ದೆಹಲಿ ವಾಯು ಮಾಲಿನ್ಯ: ಮೂರು ದಿನ ಶಾಲೆ ಕಾಲೇಜು ಬಂದ್
ನವದೆಹಲಿ, ನವೆಂಬರ್, 6: ದೇಶ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಜನರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗುವುದರ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ವಾಯು ಮಾಲಿನ್ಯ ಸಮಸ್ಯೆ ಕುರಿತು ಭಾನುವಾರ ತುರ್ತು ಸಭೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು " ಮುಂದಿನ ಮೂರು ದಿನಗಳ ಕಾಲ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ಐದು ದಿನಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ಮತ್ತು ತೆರವು ಕಾರ್ಯಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಅಷ್ಟೇ ಅಲ್ಲದೆ ಮುಂದಿನ 10 ದಿನಗಳ ಕಾಲ ಆಸ್ಪತ್ರೆ ಮತ್ತು ತುರ್ತು ಸ್ಥಳಗಳಲ್ಲಿ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಡೀಸೆಲ್ ಚಾಲಿತ ಜರೇಟರ್ ಗಳ ಮೇಲೆ ನಿಷೇಧ ಹೇರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗುವ ವಾಹನಗಳ ಹೊಗೆ ನಿಯಂತ್ರಿಸಲು ಶೀಘ್ರವೇ ಸಮ-ಬೆಸ ಸಂಚಾರ ನಿಮಯ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಮುಂದಿನ 10 ದಿನಗಳ ಕಾಲ ಬದ್ರಾಪುರ ವಿದ್ಯುತ್ ಸ್ಥಾವರ ಬಂದ್ ಮಾಡಲು ಮತ್ತು 10 ದಿನಗಳ ಕಾಲ ಬೂದಿ ಮಾರಾಟ ನಿಷೇಧಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಾಯುಮಾಲಿನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಜನರಲ್ ನಜೀಬ್ ಜಂಗ್ ಅವರು ತುರ್ತು ಸಭೆ ಕರೆದಿದ್ದಾರೆ. ಸೋಮವಾರ ದೆಹಲಿ ಸುತ್ತಮುತ್ತಲಿನ ರಾಜ್ಯಗಳ ಮುಖ್ಯಮಂತ್ರಿ ಸಚಿವರ ಸಭೆಯನ್ನೂ ಸಹ ಕರೆಯಲಾಗಿದೆ.