ದೆಹಲಿಯ ನಡುರಸ್ತೆಯಲ್ಲಿ ಗುಂಡು ಹಾರಿಸಿದವನಿಗೆ ನ್ಯಾಯಾಂಗ ಬಂಧನ
ನವದೆಹಲಿ, ಮಾರ್ಚ್.10: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡುರಸ್ತೆಯಲ್ಲಿ ನಿಂತು ಫೈರಿಂಗ್ ನಡೆಸಿದ ಶಾರೂಕ್ ಎಂಬ ವ್ಯಕ್ತಿಯನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಮಂಗಳವಾರ ಆರೋಪಿ ಶಾರೂಕ್ ನನ್ನು ಪೊಲೀಸರು ದೆಹಲಿಯ ಕರ್ಕರ್ ದೂಮಾ ಕೋರ್ಟ್ ಗೆ ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ದೆಹಲಿ ಹಿಂಸಾಚಾರದ ಫೋಟೋ-ವಿಡಿಯೋ ಬಳಸಿ ಭಯೋತ್ಪಾದನೆಗೆ ಪ್ರಚೋದನೆ
ಕಳೆದ ಫೆಬ್ರವರಿ.24ರಂದು ದೆಹಲಿ ಈಶಾನ್ಯ ಭಾಗದಲ್ಲಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿತ್ತು. ಇನ್ನೊಂದಡೆ ಶಾರೂಕ್ ಎಂಬ ವ್ಯಕ್ತಿಯು ನಡುರಸ್ತೆಯಲ್ಲೇ ನಿಂತು ಎಂಟು ಸುತ್ತು ಗಾಳಿಯಲ್ಲಿ ಫೈರಿಂಗ್ ನಡೆಸಿದ್ದನು. ತದನಂತರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಹೊತ್ತಿ ಉರಿದಿದ್ದ ದೆಹಲಿ:
ಫೆಬ್ರವರಿ ಕೊನೆಯ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರ ಮತ್ತು ವಿರೋಧಿ ಹೋರಾಟಕ್ಕೆ ಇಡೀ ರಾಷ್ಟ್ರ ರಾಜಧಾನಿಯೇ ಹೊತ್ತಿ ಉರಿಯಿತು. ಎರಡು ಗುಂಪುಗಳ ನಡುವೆ ನಡೆದ ಸಂಘರ್ಷಕ್ಕೆ ಈಶಾನ್ಯ ದೆಹಲಿಯಲ್ಲಿ ಜನಜೀವನೇ ಅಸ್ತವ್ಯಸ್ತಗೊಂಡಿತು. 50ಕ್ಕೂ ಹೆಚ್ಚು ಮಂದಿ ಈ ಹಿಂಸಾಚಾರದಲ್ಲಿ ಪ್ರಾಣ ಬಿಟ್ಟಿದ್ದರು. ನೂರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದರು.