ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್ಎಫ್ ಮದುವೆ ಗಿಫ್ಟ್!
ನವದೆಹಲಿ, ಫೆಬ್ರವರಿ 29: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ನೂರಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಯಾರದ್ದೂ ದ್ವೇಷ, ದುಷ್ಕೃತ್ಯಕ್ಕೆ ಮನೆ ಕಳೆದುಕೊಂಡವರಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್ ಒಬ್ಬರು. ಮನೆ ಕಳೆದುಕೊಂಡು ನಿರ್ಗತಿಕರಾದ ಅನೀಸ್ ಕುಟುಂಬಕ್ಕೆ ಬಿಎಸ್ಎಫ್ ಸಹಾಯ ಹಸ್ತ ಚಾಚಿದೆ.
ಅನೀಸ್ ಅವರಿಗೆ ಹೊಸದಾಗಿ ಮನೆ ಕಟ್ಟಿಸಿಕೊಡುವುದಾಗಿ ಬಿಎಸ್ಎಫ್ ತಿಳಿಸಿದೆ. ಶನಿವಾರ ಅನೀಸ್ ಪೋಷಕರು ಮತ್ತು ಅವರ ಕುಟುಂಬದ ಇತರೆ ಸದಸ್ಯರನ್ನು ಭೇಟಿ ಮಾಡಿದ ಬಿಎಸ್ಎಫ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಪುಷ್ಪೇಂದ್ರ ರಾಥೋರ್, ಅನೀಸ್ ಅವರಿಗೆ ಬಿಎಸ್ಎಫ್ ಮನೆ ಕಟ್ಟಿಸಿಕೊಡಲಿದ್ದು, ಅದನ್ನು ಅವರ ಮದುವೆಯ ಉಡುಗೊರೆಯಾಗಿ ನೀಡಲಿದೆ ಎಂದು ತಿಳಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ನೂರಾರು ಮಂದಿ ತಮ್ಮ ಕಣ್ಣೆದುರೇ ತಮ್ಮ ಮನೆಗಳು ಸುಟ್ಟು ಭಸ್ಮವಾಗಿದ್ದನ್ನು ಕಂಡಿದ್ದಾರೆ. ಅನೀಸ್ ಅವರ ಕುಟುಂಬ ವಾಸವಿದ್ದ ನಿವಾಸದಲ್ಲಿ ಮನೆ ಸಂಖ್ಯೆ 76 ಎಂಬ ನಂಬರ್ ಪ್ಲೇಟ್ ಜತೆಗೆ ಇದು ಬಿಎಸ್ಎಫ್ನ ಮೊಹಮದ್ ಅನೀಸ್ ಅವರಿಗೆ ಸೇರಿದ ಮನೆ ಎಂದು ಹುದ್ದೆ ಸೂಚಕವೂ ಇದೆ. ಆದರೆ ಬೆಂಕಿ ಹಚ್ಚುವ ದುಷ್ಕರ್ಮಿಗಳಿಗೆ ಅವರು ದೇಶಸೇವೆ ಮಾಡುತ್ತಿದ್ದಾರೆ ಎಂಬುದೂ ಲೆಕ್ಕಕ್ಕೆ ಇರಲಿಲ್ಲ.
ಮೂರು ತಿಂಗಳಲ್ಲಿ ಎರಡು ಮದುವೆ
ಅನೀಸ್ ಕುಟುಂಬ ಮನೆಯಲ್ಲಿ ಇರಿಸಿದ್ದ ತಮ್ಮ ಬದುಕಿನ ಎಲ್ಲ ಆಧಾರಗಳನ್ನೂ ಕಳೆದುಕೊಂಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಅವರ ಕುಟುಂಬದಲ್ಲಿ ಎರಡು ಮದುವೆಗಳು ನಡೆಬೇಕಿದ್ದು, ಅದಕ್ಕಾಗಿ ಅಪಾರ ಪ್ರಮಾಣದ ವಸ್ತು, ಉಡುಪು ಮುಂತಾದವುಗಳನ್ನು ಖರೀದಿಸಿದ್ದರು. ಆದರೆ ಅಲ್ಲೀಗ ಉಳಿದಿರುವುದು ಅವುಗಳ ಬೂದಿ ಮಾತ್ರ. ಅನೀಸ್ ಸಹೋದರಿ ನೇಹಾ ಪರ್ವೀನ್ ಏಪ್ರಿಲ್ನಲ್ಲಿ ಮದುವೆಯಾಗಬೇಕಿದ್ದರೆ, ಅನೀಸ್ ಮದುವೆ ಮೇನಲ್ಲಿ ನಡೆಸಲು ನಿಶ್ಚಯವಾಗಿದೆ.
ದೆಹಲಿಗೆ ವರ್ಗಾವಣೆ
29 ವರ್ಷದ ಅನೀಸ್, ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪದ ರಾಧಾಬರಿಯಲ್ಲಿನ ಬಿಎಸ್ಎಫ್ ಶಿಬಿರದಲ್ಲಿ ಪ್ರಸ್ತುಕ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದವರ ಜತೆಗಿದ್ದು, ಮದುವೆ ಕಾರ್ಯದಲ್ಲಿ ತೊಡಗಲು ಅನುಕೂಲವಾಗುವಂತೆ ಶೀಘ್ರದಲ್ಲಿಯೇ ಅವರನ್ನು ದೆಹಲಿಗೆ ವರ್ಗಾವಣೆ ಮಾಡುವುದಾಗಿ ಬಿಎಸ್ಎಫ್ ತಿಳಿಸಿದೆ.
'ಗೋಲಿ ಮಾರೋ...' ಎಂದು ಮೆಟ್ರೋದಲ್ಲಿ ಕೂಗಿದ ಆರು ಮಂದಿ ಬಂಧನ
10 ಲಕ್ಷ ರೂ ಹಣಕಾಸಿನ ನೆರವು
'ಯೋಧನ ಮನೆಯು ಇತ್ತೀಚಿನ ಕೋಮು ಗಲಭೆಯಲ್ಲಿ ತೀವ್ರವಾಗಿ ಸುಟ್ಟುಹೋಗಿ ಹಾನಿಗೊಳಗಾಗಿದೆ. ಅದನ್ನು ಮರು ನಿರ್ಮಿಸಲು ಮತ್ತು ನವೀಕರಿಸಲು ಸಾಕಷ್ಟು ಕೆಲಸ ಮಾಡಬೇಕಿದೆ. ಅನೀಸ್ ಅವರಿಗೆ ನಮ್ಮ ಕಲ್ಯಾಣ ನಿಧಿಯಿಂದ 10 ಲಕ್ಷ ರೂ ಹಣಕಾಸಿನ ನೆರವು ನೀಡಲು ನಿರ್ಧರಿಸಲಾಗಿದೆ. ಜತೆಗೆ ನಮ್ಮ ಎಂಜಿನಿಯರಿಂಗ್ ಘಟಕವು ಅವರಿಗೆ ಇನ್ನು 14 ದಿನಗಳ ಒಳಗೆ ಮನೆ ಕಟ್ಟಿಸಿಕೊಡಲಿದೆ' ಎಂದು ಅಧಿಕಾರಿ ತಿಳಿಸಿದರು.
ಅಧಿಕಾರಿಗಳಿಗೆ ತಿಳಿಸಿದ ಅನೀಸ್
2013ರಲ್ಲಿ ಬಿಎಸ್ಎಫ್ ಸೇರಿಕೊಂಡಿದ್ದ ಅನೀಸ್, ಗಲಭೆಯಲ್ಲಿ ತಮ್ಮ ಮನೆ ಸುಟ್ಟುಹೋಗಿದೆ ಎಂಬ ಸಂಗತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಒಂದು ಮಾತು ಕೂಡ ಹೇಳಿರಲಿಲ್ಲ. ಆದರೆ ಬೇರೆ ಮೂಲದಿಂದ ಈ ಬಗ್ಗೆ ಮಾಹಿತಿ ಪಡೆದ ಬಿಎಸ್ಎಫ್ ಅದರ ನವೀಕರಣಕ್ಕೆ ಮುಂದಾಗಿದ್ದಾರೆ. ಅನೀಸ್ ಅವರು ಮದುವೆಗೆ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಆದಷ್ಟು ಬೇಗನೆ ಮನೆ ನಿರ್ಮಾಣ ಕಾರ್ಯ ಮುಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.