ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಸರ್ಕಾರ ಉರುಳಿಸುವ ಸಂಚು: ಪೊಲೀಸರ ವರದಿ
ನವದೆಹಲಿ, ಸೆಪ್ಟೆಂಬರ್ 22: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದ ಕುರಿತು ದೆಹಲಿ ವಿಶೇಷ ಪೊಲೀಸ್ ಘಟಕ 2,695 ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿದೆ. ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂಚಿಗೆ ಸಂಬಂಧಿಸಿದಂತೆ ಯುಎಪಿಎ ಅಡಿ 15 ಮಂದಿಯ ವಿರುದ್ಧ ದೋಷಾರೋಪ ಸಲ್ಲಿಸಿದೆ.
ಈ ಆರೋಪಪಟ್ಟಿಯಲ್ಲಿ ಎಎಪಿಯ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್, ಪಿಂಜ್ರಾ ಟೋಡ್ನ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್, ದೆಹಲಿ ಯುನಿವರ್ಸಿಟಿಯ ಮಾಜಿ ವಿದ್ಯಾರ್ಥಿ ಗುಲ್ಫಿಶಾ, ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಪಿಎಚ್ಡಿ ವಿದ್ಯಾರ್ಥಿ ಮೀರನ್ ಹೈದರ್ ಮತ್ತು ಜಾಮಿಯಾ ಸಮನ್ವಯ ಸಮಿತಿ ಮಾಧ್ಯಮ ಸಂಯೋಜಕ ಸಫೂರಾ ಹಾಗೂ ಇತರರು ಇದ್ದಾರೆ.
ಸಿಎಎ ವಿರೋಧಿ ಪ್ರಕರಣ: ಪ್ರತಿಭಟನೆಗೆ ಸಾರ್ವತ್ರಿಕ ನೀತಿ ರೂಪಿಸಲಾಗದು ಎಂದ ಸುಪ್ರೀಂಕೋರ್ಟ್
ದೆಹಲಿ ಗಲಭೆ ಕುರಿತಾದ ತನಿಖೆಯ ಅಂತಿಮ ವರದಿಗೆ ವಿಶೇಷ ಘಟಕದ ಡಿಸಿಪಿ ಪಿ.ಎಸ್. ಕುಶ್ವಾಹ ಮತ್ತು ಎಸಿಪಿ ಅಲೋಕ್ ಕುಮಾರ್ ಸಹಿ ಹಾಕಿದ್ದಾರೆ. 'ರಾಜಕೀಯ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಅಂತಾರಾಷ್ಟ್ರೀಯವಾಗಿ ಭಯೋತ್ಪಾದನಾ ಚಟುಚಟಿಕೆಗಳನ್ನು ವ್ಯಾಖ್ಯಾನಿಸಿರುವಂತೆ ಹಿಂಸಾಚಾರ ಬಳಸಲಾಗಿದೆ' ಎಂದು ವರದಿ ಹೇಳಿದೆ. ಈ ವರದಿಯಲ್ಲಿ ಇರುವ ಅಂಶಗಳೇನು? ಮುಂದೆ ಓದಿ.
ಫಲಿತಾಂಶದಿಂದಲೇ ಸಂಚು ಶುರು
'2019ರ ಸಂಸತ್ ಚುನಾವಣೆ ಫಲಿತಾಂಶ ಘೋಷಣೆಯಾದ ದಿನದಿಂದಲೇ, ಪ್ರಮುಖ ಸಂಚುಕೋರರು ಸಾರ್ವಜನಿಕವಾಗಿ ಆಡುತ್ತಿದ್ದ ಮಾತುಗಳ ಧ್ವನಿ ಹಾಗೂ ನಡೆಗಳು ಈ ಪ್ರಸ್ತುತ ಪ್ರಕರಣದಲ್ಲಿನ ಹಿಂಸಾಚಾರಕ್ಕೆ ಆಗಲೇ ಅವರ ಮನಸ್ಸಿನಲ್ಲಿ ಸಿದ್ಧತೆ ನಡೆಸಲಾಗುತ್ತಿತ್ತು ಎನ್ನುವುದನ್ನು ಸೂಚಿಸುತ್ತದೆ' ಎಂದು ವರದಿಯಲ್ಲಿ ಹೇಳಲಾಗಿದೆ.
ಭಯೋತ್ಪಾದನಾ ಕೃತ್ಯ ಹೇಗಾಗುತ್ತದೆ?
ಭಾರತದ ಸನ್ನಿವೇಶದಲ್ಲಿ ಯುಎಪಿಎ ಸೆಕ್ಷನ್ 15ರ ಅಡಿ ಇದು ಹೇಗೆ 'ಭಯೋತ್ಪಾದನಾ ಕೃತ್ಯ' ಆಗುತ್ತದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. 'ಈ ಪ್ರಕರಣದಲ್ಲಿ ಅವರು ಬಂದೂಕುಗಳು, ಪೆಟ್ರೋಲ್ ಬಾಂಬ್ಗಳನ್ನು ಬಳಸಿದ್ದಾರೆ. ಇವು ಪೊಲೀಸರ ಸಾವು ಹಾಗೂ ತೀವ್ರತರದ ಗಾಯಗಳಿಗೆ ಕಾರಣವಾಗಿವೆ. ಸಿಎಎ ಮತ್ತು ಎನ್ಆರ್ಸಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಮತ್ತು ಜನರನ್ನು ಬೆದರಿಸುವ ಉದ್ದೇಶವು ಭಯೋತ್ಪಾದನಾ ಚಟುವಟಿಕೆಗಳ ವ್ಯಾಖ್ಯಾನದಡಿ ಬರುತ್ತದೆ' ಎಂದು ಅದು ಹೇಳಿದೆ.
ಯೆಚೂರಿ, ಯೋಗೇಂದ್ರ ಆರೋಪಿಗಳಲ್ಲ: ಪೊಲೀಸರ ಸ್ಪಷ್ಟನೆ
ಅಪಾರ ಪ್ರಮಾಣದಲ್ಲಿ ಹಾನಿ
50ಕ್ಕೂ ಹೆಚ್ಚು ಜನರ ಸಾವು ಹಾಗೂ 500ಕ್ಕೂ ಅಧಿಕ ಸಾರ್ವಜನಿಕರಿಗೆ ಗಾಯವಾಗಲು ಕಾರಣವಾಗಿರುವುದರ ಜತೆಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಬೆಂಕಿ ಇಡುವ ಹಾಗೂ ಇತರೆ ಮಾರ್ಗಗಳಿಂದ ಭಾರಿ ಪ್ರಮಾಣದಲ್ಲಿ ಹಾನಿ ಮಾಡಿರುವುದು ಸಹ ಸ್ಪಷ್ಟವಾಗಿ ಭಯೋತ್ಪಾದನಾ ಕೃತ್ಯದ ವ್ಯಾಖ್ಯಾನದಡಿ ಬರುತ್ತದೆ. ಸಮುದಾಯದ ಜೀವನಕ್ಕೆ ಅತ್ಯಗತ್ಯವಾದ ಸರಕು ಹಾಗೂ ಸೇವೆಗಳ ಪೂರೈಕೆಗೆ ಅಡ್ಡಿಯುಂಟು ಮಾಡಿರುವುದು ಭಯೋತ್ಪಾದನಾ ಕೃತ್ಯದ ವ್ಯಾಪ್ತಿಗೆ ಒಳಪಡುತ್ತದೆ ಎಂದು ವಿವರಿಸಿದೆ.
ಒಂದೇ ಕಲ್ಲೇಟಿಗೆ ಎರಡು ಹಕ್ಕಿ ತಂತ್ರ
ಆರೋಪಪಟ್ಟಿಯಲ್ಲಿ ಪೊಲೀಸರು ವಿವಿಧ ಹೇಳಿಕೆಗಳನ್ನು, ಕರೆ ವಿವರ ಸಂಗ್ರಹಗಳನ್ನು, ಹಣಕಾಸಿನ ಹರಿವಿನ ವಿವರ, ದೆಹಲಿ ಪ್ರತಿಭಟನೆ ಬೆಂಬಲ ಗುಂಪು (ಡಿಪಿಎಸ್ಜಿ) ಮತ್ತು ವಾರಿಯರ್ಸ್ನಂತಹ ವಾಟ್ಸಾಪ್ ಗ್ರೂಪ್ಗಳ ವಿವರಗಳನ್ನು ಉಲ್ಲೇಖಿಸಿದೆ. 'ಅಮೆರಿಕ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ತಮ್ಮ ಸಂಚನ್ನು ಜಾರಿಗೆ ತಂದು, ಭಾರತ ಸರ್ಕಾರವು ಮಂಡಿಯೂರುವಂತೆ ಮತ್ತು ಸಿಎಎಯನ್ನು ಹಿಂದಕ್ಕೆ ಪಡೆಯುವಂತೆ ಮಾಡುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಉದ್ದೇಶವನ್ನು ಸಂಚುಕೋರರು ಹೊಂದಿದ್ದರು' ಎಂದು ಹೇಳಿದೆ.
ಪ್ರತಿಭಟನೆ ವೇಳೆ ಆಸ್ತಿ ನಷ್ಟದ ಹಣ ವಸೂಲಿ: ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಆದಿತ್ಯನಾಥ್
ಪ್ರಮುಖ ಚಾಟ್ ವಿವರ ಬಹಿರಂಗ
'ಎಲ್ಲ ಸಂಚುಕೋರರ ಅಂತಿಮ ಗುರಿ ಕಾನೂನಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಸುಸಜ್ಜಿತವಾಗಿ ರೂಪುಗೊಳಿಸಿದ, ಹೀನ ಮತ್ತು ತೀವ್ರತರದ ಕೋಮು ಹಿಂಸಾಚಾರದ ಮೂಲಕ ಬುಡಮೇಲು ಮಾಡುವುದಾಗಿತ್ತು' ಎಂದು ವರದಿಯನ್ನು ಅಂತಿಮಗೊಳಿಸಲಾಗಿದೆ.
ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್, ನಿರ್ದೇಶಕರಾದ ರಾಹುಲ್ ರಾಯ್ ಮತ್ತು ಸಬಾ ದಿವಾನ್, ಪಿಂಜ್ರಾ ಟೋಡ್ನ ಕಲಿತಾ ಹಾಗೂ ನರ್ವಾಲ್, ಸಿಪಿಐನ ಅನ್ನಿ ರಾಜಾ, ಎಂಕೆಎಸ್ಎಸ್ನ ರಕ್ಷಿತಾ ಸ್ವಾಮಿ, ಕಾರ್ಯಕರ್ತರಾದ ಹರ್ಷ್ ಮಂದೆರ್ ಮತ್ತು ಅಂಜಲಿ ಭಾರದ್ವಾಜ್ ನಡುವೆ ನಡೆದ ಚಾಟ್ನ ವಿವರಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
ಹಂತ ಹಂತವಾಗಿ ಬೆಳೆದ ಗುಂಪುಗಳು
'ಈ ಸಂಚು ಅತ್ಯಂತ ವ್ಯವಸ್ಥಿತವಾಗಿ ರೂಪುಗೊಂಡಿದ್ದು, ಎಂಎಸ್ಜೆ (ಮುಸ್ಲಿಮ್ ಸ್ಟುಡೆಂಟ್ಸ್ ಆಫ್ ಜೆಎನ್ಯು) ಎಂಬ ಗುಂಪನ್ನು ಸೃಷ್ಟಿಸಲಾಗಿತ್ತು. ಇದು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಮಂಡನೆಯಾದ ಬಳಿಕ ಬಿತ್ತನೆಯಾದ ಕೋಮು ಬೀಜ. ಇದರಿಂದ ನಂತರ ಜೆಸಿಸಿ ಹಾಗೂ ಅಂತಿಮವಾಗಿ ಡಿಪಿಎಸ್ಜಿ ಸೃಷ್ಟಿಯಾದವು. ಇದು ಜಾತ್ಯತೀತ ಮುಖವಾಡ ಮತ್ತು ಹಿಂಸಾತ್ಮಕ ಪ್ರತಿರೋದದ ನಕ್ಸಲ್ ಜೀನ್ಗಳನ್ನು ಒದಗಿಸುವ ಮೂಲಕ ತೀವ್ರಗಾಮಿ ಕೋಮು ಸಂಚನ್ನು ರೂಪಿಸಿತ್ತು' ಎಂದು ಪೊಲೀಸರು ಹೇಳಿದ್ದಾರೆ.
ದ್ವೇಷ ಭಾಷಣಕ್ಕೆ ಹೊಸ ಆಯಾಮ
'ಸಂಚುಕೋರರು ತಮ್ಮ ಬುದ್ಧಿವಂತಿಕೆ ಹಾಗೂ ಕ್ರಿಮಿನಲ್ ಅಲೋಚನೆಗಳಿಂದ 'ದ್ವೇಷ ಭಾಷಣ'ದ ಅರ್ಥಕ್ಕೆ ಹೊಸ ಆಯಾಮ ನೀಡಿದರು. ರಾಷ್ಟ್ರೀಯತೆಯ ಸಿಹಿಯನ್ನು ಹೊರಗೆ ಬಿಂಬಿಸುವ ಮೂಲಕ ಕಹಿ ಸತ್ಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದರು. ದೇಶದಾದ್ಯಂತ ಇಸ್ಲಾಮಿಕ್ ಅಸ್ಮಿತೆಯನ್ನು ಬಲಪಡಿಸುವ ಹಾಗೂ ಅದಕ್ಕೆ ಕಿಚ್ಚು ಹೊತ್ತಿಸುವ ವ್ಯವಸ್ಥಿತ ಪ್ರಯತ್ನ ನಡೆಸಿದರು. ಇದಕ್ಕೆ ಕೆಲವು ಆಯ್ದ ಡಿಜಿಟಲ್ ಮಾಧ್ಯಮಗಳು ನೆರವು ನೀಡಿದ್ದವು' ಎಂದು ಆರೋಪಿಸಲಾಗಿದೆ.
ಕಪಿಲ್ ಮಿಶ್ರಾ ವಿಚಾರಣೆ
ಈಶಾನ್ಯ ದೆಹಲಿ ಗಲಭೆಯ ವಿಚಾರವಾಗಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ವಿಶೇಷ ಘಟಕದ ಪೊಲೀಸರು ಜುಲೈ ಕೊನೆಯ ವಾರ ವಿಚಾರಣೆಗೆ ಒಳಪಡಿಸಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅಲ್ಲಿಗೆ ತೆರಳಿದ್ದೆ. ಅಲ್ಲಿ ಯಾವುದೇ ಭಾಷಣ ಮಾಡಿರಲಿಲ್ಲ. ತಮ್ಮ ಪಕ್ಕದಲ್ಲಿದ್ದ ಡಿಸಿಪಿಗೆ ಹೇಳಿದ ಮಾತುಗಳು ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಪ್ರತಿಯಾಗಿ ಧರಣಿ ಆಯೋಜಿಸುವ ತಮ್ಮ ಉದ್ದೇಶವನ್ನು ತಿಳಿಸುವುದಷ್ಟೇ ಆಗಿತ್ತು ಎಂದಿದ್ದಾರೆ.
ಸ್ಥಳೀಯ ಜನರಿಗೆ ಕಷ್ಟವಾಗುತ್ತಿತ್ತು
ಸಿಎಎ ವಿರೋಧಿ ಪ್ರತಿಭಟನಾಕಾರರಿಂದಾಗಿ ಸ್ಥಳೀಯ ನಿವಾಸಿಗಳು ತಮ್ಮ ವ್ಯಾಪಾರ ಚಟುವಟಿಕೆ ನಡೆಸಲು ಆಗುತ್ತಿರಲಿಲ್ಲ. ಮಕ್ಕಳಿಗೆ ಶಾಲೆಗೆ ಹೋಗುವುದು ಕಷ್ಟವಾಗುತ್ತಿತ್ತು. ಮುಸ್ಲಿಮರು ಅಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಆಂಬುಲೆನ್ಸ್ಗಳಿಗೂ ಅಲ್ಲಿಗೆ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ. ಎರಡು ಮೂರು ತಿಂಗಳವರೆಗೆ ಮುಸ್ಲಿಮರು ಅಲ್ಲಿನ ರಸ್ತೆಗಳನ್ನು ತಡೆದಿದ್ದರು. ಸ್ಥಳೀಯರಿಂದ ಬಂದ ಕರೆಗಳು ಹಾಗೂ ಫೇಸ್ಬುಕ್ ಪೋಸ್ಟ್ಗಳನ್ನು ನೋಡಿದಾಗ ರಸ್ತೆಗಳನ್ನು ಅಡ್ಡಿಪಡಿಸಿದ್ದರಿಂದ ಸ್ಥಳೀಯರು ಕಷ್ಟಪಡುತ್ತಿದ್ದಾರೆ ಎಂಬುದನ್ನು ತಿಳಿದು ಮೌಜ್ಪುರ ಚೌಕ್ಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.
ಫೆಬ್ರವರಿ 23ರಂದು ಅಲ್ಲಿ ಒಂದು ಗಂಟೆ ಮಾತ್ರ ಇದ್ದೆ ಎಂದು ಅವರು ತಿಳಿಸಿದ್ದಾರೆ. ಶರ್ಮಾ ತಮ್ಮ ಹೇಳಿಕೆಯಲ್ಲಿ, ತಾವು ಅಲ್ಲಿ ಭಾಷಣ ಮಾಡಿರಲಿಲ್ಲ. ಮೂರು ದಿನದೊಳಗೆ ರಸ್ತೆಯನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದೆ ಎಂದು ಪದೇ ಪದೇ ಹೇಳಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಭಟನೆಗೂ ಮುನ್ನ ಕಲ್ಲು ತೂರಾಟ
ಫೆ. 23ರಂದು ಮಧ್ಯಾಹ್ನ 1.22ಕ್ಕೆ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, 'ಇಂದು 3 ಗಂಟೆಗೆ ನಾವು ಮೌಜ್ಪುರ ಚೌಕದಲ್ಲಿ ಜಫ್ರಾಬಾದ್ ಮುಂಭಾಗ ಪ್ರತಿಭಟನೆಗೆ ವಿರುದ್ಧದ ಪ್ರತಿಕ್ರಿಯೆಯಾಗಿ ಹಾಗೂ ಸಿಎಎ ಪರವಾಗಿ ಕೂರಲಿದ್ದೇವೆ. ನಿಮಗೆ ಸ್ವಾಗತ' ಎಂದು ಹೇಳಿದ್ದರು. 'ನಾನು ಅಲ್ಲಿಗೆ ತಲುವ ಮುನ್ನ ಮಧ್ಯಾಹ್ನ 2.45ರ ಸುಮಾರಿಗೆ ಕಲ್ಲು ತೂರಾಟ ಶುರುವಾಯಿತು ಎಂದು ಮಾಹಿತಿ ನೀಡಿದ್ದರು. ನನ್ನ ಮುಂದೆ ಓಡುತ್ತಿದ್ದ ಜನರು ಗುಂಪೊಂದು ಕಲ್ಲುತೂರಾಟ ನಡೆಸುತ್ತಿದೆ ಎಂದು ತಿಳಿಸಿದ್ದರು. 3, 3-30ರ ಸುಮಾರಿಗೆ ಅಲ್ಲಿ ತಲುಪುವ ಮುನ್ನ ನಾನು ಡಿಸಿಪಿ ಸೂರ್ಯ ಅವರೊಂದಿಗೆ ಮಾತನಾಡಿದ್ದೆ' ಎಂದು ಮಿಶ್ರಾ ಹೇಳಿದ್ದಾರೆ.