ಚಳಿಗಾಲ ಬಂದರೆ ಪ್ರತಿನಿತ್ಯ 15000 ಮಂದಿಗೆ ಕೊವಿಡ್-19 ಸೋಂಕು!
ನವದೆಹಲಿ, ಅಕ್ಟೋಬರ್.09: ಕೊರೊನಾವೈರಸ್ ಸೋಂಕಿನಿಂದ ಮತ್ತಷ್ಟು ಅಪಾಯಕಾರಿ ದಿನಗಳನ್ನು ಎದುರಿಸಲು ನವದಹೆಲಿಯು ಅಣಿಯಾಗಬೇಕಿದೆ ಎಂದು ತಜ್ಞರ ಸಮಿತಿ ನೀಡಿದ ವರದಿಯು ಎಚ್ಚರಿಕೆ ನೀಡಿದೆ.
ಚಳಿಗಾಲದಲ್ಲಿ ಪ್ರತಿನಿತ್ಯ ನವದೆಹಲಿಯಲ್ಲಿ ಕನಿಷ್ಠ 15000 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕೇಂದ್ರವು ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಹಬ್ಬದ ಖುಷಿಯಲ್ಲಿ ಮಾಸ್ಕ್ ಮರೆತರೆ ಅಪಾಯ ತಪ್ಪಿದ್ದಲ್ಲ"
ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರಲ್ಲಿ ಕಾಣಿಸಿಕೊಳ್ಳುವ ಉಸಿರಾಟ ಸಮಸ್ಯೆ, ಸಾಲು ಸಾಲು ಹಬ್ಬಗಳ ಸಲುವಾಗಿ ಮನೆಗಳಿಂದ ಹೊರಗೆ ಬರುವ ಸಾರ್ವಜನಿಕರ ಜನಸಂದಣಿಯಿಂದ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೀತಿ ಆಯೋಗ ಮಾಡಿರುವ ಶಿಫಾರಸ್ಸಿನಲ್ಲಿ ಏನಿದೆ?
ರಾಷ್ಟ್ರೀಯ ವಿಪತ್ತು ನಿಯಂತ್ರಣ ಕೇಂದ್ರದ ಮಾರ್ಗಸೂಚಿಗಳ ಅಡಿಯಲ್ಲಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ. ಪೌಲ್ ನವದೆಹಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಮಧ್ಯಮ ಮತ್ತು ತೀವ್ರ ಅನಾರೋಗ್ಯದ ಲಕ್ಷಣಗಳು ಕಂಡು ಬರುವ ಐವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸಾವಿನ ಪ್ರಮಾಣವನ್ನು ಇಳಿಸುವ ಬಗ್ಗೆ ಸರ್ಕಾರದ ಲಕ್ಷ್ಯ
"ಕೋವಿಡ್ -19 ಆವೃತ್ತಿ 3.0 ನಿಯಂತ್ರಣಕ್ಕಾಗಿ ಪರಿಷ್ಕೃತ ಕಾರ್ಯತಂತ್ರ''ದಲ್ಲಿ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕೇಂದ್ರವು ಈ ಬಗ್ಗೆ ಉಲ್ಲೇಖಿಸಿದೆ. ದೆಹಲಿಯಲ್ಲಿ ಒಟ್ಟಾರೆಯಾಗಿ ಕೊರೊನಾವೈರೈಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಪ್ರಮಾಣವು ಶೇಕಡಾ.1.9 ರಷ್ಟಿದೆ. ದೇಶದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಪ್ರಮಾಣ ಶೇ.1.5ರಷ್ಟಿದೆ. ಆದರೆ ನವದೆಹಲಿಯಲ್ಲಿ ಸಾವಿನ ಪ್ರಮಾಣವು ದೇಶದ ಸಾವಿನ ಸರಾಸರಿಗಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ನವದೆಹಲಿಯಲ್ಲಿ ಕೊವಿಡ್-19 ಆಂತಕಕ್ಕೆ ಕಾರಣಗಳೇನು?
ದೆಹಲಿ ಸರ್ಕಾರಕ್ಕೆ ಸಲ್ಲಿಸಿದ ಎಸಿಡಿಸಿ ವರದಿಯ ಪ್ರಕಾರ, ಆತಂಕ ಸೃಷ್ಟಿಯಾಗಲು ಮೂರು ಪ್ರಮುಖ ಕಾರಣಗಳಿವೆ. ಈ ಪೈಕಿ ಮೊದಲ ಕಾರಣ ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳು ಮತ್ತು ಉಸಿರಾಟ ಸಂಬಂಧಿತ ಕಾಯಿಲೆಗಳು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಲು ಸಾಲು ಹಬ್ಬದ ಹಿನ್ನೆಲೆ ಕೂಟಗಳಲ್ಲಿ ಜನರು ಸೇರುವುದರಿಂದ ಕೊವಿಡ್-19 ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುವ ಅಪಾಯವಿದೆ. ಇನ್ನು, ಮೂರನೇ ಕಾರಣ, ಬೇರೆ ರಾಜ್ಯಗಳಿಂದ ಮತ್ತು ನಗರಗಳಿಂದ ನವದೆಹಲಿಗೆ ಜನರು ವಲಸೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಸೋಂಕಿತ ಪ್ರಕರಣಗಳ ಸಂಖ್ಯೆಯು ಪ್ರತಿನಿತ್ಯ. 15000ಕ್ಕೂ ಹೆಚ್ಚಾದರೂ ಅಚ್ಚರಿ ಪಡಬೇಕಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಈಗಾಗಲೇ 3 ಲಕ್ಷದ ಗಡಿ ದಾಟಿದೆ. ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 3,00,833ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ಈವರೆಗೂ 5663 ಜನರು ಪ್ರಾಣ ಬಿಟ್ಟಿದ್ದಾರೆ. 272948 ಸೋಂಕಿತರು ಗುಣಮುಖರಾಗಿದ್ದು, ನವದೆಹಲಿಯಲ್ಲಿ 22232 ಸಕ್ರಿಯ ಪ್ರಕರಣಗಳಿರುವುದು ಪತ್ತೆಯಾಗಿದೆ.
Recommended Video