ದೆಹಲಿ ವಿವಿ ಉಪ ಕುಲಪತಿ ಅಮಾನತು: ರಾಷ್ಟ್ರಪತಿ ಆದೇಶ
ನವದೆಹಲಿ, ಅಕ್ಟೋಬರ್ 28: ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಆದೇಶದಂತೆ ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿ ಯೋಗೇಶ್ ತ್ಯಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿರುವ ಯೋಗೇಶ್ ತ್ಯಾಗಿ ವಿರುದ್ಧ ವಿಚಾರಣೆ ನಡೆಸುವಂತೆಯೂ ರಾಷ್ಟ್ರಪತಿ ಆದೇಶಿಸಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಅಧಿಕಾರದ ಕಿತ್ತಾಟದ ನಡುವೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.
ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಷ್ಟ್ರಪತಿ, ತನಿಖೆಯು ನ್ಯಾಯೋಚಿತವಾಗಿ ನಡೆಯಬೇಕು ಮತ್ತು ತ್ಯಾಗಿ ಅವರು ಯಾವುದೇ ದಾಖಲೆಗಳನ್ನು ನಾಶಪಡಿಸಲು ಸಾಧ್ಯವಾಗದಂತೆ ಮತ್ತು ಸಾಕ್ಷ್ಯಗಳನ್ನು ಬೆದರಿಸದಂತೆ ತಡೆಯಲು ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಹೊಸ ಕಾನೂನು
'ಯೋಗೇಶ್ ತ್ಯಾಗಿ ಅವರು ವೈದ್ಯಕೀಯ ನೆಲೆಯಲ್ಲಿ ಅನುಪಸ್ಥಿತಿಯ ಅವಧಿಯಲ್ಲಿ ಹೊರಡಿಸಿದ ಆದೇಶಗಳನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ' ಎಂದು ಶಿಕ್ಷಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತ್ಯಾಗಿ ಅವರು ಜುಲೈ 2ರಿಂದ ರಜೆಯಲ್ಲಿದ್ದು, ತುರ್ತು ವೈದ್ಯಕೀಯ ಪರಿಸ್ಥಿತಿಗಾಗಿ ಏಮ್ಸ್ಗೆ ದಾಖಲಾಗಿದ್ದರು, ತ್ಯಾಗಿ ಅವರು ಕಚೇರಿಗೆ ಮರಳುವವರೆಗೂ ಹಂಗಾಮಿ ಉಪ ಕುಲಪತಿಯಾಗಿ ಪಿಸಿ ಜೋಷಿ ಅವರನ್ನು ಜುಲೈ 17ರಂದು ಸರ್ಕಾರ ನೇಮಿಸಿತ್ತು.
ಉಪ ಕುಲಪತಿಗಳು ಶಾಸನಬದ್ಧ ನಿಬಂಧನೆಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯದ ಕಾರ್ಯನಿರ್ವಹಿಸುತ್ತಿಲ್ಲ. ಇದು ದೆಹಲಿ ವಿವಿಯ ತಪ್ಪು ಆಡಳಿತ ಹಾಗೂ ಅಸಮರ್ಪಕ ನಿರ್ವಹಣೆಗೆ ಕಾರಣವಾಗಿದೆ. ಇದು ವಿಶ್ವವಿದ್ಯಾಲಯದ ಸೂಕ್ತ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಾತಾವರಣಕ್ಕೆ ಅನುಕೂಲಕರವಾಗಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹಂಗಾಮಿ ಉಪಕುಲಪತಿಯಾಗಿದ್ದ ಜೋಷಿ ಅವರನ್ನು ಕಿತ್ತುಹಾಕಿದ್ದ ತ್ಯಾಗಿ, ಅವರ ಜಾಗಕ್ಕೆ ಗೀತಾ ಭಟ್ ಅವರನ್ನು ನೇಮಿಸಿದ್ದರು. ಇದರಿಂದ ವಿವಾದ ಸೃಷ್ಟಿಯಾಗಿತ್ತು.