ದೆಹಲಿಯಲ್ಲಿ ಪ್ರತಿ 5 ನಿಮಿಷಕ್ಕೆ ಓರ್ವ ಕೊರೊನಾಗೆ ಬಲಿ
ನವದೆಹಲಿ, ನವೆಂಬರ್ 23: ದೆಹಲಿಯಲ್ಲಿ ಪ್ರತಿ ನಿಮಿಷಕ್ಕೆ ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಡುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ ತಿಳಿದುಬಂದಿದೆ.
ಕನಿಷ್ಠ ಐದು ಮಂದಿ ಪ್ರತಿ ಗಂಟೆಗೆ ಮೃತಪಡುತ್ತಿದ್ದಾರೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮೃತಪಟ್ಟಿರುವ ಒಟ್ಟು ಸಂಖ್ಯೆಯ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ವಿಶ್ಲೇಷಣೆ ನಡೆಸಿದೆ.
ಭಾರತದಲ್ಲಿ 91 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಪ್ರಕರಣ
ದೆಹಲಿಯಲ್ಲಿ ಕಳೆದ ಒಂದು ದಿನದಲ್ಲಿ 121 ಮಂದಿ ಮೃತಪಟ್ಟಿದ್ದಾರೆ. ಶನಿವಾರ 111 ಮಂದಿ ಮೃತಪಟ್ಟಿದ್ದರು. ಶುಕ್ರವಾರ 118, ನವೆಂಬರ್ 18 ರಂದು 131 ಮಂದಿ ಮೃತಪಟ್ಟಿದ್ದರು.
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗಿರುವ ಮತ್ತೊಂದು ಕಾರಣದ ಬಗ್ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾತನಾಡಿದ್ದಾರೆ. ಈಗಾಗಲೇ ಕೊರೊನಾ ಸೋಂಕಿನ ಮೂರನೇ ಅಲೆಯಿಂದ ದೆಹಲಿ ತತ್ತರಿಸಿದೆ ಹೀಗಿರುವಾಗ ಕೊರೊನಾ ಸೋಂಕಿತರ ಸಾವಿಗೆ ತ್ಯಾಜ್ಯ ಸುಡುವಿಕೆಯೂ ಕಾರಣ ಎಂಬುದು ತಿಳಿದುಬಂದಿದೆ.
ದೆಹಲಿಯಲ್ಲಿ ಕೊವಿಡ್-19 ಸಾವಿನ ಪ್ರಮಾಣ ಹೆಚ್ಚಾಗಲು ಕೃಷಿ ತ್ಯಾಜ್ಯ ಸುಡುವುದು ಪ್ರಮುಖ ಕಾರಣವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸೋಮವಾರ ಹೇಳಿದ್ದಾರೆ.ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ.
ದೆಹಲಿಗೆ ಇದು ಡಬಲ್ ಹೊಡೆತ. ಕೃಷಿ ತ್ಯಾಜ್ಯ ಸುಡುವುದು ಈಗ ಸ್ವಲ್ಪ ಕಡಿಮೆಯಾಗಿರುವುದರಿಂದ ಮಾಲಿನ್ಯವೂ ಕಡಿಮೆಯಾಗಿದ್ದು, ಕೊರೊನಾ ಸಾವಿನ ಪ್ರಮಾಣವೂ ಕೆಲವೇ ವಾರಗಳಲ್ಲಿ ಇಳಿಕೆಯಾಗಲಿದೆ ಎಂದು ಜೈನ್ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 91 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಒಂದೇ ದಿನ 44059 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 41024 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 511 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
Recommended Video
ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 91,39,866ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,33,738 ಮಂದಿ ಪ್ರಾಣ ಬಿಟ್ಟಿದ್ದಾರೆ. 85,62,642 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 4,43,486 ಸಕ್ರಿಯ ಪ್ರಕರಣಗಳಿವೆ.