ಮನವಿ ಮಾಡಿದ್ದರು.
ರಿಟ್ ಅರ್ಜಿಯನ್ನು ಪರಿಶೀಲಿಸಿದ ನ್ಯಾ.ಮುರಳೀಧರ್, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು ಪ್ರಾಥಮಿಕ ಮತ್ತು ಅಗತ್ಯ ಕ್ರಮವಾಗಿರಲಿ. ನವದೆಹಲಿಯ ಗುರು ತೇಜ್ ಬಹದ್ದೂರ್, ಲೋಕ ನಾಯಕ ಜೈಪ್ರಕಾಶ್ ನಾರಾಯಣ ಅಥವಾ ಮೌಲಾನಾ ಅಜರ್ ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.