ದೆಹಲಿ ಗಲಭೆ: ಆರೋಪಿ ಶಾರ್ಜಿಲ್ ಇಮಾಮ್ ಬಂಧಿಸಿದ ಪೊಲೀಸರು
ನವದೆಹಲಿ, ಆಗಸ್ಟ್.26: ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಿಲ್ ಇಮಾಮ್ ಎಂಬ ಆರೋಪಿಯನ್ನು ದೆಹಲಿಯ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಜವಾಹರ್ ಲಾಲ್ ನೆಹರೂ ರಾಷ್ಟ್ರೀಯ ವಿಶ್ವವಿದ್ಯಾಲಯದ ಪಿ.ಎಚ್.ಡಿ ವಿದ್ಯಾರ್ಥಿ ಇಮಾಮ್ ನನ್ನು ಕಾನೂನು ವಿರೋಧಿ ಚಟುವಟಿಕೆ ನಿರ್ಬಂಧ ಕಾಯ್ದೆಯಡಿ ಬಂಧಿಸಲಾಗಿದೆ.
ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಆರೋಪಿ ಇಮಾಮ್ ಗೂ ನಂಟಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕಳೆದ ಭಾನುವಾರ ಪೊಲೀಸರು ಅಸ್ಸಾಂನಿಂದ ಆರೋಪಿಯನ್ನು ದೆಹಲಿಗೆ ಕರೆ ತಂದಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಜಾಮಿಯಾ ವಿವಿ ಬಳಿ ಬೆಂಕಿ ಹಚ್ಚಿದವರ ತಲೆಗೆ 1 ಲಕ್ಷ ರೂಪಾಯಿ ಬಹುಮಾನ!
ಏಪ್ರಿಲ್ ನಲ್ಲಿ ದೆಹಲಿ ಪೊಲೀಸರು ಆರೋಪಿ ಇಮಾಮ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ದೆಹಲಿ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಆರೋಪಿಯು ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತಂದಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಸಂವಿಧಾನವನ್ನು ಬಹಿರಂಗವಾಗಿ ಧಿಕ್ಕರಿಸಿ ಆರೋಪಿ ಇಮಾಮ್ ಅದನ್ನು "ಫ್ಯಾಸಿಸ್ಟ್" ದಾಖಲೆ ಎಂದು ಆರೋಪಿಸಿದ್ದರು.
ಗುವಾಹಟಿ ಜೈಲಿನಲ್ಲಿದ್ದ ಆರೋಪಿ ಇಮಾಮ್:
ನವದೆಹಲಿಗೆ ಕರೆತರುವುದಕ್ಕೂ ಮುನ್ನ ಆರೋಪಿ ಶಾರ್ಜಿಲ್ ಇಮಾಮ್ ಗುವಾಹಟಿ ಜೈಲಿನಲ್ಲಿದ್ದನು. ಪೌರತ್ವ ತಿದ್ದುಪಡಿ ಕಾಯ್ದು ವಿರೋಧಿ ಹೋರಾಟ ನಡೆದ ಸಂದರ್ಭದಲ್ಲಿ ಆರೋಪಿ ಇಮಾಮ್ ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆ ಬಂಧಿಸಿದ್ದ ಪೊಲೀಸರು ಗುವಾಹಟಿ ಜೈಲಿನಲ್ಲಿರಿಸಿದ್ದರು. ಇದರ ನಡುವೆ ಕಳೆದ ಜುಲೈ.21ರಂದು ಆರೋಪಿ ಶಾರ್ಜಿಲ್ ಇಮಾಮ್ ರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.
ಇದಕ್ಕೂ ಮೊದಲು ಜನವರಿ.28ರಂದು ಬಿಹಾರದ ಜಹಾನ್ ಬಾದ್ ನಲ್ಲಿ ಆರೋಪಿ ಶಾರ್ಜಿಲ್ ಇಮಾಮ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನೀಡಿದ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಬಂಧಿತ ಇಮಾಮ್ ವಿರುದ್ಧ ಭಾರತೀಯ ದಂಡ ಸಂಹಿತೆ 124ಎ, 153ಎ, 505ರ ಅಡಿ ಪ್ರಕರಣವನ್ನು ದಾಖಲಿಸಿದ್ದರು. ಇದರ ಜೊತೆಗೆ ದೆಹಲಿ, ಉತ್ತರ ಪ್ರದೇಶ, ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶದ ಪೊಲೀಸರು ಆರೋಪಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.