ದೆಹಲಿಯಲ್ಲಿ ಮೊದಲ ಓಮಿಕ್ರಾನ್ ದೃಢ: ದೇಶದ ಐದನೇ ಪ್ರಕರಣ
ನವದೆಹಲಿ, ಡಿಸೆಂಬರ್ 05: ಭಾರತದ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ವೈರಸ್ನ ಹೊಸ ಓಮಿಕ್ರಾನ್ನ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ ಕಂಡಿದೆ.
ದೆಹಲಿ ಆರೋಗ್ಯ ಸಚಿವ, ಆಮ್ ಆದ್ಮಿ ಪಕ್ಷದ ಮುಖಂಡ ಸತ್ಯೇಂದ್ರ ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ತಾಂಜಾನಿಯಾದಿಂದ ಆಗಮಿಸಿದ ಒಬ್ಬ ವ್ಯಕ್ತಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಜೀನೋಮ್ ಸಿಕ್ವೆಂನ್ಸಿಗ್ನಲ್ಲಿ ಓಮಿಕ್ರಾನ್ ರೂಪಾಂತರ ಇರುವುದು ಕಂಡು ಬಂದಿದೆ," ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ
"ಒಟ್ಟು 12 ಜನರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿದೆ, ಅದರಲ್ಲಿ ಒಮಿಕ್ರಾನ್ ರೂಪಾಂತರವು ಓರ್ವ ವ್ಯಕ್ತಿಯಲ್ಲಿ ದೃಢಪಟ್ಟಿದೆ," ಎಂದು ದೆಹಲಿ ಸರ್ಕಾರವು ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
"ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರದ ಒಂದು ಪ್ರಕರಣ ಪತ್ತೆಯಾದ ಹಿನ್ನೆಲೆಯಿಂದ ದೇಶದಲ್ಲಿ ಈ ಹೊಸ ಕೋವಿಡ್ ರೂಪಾಂತರದ ಪ್ರಕರಣಗಳ ಸಂಖ್ಯೆಯು ಐದಕ್ಕೆ ಏರಿಕೆ ಆಗಿದೆ. ಅಧಿಕಾರಿಗಳು ನಡೆಸಿದ ಮೊದಲ ಪರೀಕ್ಷೆಯ ಆಧಾರದಲ್ಲಿ ಈ ಅವಲೋಕನ ಮಾಡಲಾಗಿದೆ. ನಾಳೆ ಮತ್ತೊಂದು ಬಾರಿ ಪರೀಕ್ಷೆಯನ್ನು ನಡೆಸಲಾಗುತ್ತದೆ," ಎಂದು ದೆಹಲಿ ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
"ದೆಹಲಿಯಲ್ಲಿನ ಓಮಿಕ್ರಾನ್ ಸೋಂಕಿತ ವ್ಯಕ್ತಿಯನ್ನು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವ್ಯಕ್ತಿ ತಾಂಜಾನಿಯಾದಿಂದ ಆಗಮಿಸಿದ ವ್ಯಕ್ತಿ. ನವೆಂಬರ್ 17 ರವೆರರೆಗೆ ಯಾರಿಗೆಲ್ಲಾ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆಯೋ ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ," ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. '
ದೇಶದ ಮೂರನೇ ಓಮಿಕ್ರಾನ್ ಪ್ರಕರಣ ಗುಜರಾತ್ನಲ್ಲಿ ಪತ್ತೆ
ಭಾರತದಲ್ಲಿ ಐದು ಪ್ರಕರಣ ಯಾವ ರಾಜ್ಯಗಳಲ್ಲಿ ದಾಖಲು?
ಭಾರತದಲ್ಲಿ ಮೊದಲ ಕೊರೊನಾ ವೈರಸ್ನ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣವು ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಬಳಿಕ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಓಮಿಕ್ರಾನ್ ಪ್ರಕರಣಗಳು ದಾಖಲು ಆಗಿದೆ.
ಅಂತಾರಾಷ್ಟ್ರೀಯ ಮಾರ್ಗಸೂಚಿ ಬಿಗಿ
ಓಮಿಕ್ರಾನ್ ಭಯದ ನಡುವೆ ಅಪಾಯದಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದೆ. ಅಪಾಯದಲ್ಲಿರುವ ದೇಶಗಳು ಎಂದು ಗುರುತಿಸಲಾದ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಭಾರತಕ್ಕೆ ಬಂದ ಕೂಡಲೇ ಅವರ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಈ ಪ್ರಯಾಣಿಕರು ಭಾರತ ದೇಶಕ್ಕೆ ಬಂದ ನಂತರ ಏಳು ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕು. ಮತ್ತೆ ಮಗದೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಈ ವೇಳೆ ಕೋವಿಡ್ ಪಾಸಿಟಿವ್ ಆದ್ದಲ್ಲಿ ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್ಗೆ ಕಳುಹಿಸಲಾಗುತ್ತದೆ. ತಕ್ಷಣ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ.
ದೆಹಲಿಯಲ್ಲಿ ಕೋವಿಡ್ ಮಾರ್ಗಸೂಚಿ ಹೀಗಿದೆ
ದೆಹಲಿಯಲ್ಲಿ ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಯು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗಿದೆ. ಕೊರೊನಾ ವೈರಸ್ ಸೋಂಕು ದೃಢಪಟ್ಟರೆ ಆ ವ್ಯಕ್ತಿಯನ್ನು ಐಸೋಲೇಶನ್ನಲ್ಲಿ ಇರಿಸಲಾಗುತ್ತದೆ ಹಾಗೂ ಆ ವ್ಯಕ್ತಿಯ ಮಾದರಿಯನ್ನು ಜೀನೋಮ್ ಸಿಕ್ವೆಂನ್ಸಿಗ್ಗೆ ಕಳುಹಿಸಲಾಗುತ್ತದೆ. ಹಾಗೆಯೇ ಎಲ್ಲಾ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಇದಕ್ಕಾಗಿ ದೆಹಲಿಯ ಲೋಕ ನಾಯಕ ಜೈಪ್ರಕಾಶ್ ಆಸ್ಪತ್ರೆಯಲ್ಲಿ ವಿಶೇಷವಾಗಿ 40 ಬೆಡ್ಗಳನ್ನು ಕಾಯ್ದಿರಿಸಲಾಗಿದೆ. ನೆಗೆಟಿವ್ ವರದಿ ಬಂದರೆ, ಪ್ರಯಾಣಿಕರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ಗೆ ಒಳಗಾಗಬೇಕು. ಎಂಟನೇ ದಿನದಂದು ಮತ್ತೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇನ್ನು ಕೋವಿಡ್ ಪರೀಕ್ಷೆಯ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗಿದೆ. ಅಪಾಯದ ರಾಷ್ಟ್ರಗಳನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಜನರಿಗೆ ಯಾವುದೇ ನಿರ್ಬಂಧಗಳು ಇಲ್ಲ. 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ. ಐದು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಯಾವುದೇ ಕೋವಿಡ್ ಪರೀಕ್ಷೆ ಇಲ್ಲ. ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಇದ್ದರೆ ಪರೀಕ್ಷೆ ಮಾಡಲಾಗುತ್ತದೆ.
Recommended Video
(ಒನ್ಇಂಡಿಯಾ ಸುದ್ದಿ)