ದೆಹಲಿ ಗಲಭೆ: ದೇವಾಂಗನಾ, ನತಾಶಾ, ಆಸಿಫ್ಗೆ ಹೈಕೋರ್ಟ್ ಜಾಮೀನು ಮಂಜೂರು
ನವದೆಹಲಿ, ಜೂ. 15: ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಎ.ಜೆ.ಭಂಭಾನಿಯ ದ್ವಿ ಸದಸ್ಯೆ ನ್ಯಾಯಪೀಠ ಈ ಆದೇಶವನ್ನು ನೀಡಿದೆ. ಆದೇಶದ ಪ್ರತಿಯನ್ನು ಆರೋಪಿಗಳ ಸಲಹೆಗಾರರಿಗೆ ತ್ವರಿತವಾಗಿ ಪೂರೈಸಬೇಕೆಂದು ನ್ಯಾಯಪೀಠ ನಿರ್ದೇಶಿಸಿದೆ. ಮೂವರು ಆರೋಪಿಗಳಿಗೆ 50,000 ರೂ. ವೈಯಕ್ತಿಕ ಬಾಂಡ್ಗಳ ಮೇಲೆ ನ್ಯಾಯಾಲಯವು ಜಾಮೀನು ನೀಡಿದೆ.
ದೆಹಲಿ ಗಲಭೆ: ಸ್ವತಂತ್ರ ತನಿಖೆಗೆ ಮುಂದಾದ ನಾಗರಿಕ ಸಮಿತಿ
''ದೇವಾಂಗನಾ ನಾಲ್ಕು ಪ್ರಕರಣಗಳಲ್ಲಿ ಮತ್ತು ನತಾಶಾ ಮೂರು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಸ್ತುತ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ. ಜೈಲಿನಿಂದ ಇಬ್ಬರನ್ನೂ ಬಿಡುಗಡೆ ಮಾಡಲಾಗುತ್ತದೆ,'' ಎಂದು ವಕೀಲ ಆದಿತ್ ಪೂಜಾರಿ ಹೇಳಿದ್ದಾರೆ.
ಆರೋಪಿಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಪೊಲೀಸ್ ಠಾಣಾ ಸಿಬ್ಬಂದಿಗೆ ಒದಗಿಸುವಂತೆ, ಜೈಲಿನ ದಾಖಲೆಗಳಲ್ಲಿ ಉಲ್ಲೇಖಿಸಿರುವ ವಾಸಸ್ಥಳಗಳಲ್ಲಿಯೇ ವಾಸಿಸುವಂತೆ ಹೈಕೋರ್ಟ್ ತಿಳಿಸಿದೆ. ಹಾಗೆಯೇ ನಿವಾಸ ಬದಲಾವಣೆಯ ಸಂದರ್ಭದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ. ಇದಲ್ಲದೆ, ಪ್ರಕರಣದ ಯಾವುದೇ ಸಾಕ್ಷಿದಾರರೊಂದಿಗೆ ಸಂಪರ್ಕವನ್ನು ಮಾಡದಂತೆ ಅಥವಾ ಸಾಕ್ಷ್ಯಗಳನ್ನು ಹಾಳು ಮಾಡದಂತೆ ಆರೋಪಿಗಳಿಗೆ ಆದೇಶಿಸಲಾಗಿದೆ. ಜಾಮೀನಿನ ಮೇಲೆ ಹೊರಗಿರುವಾಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆಯೂ ಆರೋಪಿಗಳಿಗೆ ಆದೇಶಿಸಲಾಗಿದೆ.
ಇನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ವಿಶ್ವವಿದ್ಯಾನಿಲಯದಲ್ಲಿ ಬ್ಯಾಕ್ಲಾಗ್ ಪರೀಕ್ಷೆಗಳಿಗೆ ಹಾಜರಾಗಲು ಇತ್ತೀಚೆಗೆ ಎರಡು ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ದೆಹಲಿ ಪೊಲೀಸರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಯೆಚೂರಿ, ಯೋಗೇಂದ್ರ ಆರೋಪಿಗಳಲ್ಲ: ಪೊಲೀಸರ ಸ್ಪಷ್ಟನೆ
ಆದರೆ ಆಸಿಫ್ ಗಲಭೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಇರಲಿಲ್ಲ. ಗಲಭೆ ಮತ್ತು ಹಿಂಸಾಚಾರ ನಡೆದ ಯಾವುದೇ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿಲ್ಲ. ತನ್ಹಾಗೂ ಗಲಭೆಗೂ ಸಂಬಂಧವಿದೆ ಎಂಬ ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಯಾವುದೇ ಹಣವನ್ನು ಆಸಿಫ್ ಪಡೆದಿರುವ ಆರೋಪಗಳಿಲ್ಲ ಎಂದು ಆಸಿಫ್ ವಕೀಲರು ವಾದಿಸಿದ್ದರು.
ಇನ್ನು ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಜನವರಿಯಲ್ಲಿ ವಜಾಗೊಳಿಸಿ ಆರೋಪವು ನಿಜವೆಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದಿತ್ತು. ಆದರೆ ಹೈಕೋರ್ಟ್ನಲ್ಲಿ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಪರ ವಕೀಲರು ಈ ಪ್ರಕರಣದ ತನಿಖೆ ಕಳಂಕಿತ ಎಂದಿದ್ದರು.
(ಒನ್ಇಂಡಿಯಾ ಸುದ್ದಿ)