Breaking: ಐಸಿಸ್ ಸದಸ್ಯ ಎಂದು ಬಂಧನ, ನಿರಪರಾಧಿ ಎಂದ ಕುಟುಂಬ
ನವದೆಹಲಿ, ಆಗಸ್ಟ್ 07: ಆಗ್ನೇಯ ದಿಲ್ಲಿಯಲ್ಲಿ ಐಸಿಸ್ನ "ಸಕ್ರಿಯ ಸದಸ್ಯ" ಎಂದು ಆರೋಪಿಸಿ ದೇಶದ ಭಯೋತ್ಪಾದನಾ ನಿಗ್ರಹ ಸಂಸ್ಥೆ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದೆ. ಯುವಕನ ಕುಟುಂಬ ಆರೋಪವನ್ನು ಬಲವಾಗಿ ನಿರಾಕರಿಸಿದೆ.
ಮೊಹ್ಸಿನ್ ಅಹ್ಮದ್ ಮೂಲಭೂತವಾದಿಯಾಗಿದ್ದು, ಅವರು ಜಾಗತಿಕ ಭಯೋತ್ಪಾದಕ ಗುಂಪಿಗಾಗಿ ಹಣವನ್ನು ಸಂಗ್ರಹಿಸಿದರು. ಕ್ರಿಪ್ಟೋಕರೆನ್ಸಿಯನ್ನು ಬಳಸಿಕೊಂಡು ವಿವಿಧ ದೇಶಗಳಿಂದ ಹಣವನ್ನು ಸಿರಿಯಾಕ್ಕೆ ಕಳುಹಿಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ತಿಳಿಸಿದೆ.
ಮಯ್ಯಾಸ್ ಹೋಟೆಲ್ಗೆ ಕೆಲಸ ಕೇಳಿ ಹೋಗಿದ್ದ ಉಗ್ರ ಅಖ್ತರ್ ಹುಸೇನ್: ಎನ್ಐಎ ಮುಂದೆ ಬಾಯಿಬಿಟ್ಟ
ಆರೋಪವನ್ನು ತಳ್ಳಿಹಾಕಿದ ಅವರ ಕುಟುಂಬವು ನ್ಯಾಯಾಲಯದಲ್ಲಿ ಆರೋಪಗಳನ್ನು ಪ್ರಶ್ನಿಸುವುದಾಗಿ ಹೇಳಿದೆ. ಭಾನುವಾರ ಬೆಳಗ್ಗೆ ಪಾಟ್ನಾದಿಂದ ದೆಹಲಿಗೆ ಬಂಧಿತ ಯುವಕನ ಕುಟುಂಬಸ್ಥರು ಆಗಮಿಸಿದ್ದಾರೆ. ಮೊಹ್ಸಿನ್ ಅಹ್ಮದ್ಗೆ ಮೂವರು ಸಹೋದರಿಯರಿದ್ದಾರೆ. ಆತನ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ.
"ಅವರು ಹೀಗೆ ಹಣ ಸಂಗ್ರಹಿಸುತ್ತಿದ್ದರೆ, ಅವರ ಬಳಿ ಸಾಕಷ್ಟು ಹಣ ಇರಬೇಕಿತ್ತು. ನಿನ್ನೆ, ಅವರು ಕೋಡಿಂಗ್ ಕೋರ್ಸ್ ಮಾಡಲು 4,000 ರೂಪಾಯಿ ಕೇಳಲು ನನಗೆ ಸಂದೇಶ ಕಳುಹಿಸಿದ್ದಾರೆ. ಅವರು ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಮಾಜ ಸೇವೆ, ದೇಣಿಗೆ ಸಂಗ್ರಹಿಸುವುದು ಮತ್ತು ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದರು" ಎಂದು ಅವರ ಸಹೋದರಿಯೊಬ್ಬರು ತಿಳಿಸಿದ್ದಾರೆ.
"ಆರೋಪಗಳು ಸಂಪೂರ್ಣವಾಗಿ ಸುಳ್ಳು, ನಾವು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಆತ ತನ್ನ ಎಂಜಿನಿಯರಿಂಗ್ ಪ್ರವೇಶವನ್ನು ಪಡೆಯಲು ಎರಡು ಪ್ರಯತ್ನಗಳನ್ನು ಮಾಡಿದ್ದಾನೆ. ಆತನಿಗೆ ಐಸಿಸ್ ಏನು ಎಂಬ ಬಗ್ಗೆಯೂ ತಿಳಿದಿಲ್ಲ ಅಂತ ನನ್ನ ಅನಿಸಿದೆ' ಎಂದಿದ್ದಾರೆ.
ಆತ ದೆಹಲಿಯ ಬಟ್ಲಾ ಹೌಸ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ದಾಖಲಾಗಿದ್ದಾರೆ.
ಜೂನ್ 25 ರಂದು ಐಸಿಸ್ನ ಆನ್ಲೈನ್ ಮತ್ತು ಆನ್-ಗ್ರೌಂಡ್ ಚಟುವಟಿಕೆಗಳ ಕುರಿತು ದಾಖಲಿಸಲಾದ ಪ್ರಕರಣದ ನಂತರ ಮೊಹ್ಸಿನ್ ಅಹ್ಮದ್ ಅವರನ್ನು ಎನ್ಐಎಯ ಶೋಧ ತಂಡ ಶನಿವಾರ ಬಂಧಿಸಿದೆ ಎಂದು ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
"ಅಹ್ಮದ್ ಅವರು ಐಸಿಸ್ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯರಾಗಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಐಸಿಸ್ ಬಗ್ಗೆ ಸಹಾನುಭೂತಿ ಹೊಂದಿರುವವರಿಂದ ನಿಧಿ ಸಂಗ್ರಹದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ.