ಸತತ ಎರಡನೇ ದಿನವೂ ದೆಹಲಿ ಗಾಳಿಯ ಗುಣಮಟ್ಟ 'ತುಂಬಾ ಕಳಪೆ'
ನವದೆಹಲಿ ನವೆಂಬರ್ 10: ದೆಹಲಿಯು ಸತತ ಎರಡನೇ ದಿನವೂ 'ಅತ್ಯಂತ ಕಳಪೆ' ಗಾಳಿಯ ಗುಣಮಟ್ಟವನ್ನು ಕಂಡಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ & ರಿಸರ್ಚ್ (SAFAR) ಪ್ರಕಾರ, ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಬುಧವಾರ ಬೆಳಿಗ್ಗೆ 382 ರಷ್ಟಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು 'ತೀವ್ರ' ವರ್ಗಕ್ಕೆ ಕುಸಿದಿದೆ. ವರದಿಗಳ ಪ್ರಕಾರ ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ ಪ್ರದೇಶದ ಗಾಳಿಯ ಗುಣಮಟ್ಟ ಸೂಚ್ಯಂಕ 441 ರಷ್ಟು ದಾಖಲಾಗಿದೆ. ಪುಸಾ ರಸ್ತೆಯು 379 ಸೂಚ್ಯಂಕವನ್ನು ವರದಿ ಮಾಡಿದೆ. ಇನ್ನೂ ಮಥುರಾ ರಸ್ತೆಯು 422 ರ ಎಕ್ಯೂಐ ಅನ್ನು ವರದಿ ಮಾಡಿದೆ, ಲೋಧಿ ರಸ್ತೆ ಮತ್ತು ಐಐಟಿ ದೆಹಲಿ 367 ಸೂಚ್ಯಂಕವನ್ನು ವರದಿ ಮಾಡಿದೆ. ರಾಷ್ಟ್ರೀಯ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಮಂಗಳವಾರದಂದು 'ಅತ್ಯಂತ ಕಳಪೆ' ವರ್ಗದ ಉನ್ನತ ಭಾಗದಲ್ಲಿ ಉಳಿದಿತ್ತು. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 381 ನಲ್ಲಿ ಲಾಗ್ ಆಗಿದೆ.
ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಪಟಾಕಿ ಸಿಡಿಸುವಿಕೆ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆ ಸುಡುವಿಕೆಯಿಂದ ಹೆಚ್ಚಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಸುಧಾರಿಸುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗುತ್ತಿದೆ. ವಾಯುವ್ಯ ಮಾರುತಗಳು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಬೆಂಕಿಯಿಂದ ಹೊಗೆಯನ್ನು ರಾಷ್ಟ್ರ ರಾಜಧಾನಿಯ ಕಡೆಗೆ ಸಾಗಿಸುತ್ತವೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಕಳೆ ಸುಡುವಿಕೆಯ ಪಾಲು 42 ಪ್ರತಿಶತದಷ್ಟಿತ್ತು. 2019 ರಲ್ಲಿ, ನವೆಂಬರ್ 1 ರಂದು ದೆಹಲಿಯ PM2.5 ಮಾಲಿನ್ಯದ 44 ಪ್ರತಿಶತದಷ್ಟು ಬೆಳೆ ಅವಶೇಷಗಳನ್ನು ಸುಡುವುದಾಗಿತ್ತು. ದೆಹಲಿಯ PM 2.5 ಸಾಂದ್ರತೆಯಲ್ಲಿನ ಕಳೆ ಸುಡುವಿಕೆಯ ಕೊಡುಗೆಯು 2019 ರಲ್ಲಿ 19 ಪ್ರತಿಶತಕ್ಕೆ ಹೋಲಿಸಿದರೆ ಕಳೆದ ವರ್ಷ ದೀಪಾವಳಿ ದಿನದಂದು 32 ಪ್ರತಿಶತದಷ್ಟಿತ್ತು. ಅಕ್ಟೋಬರ್ನಲ್ಲಿ ದಾಖಲೆಯ ಮಳೆ ಮತ್ತು ಕಳೆ ಸುಡುವಿಕೆ, ಗಾಳಿಯ ದಿಕ್ಕಿನಿಂದಾಗಿ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ಬೆಂಕಿಯಿಂದಾಗುವ ಹೊಗೆಯ ಕೊಡುಗೆ ಕಡಿಮೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಎಎಪಿ ಸರ್ಕಾರ ಟೀಕೆಗಳನ್ನು ಎದುರಿಸುತ್ತಿದೆ. ಹೀಗಾಗಿ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಧೂಳನ್ನು ಇತ್ಯರ್ಥಗೊಳಿಸಲು ದೆಹಲಿ ಸರ್ಕಾರವು ನಗರದಾದ್ಯಂತ ನೀರನ್ನು ಸಿಂಪಡಿಸಲು 100 ಕ್ಕೂ ಹೆಚ್ಚು ಟ್ಯಾಂಕರ್ಗಳನ್ನು ನಿಯೋಜಿಸಿದೆ. ಹೊಗೆಯನ್ನು ತೆಳುಗೊಳಿಸಲು 20 ಆ್ಯಂಟಿ ಸ್ಮಾಗ್ ಗನ್ಗಳನ್ನು ಅಳವಡಿಸುವುದಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಪಟಾಕಿಗಳ ನಿಷೇಧದ ಹೊರತಾಗಿಯೂ, ಜನರು ಪಟಾಕಿ ಸಿಡಿಸುವುದರಲ್ಲಿ ತೊಡಗಿದ್ದರು, ಇದರಿಂದಾಗಿ ದೀಪಾವಳಿ ನಂತರ ನಗರದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ. ಶುಕ್ರವಾರ ಐದು ವರ್ಷಗಳಲ್ಲಿ ದೀಪಾವಳಿಯ ನಂತರ ಕೆಟ್ಟ ಗಾಳಿಯ ಗುಣಮಟ್ಟವನ್ನು ನಗರ ಹೊಂದಿತ್ತು. ದೆಹಲಿಯಲ್ಲಿ ಇದು "ತೀವ್ರ" ವಾಯು ಮಾಲಿನ್ಯದ ನಂತರ ತುಂಬಾ ಕಳಪೆ ಗಾಳಿಯ ಗುಣಮಟ್ಟ ಹೊಂದಿದ ಎರಡನೇ ದಿನವಾಗಿದೆ.
ವಾಯುಮಾಲಿನ್ಯದ ಮಧ್ಯೆ ಇತ್ತ ಛತ್ ಪೂಜೆಯ ಮೂರನೇ ದಿನವಾದ ಇಂದು (ನವೆಂಬರ್ 10) ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದ್ದರೂ ಜನ ನದಿಯಲ್ಲಿ ಛತ್ ಪೂಜೆ ಮಾಡುತ್ತಿದ್ದಾರೆ. ದೇಹದೆತ್ತರಕ್ಕೆ ವಿಷಕಾರಿ ನೊರೆ ನೀರಿನ ಮೇಲ್ಬಾಗ ತುಂಬಿಕೊಂಡಿದ್ದರೂ ಜನ ಅದನ್ನ ಲೆಕ್ಕಿಸದೆ ಕಾಯಿ, ಹೂ, ಹಣ್ಣು ಅರ್ಪಿಸುವ ಮೂಲಕ ಛತ್ ಪೂಜೆ ನೆರವೇರಿಸುತ್ತಿದ್ದಾರೆ. ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗಿವೆ. ಆದಾಗ್ಯೂ, ಯಮುನಾದಲ್ಲಿ ವಿಷಕಾರಿ ನೊರೆ ರಚನೆಯು ಹೊಸದಲ್ಲ. ಪ್ರತಿ ವರ್ಷ ಛತ್ ಪೂಜೆಯ ಸಮಯದಲ್ಲಿ ನದಿಯಲ್ಲಿ ಅಧಿಕ ವಿಷಕಾರಿ ನೊರೆಯಲ್ಲಿ ನಿಂತಿರುವ ಭಕ್ತರ ಚಿತ್ರಗಳು ಗಮನ ಸೆಳೆಯುತ್ತವೆ.
ಯಮುನಾದಲ್ಲಿ ಅಮೋನಿಯ ಮಟ್ಟವು 3 ppm (ಪಾರ್ಟ್ಸ್ ಪರ್ ಮಿಲಿಯನ್) ಗೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯ ಭಾಗಗಳಲ್ಲಿ ನೀರಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವರ್ಷ ಯಮುನಾ ದಡದಲ್ಲಿ ಛತ್ ಪೂಜೆಯನ್ನು ನಿಷೇಧಿಸಿದ್ದು ಇದು ಬಿಜೆಪಿ ಮತ್ತು ಎಎಪಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಆದಾಗ್ಯೂ, ದೆಹಲಿಯ ಯಮುನಾ ದಂಡೆಗಳನ್ನು ಹೊರತುಪಡಿಸಿ "ನಿಯೋಜಿತ ಸೈಟ್ಗಳಲ್ಲಿ" ಛತ್ ಆಚರಣೆಯನ್ನು DDMA ಅನುಮತಿಸಿದೆ.
Recommended Video