'ಸೀರೆ ಹಾಕಿದವರು ಬರಬೇಡಿ' ಎಂದಿದ್ದ ರೆಸ್ಟೋರೆಂಟ್ ಈಗ ಬಂದ್ಗೆ ಸೂಚನೆ!
ನವದೆಹಲಿ, ಸೆಪ್ಟೆಂಬರ್ 29: ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪ್ರವೇಶವನ್ನು ನಿರಾಕರಿಸಿದ್ದ ಆರೋಪದಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಇರುವ ಅಕ್ವಿಲಾ ದೆಹಲಿ ರೆಸ್ಟೋರೆಂಟ್ ಈಗ ಸರಿಯಾದ ಪರವಾನಗಿ ಇಲ್ಲದೆ ಬಂದ್ ಆಗಿದೆ ಎಂದು ವರದಿಯಾಗಿದೆ.
"ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ತನಗೆ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ," ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ದೆಹಲಿಯ ಈ ರೆಸ್ಟೋರೆಂಟ್ ವಿರುದ್ದ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ವೈರಲ್ ವಿಡಿಯೋ: 'ಸೀರೆ ಹಾಕಿದ್ದೀರಿ ನಮ್ಮ ರೆಸ್ಟೋರೆಂಟ್ಗೆ ಬರಬೇಡಿ'!
ಈಗ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಇರುವ ಈ ಅಕ್ವಿಲಾ ರೆಸ್ಟೋರೆಂಟ್ನ್ನು ಮುಚ್ಚಿಸಿದೆ ಎಂದು ಹೇಳಲಾಗಿದೆ. "ಸರಿಯಾಗಿ ಯಾವುದೇ ಪರವಾನಗಿ ಇಲ್ಲದ ಕಾರಣದಿಂದಾಗಿ ರೆಸ್ಟೋರೆಂಟ್ ಅನ್ನು ಮುಚ್ಚಿಸಲಾಗಿದೆ," ಎಂದು ಮಾಲೀಕರು ತಿಳಿಸಿದ್ದಾರೆ ಎಂದು ವರದಿಗಳು ಹೇಳಿದೆ.
ಈ ಬಗ್ಗೆ ಮಾಧ್ಯಮಕ್ಕೆ ಬುಧವಾರ ಮಾಹಿತಿ ನೀಡಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಮ್ಸಿ) ಅಧಿಕಾರಿಗಳು, "ಸರಿಯಾದ ಪರವಾನಗಿ ಇಲ್ಲದೆಯೇ ಕಾರ್ಯನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯ ಈ ಹೊಟೇಲ್ ಅನ್ನು ಮುಚ್ಚುವಂತೆ ನೊಟೀಸ್ ನೀಡಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 24 ರಂದು ಈ ನೊಟೀಸ್ ಅನ್ನು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನೀಡಿದೆ. ಈ ನೊಟೀಸ್ನಲ್ಲಿ, "ಸೆಪ್ಟೆಂಬರ್ 21 ರಂದು ಸಾರ್ವಜನಿಕ ಆರೋಗ್ಯ ತಪಾಸಕರು ತಪಾಸಣೆಯ ಸಮಯದಲ್ಲಿ ಈ ರೆಸ್ಟೋರೆಂಟ್ಗೆ ಸರಿಯಾದ ವ್ಯಾಪಾರದ ಪರವಾನಗಿ ಇಲ್ಲದೆ ಇರುವುದನ್ನು ಕಂಡು ಕೊಂಡಿದೆ. ಹಾಗೆಯೇ ಯಾವುದೇ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಕೂಡಾ ಪತ್ತೆ ಹಚ್ಚಿದೆ. ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿ ಈ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ ಎಂದು ಕೂಡಾ ತಿಳಿದು ಬಂದಿದೆ," ಎಂದು ಹೇಳಿದೆ.
"ಸಾರ್ವಜನಿಕ ಆರೋಗ್ಯ ತಪಾಸಕರು ಸೆಪ್ಟೆಂಬರ್ 24 ರಂದು ಮತ್ತೊಮ್ಮೆ ಸ್ಥಳವನ್ನು ಪರಿಶೀಲಿಸಿದರು. ವ್ಯಾಪಾರವು ಅದೇ ರೀತಿಯಾಗಿ ನೈರ್ಮಲ್ಯವಿಲ್ಲದೆ ನಡೆಯುತ್ತಿರುವುದು ಕಂಡು ಬಂದಿದೆ. ಈ ನೋಟಿಸ್ ಸ್ವೀಕರಿಸಿದ 48 ಗಂಟೆಗಳಲ್ಲಿ ವ್ಯಾಪಾರವನ್ನು ಮುಚ್ಚಲು ನಿಮಗೆ ನಿರ್ದೇಶಿಸಲಾಗಿದೆ. ವಿಫಲವಾದರೆ ನಾವು ರೆಸ್ಟೋರೆಂಟ್ ಅನ್ನು ನೇರವಾಗಿ ವಶಕ್ಕೆ ಪಡೆಯುತ್ತೇವೆ ಬೇರೆ ಕ್ರಮವನ್ನು ಕೂಡಾ ಕೈಗೊಳ್ಳುತ್ತೇವೆ," ಎಂದು ಕೂಡಾ ರೆಸ್ಟೋರೆಂಟ್ ಮಾಲೀಕರಿಗೆ ಎಸ್ಡಿಎಂಸಿ ನೋಟಿಸ್ನಲ್ಲಿ ಸೂಚನೆ ನೀಡಿದೆ.
ಇನ್ನು ಇದಕ್ಕೆ ಸೆಪ್ಟೆಂಬರ್ 27 ರಂದು ಪ್ರತಿಕ್ರಿಯೆ ನೀಡಿರುವ ಈ ರೆಸ್ಟೋರೆಂಟ್ ಮಾಲಿಕರು, "ನೊಟೀಸ್ ನೀಡಿದ ಕೂಡಲೇ ನಾನು ವ್ಯಾಪಾರವನ್ನು ಕೂಡಲೇ ಬಂದ್ ಮಾಡಿದ್ದೇವೆ. ಆರೋಗ್ಯದ ದೃಷ್ಟಿಯಿಂದ ಎಸ್ಡಿಎಂಸಿ ನೀಡುವ ಟ್ರೇಡ್ ಲೈಸೆನ್ಸ್ ಇಲ್ಲದೆ ಯಾವುದೇ ರೆಸ್ಟೋರೆಂಟ್ ನಡೆಯಲು ಸಾಧ್ಯವಿಲ್ಲ. ಅದರಿಂದಾಗಿ ಭವಿಷ್ಯದಲ್ಲಿ ತೊಂದರೆ ಉಂಟು ಆಗಬಹುದು," ಎಂದು ತಿಳಿಸಿದ್ದಾರೆ.
ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಇರುವ ಅಕ್ವಿಲಾ ದೆಹಲಿ ರೆಸ್ಟೋರೆಂಟ್ನಲ್ಲಿ ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ "ಸೀರೆ ಹಾಕಿದವರಿಗೆ ಈ ರೆಸ್ಟೋರೆಂಟ್ನಲ್ಲಿ ಅವಕಾಶವಿಲ್ಲ ಎಂದು ಎಲ್ಲಿ ಬರೆಯಲಾಗಿದೆ. ನನಗೆ ತೋರಿಸಿ," ಎಂದು ಮಹಿಳೆಯು ಆಗ್ರಹ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೆಸ್ಟೋರೆಂಟ್ನ ಮಹಿಳಾ ಸಿಬ್ಬಂದಿಯು "ಮೇಡಮ್ ನಾವು ಇಲ್ಲಿ ಸ್ಮಾರ್ಟ್ ಕ್ಯಾಷುವಲ್ಸ್ ಧರಿಸಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್ ಅಲ್ಲ," ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
Saree is not allowed in Aquila restaurant as Indian Saree is now not an smart outfit.What is the concrete definition of Smart outfit plz tell me @AmitShah @HardeepSPuri @CPDelhi @NCWIndia
— anita choudhary (@anitachoudhary) September 20, 2021
Please define smart outfit so I will stop wearing saree @PMishra_Journo #lovesaree pic.twitter.com/c9nsXNJOAO
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಅನಿತಾ ಔಧರಿ ಎಂಬ ಟ್ವಿಟ್ಟಿಗರು, "ಭಾರತೀಯ ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್ ಅಲ್ಲ ಎಂಬ ಕಾರಣಕ್ಕೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್ನಲ್ಲಿ ಸೀರೆ ಉಟ್ಟವರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಹಾಗಾದರೆ ಈ ಸ್ಮಾರ್ಟ್ ಕ್ಯಾಷುವಲ್ಸ್ ಎಂದರೆ ಏನು ಎಂಬುವುದನ್ನು ಈಗ ನೀವು ನಮಗೆ ಹೇಳಬೇಕು. ದಯವಿಟ್ಟು ಸ್ಮಾರ್ಟ್ ಕ್ಯಾಷುವಲ್ಸ್ ಎಂದರೆ ಏನು ಎಂದು ಹೇಳಿ, ಬಳಿಕ ನಾನು ಸೀರೆಯನ್ನು ಉಡುವುದನ್ನು ನಿಲ್ಲಿಸುತ್ತೇನೆ," ಎಂದು ಹೇಳಿದ್ದರು.
ಅನಿತಾ ಔಧರಿ ಈ ವಿಡೀಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಪೊಲೀಸ್, ರಾಷ್ಟ್ರೀಯ ಮಹಿಳಾ ಆಯೋಗ, ಪತ್ರಕರ್ತರನ್ನು ಟ್ಯಾಗ್ ಮಾಡಿದ್ದರು. ಹಾಗೆಯೇ #lovesaree ಎಂದು ಹ್ಯಾಷ್ ಟ್ಯಾಗ್ ಹಾಕಿದ್ದರು. ಈ ಬಳಿಕ ಹಲವಾರು ಮಂದಿ #lovesaree ಎಂದು ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಲು ಆರಂಭಿಸಿದ್ದರು.
(ಒನ್ಇಂಡಿಯಾ ಸುದ್ದಿ)