ದೆಹಲಿ ಗಲಭೆ: ಮೂವರು ವಿದ್ಯಾರ್ಥಿಗಳಿಗೆ ಜಾಮೀನು ಆದೇಶ ಎತ್ತಿಹಿಡಿದ ಸುಪ್ರೀಂ
ನವದೆಹಲಿ, ಜೂ. 18: ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಜಾಮೀನು ಲಭಿಸಿದ ಹಿನ್ನೆಲೆ ಜೈಲಿನಿಂದ ಹೊರಗಿರಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳುವ ಮೂಲಕ ದೆಹಲಿ ಹೈಕೋರ್ಟ್ ಹಾಗೂ ಕಡಕಡ್ಡೂಮಾ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ಆದಾಗ್ಯೂ, ''ಭಯೋತ್ಪಾದನಾ-ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪಿತೂರಿ ಆರೋಪ ಹೊತ್ತಿರುವ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡುವ ಹೈಕೋರ್ಟ್ ತೀರ್ಪನ್ನು ಮುಂದಿನ ಯಾವುದೇ ಪ್ರಕರಣಗಳಿಗೆ ಪೂರ್ವನಿದರ್ಶನವಾಗಿ ಬಳಸಲಾಗದು,'' ಎಂದು ಕೂಡಾ ಸುಪ್ರೀಂ ಕೋರ್ಟ್ ಹೇಳಿದೆ.
ಆಸೀಫ್, ಕಲಿತಾ, ನತಾಶಾಗೆ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ದೆಹಲಿ ಪೊಲೀಸರು
ಕಳೆದ ವರ್ಷ (2020) ಮೇ ತಿಂಗಳಲ್ಲಿ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಈ ಮೂವರು ಬಂಧನಕ್ಕೆ ಒಳಗಾಗಿದ್ದು ದೆಹಲಿ ಹೈಕೋರ್ಟ್ ಮೂವರಿಗೂ 2021ರ ಜೂನ್ 15ರಂದು ಜಾಮೀನು ನೀಡಿದೆ.
ಆದರೆ ದೆಹಲಿ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ''ಮೂವರು ಆರೋಪಿಗಳಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಜೈಲಿನಿಂದ ಹೊರಗುಳಿಯಲಿದ್ದಾರೆ,'' ಎಂದು ಹೇಳಿದೆ. ಹಾಗೆಯೇ ದೆಹಲಿ ಹೈಕೋರ್ಟ್ ತೀರ್ಪಿನ ಕಾನೂನು ಅಂಶಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.
ಇನ್ನು ದೆಹಲಿ ಹೈಕೋರ್ಟ್ ಮೂವರ ಬಿಡುಗಡೆಗೆ ಆದೇಶಿಸಿದ್ದರೂ ಮೂವರ ಬಿಡುಗಡೆಯಾಗಿರಲಿಲ್ಲ. ಪೊಲೀಸರು ವಿಳಾಸ ಮತ್ತು ಶ್ಯೂರಿಟಿ ಪರಿಶೀಲನೆ ಮಾಡಬೇಕಾದ ಹಿನ್ನೆಲೆ ಮೂವರನ್ನು ತಕ್ಷಣ ಬಿಡುಗಡೆ ಮಾಡಲು ಕಡಕಡ್ಡೂಮಾ ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು. ತನಿಖಾಧಿಕಾರಿ ಬುಧವಾರ ಹೆಚ್ಚಿನ ಸಮಯಾವಕಾಶ ಕೋರಿದ್ದರು. ಈ ಕಾರಣದಿಂದಾಗಿ ಬುಧವಾರವೂ ಈ ಮೂವರು ಬಿಡುಗಡೆಯಾಗಿರಲಿಲ್ಲ.
ದೆಹಲಿ ಗಲಭೆ: ಆಸೀಫ್, ಕಲಿತಾ, ನತಾಶಾ ತಿಹಾರ್ ಜೈಲಿನಿಂದ ಬಿಡುಗಡೆ
ಈ ಹಿನ್ನೆಲೆ ''ಹೈಕೋರ್ಟ್ ಜಾಮೀನು ನೀಡಿದ ನಂತರವೂ ಸರ್ಕಾರವು ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ,'' ಎಂದು ಆರೋಪಿಸಿ ಶೀಘ್ರ ಬಿಡುಗಡೆಗೆ ಒತ್ತಾಯಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಆಲಿಸಿದ ಹೈಕೋರ್ಟ್, ''ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು,'' ಎಂದು ಹೇಳಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತನ್ಹಾ, ಕಲಿತಾ, ನತಾಶಾ ಬಿಡುಗಡೆಗೊಳಿಸಿ ಕಡ್ಕಡ್ಡೂಮಾ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶದಂತೆ ಗುರುವಾರ ಸಂಜೆ ವೇಳೆಗೆ ಮೂವರು 50,000 ರೂ. ವೈಯಕ್ತಿಕ ಬಾಂಡ್ಗಳ ಜಾಮೀನು ಮೇರೆಗೆ ಬಿಡುಗಡೆಯಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)