ದೆಹಲಿಯಲ್ಲಿ 'ಕಂಡಲ್ಲಿ ಗುಂಡು' ಆದೇಶ ಜಾರಿ
ನವದೆಹಲಿ, ಫೆಬ್ರವರಿ 25: ದೆಹಲಿಯಲ್ಲಿ ಕೈಮೀರುತ್ತಿರುವ ಹಿಂಸಾಚಾರವನ್ನು ತಹಬದಿಗೆ ತರಲು ಕಠಿಣ ಕ್ರಮವನ್ನು ದೆಹಲಿ ಪೊಲೀಸರು ಕೈಗೊಂಡಿದ್ದು, 'ಕಂಡಲ್ಲಿ ಗುಂಡು' ಆದೇಶವನ್ನು ಜಾರಿಗೊಳಿಸಲಾಗಿದೆ.
ಹಿಂಸಾಚಾರ ಹೆಚ್ಚು ನಡೆಯುತ್ತಿರುವ ಈಶಾನ್ಯ ದೆಹಲಿಯ ಭಾಗದಲ್ಲಿ ಕಂಡಲ್ಲಿ ಗುಂಡು ಆದೇಶ ಜಾರಿ ಮಾಡಲಾಗಿದ್ದು, ಯಾರೇ ರಸ್ತೆಯಲ್ಲಿ ಕಂಡರೆ ಅವರಿಗೆ ಗುಂಡು ಹೊಡೆಯಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ.
ದೆಹಲಿ ಹಿಂಸಾಚಾರಕ್ಕೆ 11 ಬಲಿ, 70 ಮಂದಿಗೆ ಗುಂಡೇಟು
ಈಶಾನ್ಯ ದೆಹಲಿಯ ಚಾಂದ್ ಬಾಗ್, ಭಜನ್ಪುರ ಮುಂತಾದ ಭಾಗಗಳಲ್ಲಿ ರಾತ್ರಿ ಆಗುತ್ತಿದ್ದಂತೆ ಹಿಂಸಾಚಾರ ಹೆಚ್ಚಾದ ಕಾರಣ ದೆಹಲಿ ಪೊಲೀಸರು ಈ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮೈಕ್ನಲ್ಲಿ ಪ್ರಕಟಿಸಿದ್ದಾರೆ ಎನ್ನಲಾಗಿದೆ.
ದೆಹಲಿ ಹಿಂಸಾಚಾರಕ್ಕೆ ಈಗಾಗಲೇ 11 ಮಂದಿ ಸಾವನ್ನಪ್ಪಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸಂಜೆ ವೇಳೆಗೆ ಮಾಲ್ ಗೆ ಬೆಂಕಿ ಹಚ್ಚಲಾಗಿದೆ.
ಆರು ಸಾವಿರಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿಯನ್ನು ದೆಹಲಿಯಲ್ಲಿ ನಿಯೋಜಿಸಲಾಗಿದೆ. ಸಿಆರ್ಪಿಎಫ್ ಯೋಧರನ್ನೂ ನಿಯೋಜಿಸಲಾಗಿದೆ.