ನಾಸಾ ಉಪಗ್ರಹ ಸೆರೆ ಹಿಡಿದ ದೆಹಲಿ ವಾಯು ಮಾಲಿನ್ಯದ ಭೀಕರ ಚಿತ್ರಗಳು
Recommended Video
ನವದೆಹಲಿ, ನವೆಂಬರ್ 14: ಮಧ್ಯ ಅಕ್ಟೋಬರ್ ನಿಂದ ಆರಂಭಿಸಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ರೈತರು ಬೆಳೆಗಳಿಗೆ ಹಾಕುತ್ತಿರುವ ಬೆಂಕಿ ಉತ್ತರ ಭಾರತವನ್ನೇ ಗ್ಯಾಸ್ ಚೇಂಬರ್ ರೂಪಕ್ಕೆ ಪರಿವರ್ತಿಸಿದೆ. ಎರಡು ರಾಜ್ಯಗಳಲ್ಲಿ ರೈತರು ಮಾಡುತ್ತಿರುವ ಅವಾಂತರಕ್ಕೆ ಉತ್ತರ ಭಾರತ ಸೇರಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಮಾಲಿನ್ಯ ಮಿತಿ ಮೀರಿದೆ.
'ನಾಸಾ' ಚಿತ್ರಗಳಲ್ಲಿ ದೆಹಲಿ ಮಾಲಿನ್ಯದ ರಹಸ್ಯ ಬಯಲು
ರೈತರು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕಿದಾಗ ಹೊರ ಬರುವ ಹೊಗೆ ಮಂಜು, ಧೂಳು ಮತ್ತು ಕೈಗಾರಿಕೆಗಳ ಮಾಲಿನ್ಯದ ಜತೆ ಸೇರಿಕೊಂಡು ದಪ್ಪ ಗಾತ್ರದಲ್ಲಿ ಮಬ್ಬು ಸೃಷ್ಟಿಯಾಗುತ್ತಿದೆ. ಈ ಭಾಗದಲ್ಲಿ ಗಾಳಿಯ ಚಲನೆಯೂ ಕಡಿಮೆ ಇರುವುದರಿಂದ ಈ ಮಾಲಿನ್ಯ ಮತ್ತಷ್ಟು ಹೆಚ್ಚಾಗಿದೆ.
ಹೀಗಾಗಿ ಮಾಲಿನ್ಯದಿಂದ ಆತಂಕ ಸೃಷ್ಟಿಯಾಗಿರುವ ದೆಹಲಿ ಮತ್ತು ಉತ್ತರ ಭಾರತದ ಉಪಗ್ರಹ ಚಿತ್ರಗಳು ಇಲ್ಲಿವೆ.
ನಾಸಾ ಸೆರೆ ಹಿಡಿದ ಚಿತ್ರಗಳು
ನಾಸಾದ ಅಕ್ವಾ ಉಪಗ್ರಹದಲ್ಲಿರುವ 'ಮಾಡರೇಟ್ ರೆಸೊಲ್ಯೂಷನ್ ಇಮೇಜಿಂಗ್ ಸ್ಪೆಕ್ಟ್ರೋರೇಡಿಯೋಮೀಟರ್ ( MODIS)' ಸೆರೆ ಹಿಡಿದಿರುವ ಚಿತ್ರಗಳು ಇವಾಗಿವೆ. ಈ ಚಿತ್ರಗಳಲ್ಲಿ ಹೊಗೆ ಉತ್ತರ ಭಾರತ ಪ್ರದೇಶವನ್ನು ಆವರಿಸಿಕೊಂಡಿರುವುದನ್ನು ಕಾಣಬಹುದು.
(ಚಿತ್ರ ಕೃಪೆ: ನಾಸಾ)
ಲಾಹೋರ್ ನಿಂದ ಕಾನ್ಪುರದವರೆಗೆ
ಗಾಳಿಯಲ್ಲಿರುವ ಕಣಗಳು ಬೆಳಕನ್ನು ಪ್ರತಿಫಲಿಸುವುದು ಮತ್ತು ಹೀರಿಕೊಳ್ಳುವುದನ್ನು ಈ ಚಿತ್ರ ಹೇಳುತ್ತದೆ. ಲಾಹೋರ್, ದೆಹಲಿ, ಲಕ್ನೋ ಮತ್ತು ಕಾನ್ಪುರದಲ್ಲಿ ಭಾರೀ ಮಾಲಿನ್ಯ ಉಂಟಾಗಿರುವುದನ್ನು ಈ ಚಿತ್ರದ ಮೂಲಕ ಕಾಣಬಹುದು.
(ಚಿತ್ರ ಕೃಪೆ: ನಾಸಾ)
ನವೆಂಬರ್ 8ರಂದು ಭಾರೀ ಮಾಲಿನ್ಯ
ಈ ಚಿತ್ರವನ್ನು 'ಟೆರ್ರಾ' ಸೆರೆ ಹಿಡಿದಿದೆ. ನವೆಂಬರ್ 8ರಂದು ಉತ್ತರ ಭಾರತದ ಭಾಗದಲ್ಲಿ ತೀರಾ ದಪ್ಪಕ್ಕೆ ಹೊಗೆ ಮತ್ತು ಮಂಜಿನ ಕಣಗಳು ಶೇಖರಣೆಯಾಗಿರುವುದನ್ನು ಕಾಣಬಹುದು.
ಅಂದು ಅಮೆರಿಕಾ ರಾಯಭಾರ ಕಚೇರಿ ಪ್ರಕಾರ ಗಾಳಿಯ ಗುಣಮಟ್ಟ ಸೂಚ್ಯಂಕ 1,010ನ್ನು ತೋರಿಸುತ್ತಿತ್ತು. ಗಾಳಿಯ ಗುಣಮಟ್ಟ ಸೂಚ್ಯಂಕ 100ರ ಒಳಗೆ ಇದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.
(ಚಿತ್ರ ಕೃಪೆ: ನಾಸಾ)
ಏನೇ ಮಾಡಿದರೂ ಪರಿಹಾರವಿಲ್ಲ
ದೆಹಲಿಯಲ್ಲಿ ಸಮ-ಬೆಸ ನಿಯಮ ಜಾರಿ, ಶಾಲೆಗಳಿಗೆ ರಜೆ, ನಿರ್ಮಾಣ ಕಾಮಗಾರಿಗಳು ಬಂದ್, ಪಾರ್ಕಿಂಗ್ ಶುಲ್ಕ ಏರಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಿದ್ದೂ ಪರಿಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ. ಏನು ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೇರಿದಂತೆ ಯಾರಿಗೂ ತೋಚುತ್ತಿಲ್ಲ. ಪರಿಣಾಮ ದೆಹಲಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ಭೀಕರ ಮಾಲಿನ್ಯ ಮುಂದುವರಿದಿದೆ.