ರಕ್ಷಣಾ ಇಲಾಖೆಯ ದಾಖಲೆ ಹೊಂದಿದ್ದ ಪತ್ರಕರ್ತನ ಬಂಧನ
ನವದೆಹಲಿ, ಸೆಪ್ಟೆಂಬರ್ 19: ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ಲಾಸಿಫೈಡ್ ಪತ್ರಗಳನ್ನು ಹೊಂದಿದ್ದ ಆರೋಪದಲ್ಲಿ ದೆಹಲಿ ನಗರ ಮೂಲದ ಪತ್ರಕರ್ತ ಮತ್ತು ಬರಹಗಾರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.
ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್ಐ), ದಿ ಟ್ರಿಬ್ಯೂನ್ ಮತ್ತು ಸಕಾಲ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ರಾಜೀವ್ ಶರ್ಮಾ, ಇತ್ತೀಚೆಗೆ ಚೀನಾದ ಪತ್ರಿಕೆ 'ಗ್ಲೋಬಲ್ ಟೈಮ್ಸ್'ಗೆ ಲೇಖನವೊಂದನ್ನು ಬರೆದಿದ್ದರು. ಅವರನ್ನು ಸೆ. 14ರಂದು ಅಧಿಕೃತ ಗೋಪ್ಯತಾ ಕಾಯ್ದೆ (ಒಎಸ್ಎ) ಅಡಿ ಬಂಧಿಸಲಾಗಿದೆ.
ದೆಹಲಿ ಹಿಂಸಾಚಾರ: ಉಮರ್ ಖಾಲಿದ್ಗೆ 10 ದಿನ ಪೊಲೀಸ್ ಬಂಧನ
'ರಾಜೀವ್ ಶರ್ಮಾ ಪಿತಂಪುರದ ನಿವಾಸಿ. ದೆಹಲಿ ಪೊಲೀಸ್ ವಿಶೇಷ ಘಟಕದ ನೈಋತ್ಯ ವಿಭಾಗದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರನ್ನು ಮರುದಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನಂತರ ಆರು ದಿನಗಳ ಪೊಲೀಸ್ ವಶಕ್ಕೆ ಕರೆದೊಯ್ಯಲಾಗಿದೆ. ಅವರ ಬಳಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ' ಎಂದು ವಿಶೇಷ ಘಟಕದ ಡಿಸಿಪಿ ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.
'ರಾಜೀವ್ ಕಿಷ್ಕಿಂದಾ' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ರಾಜೀವ್ ಶರ್ಮಾಗೆ 11 ಸಾವಿರ ಚಂದಾದಾರರಿದ್ದಾರೆ. ಬಂಧನಕ್ಕೊಳಗಾದ ದಿನ ಅವರು ಎರಡು ವಿಡಿಯೋಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದರು. ಅವುಗಳಲ್ಲಿ ಎಂಟು ನಿಮಿಷದ 'ಚೀನಾ ಮತ್ತೆ ತಂಟೆ ಮಾಡಬಹುದು' ಎಂಬ ಶೀರ್ಷಿಕೆಯ ವಿಡಿಯೋದಲ್ಲಿ, 'ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ನಡುವೆ ಒಪ್ಪಂದ ನಡೆದಿದ್ದರೂ ಶಾಂತಿಯ ಹಾದಿ ಈಗಲೂ ಕಠಿಣವಾಗಿದೆ. ಮಾಸ್ಕೋದಲ್ಲಿ ಇಬ್ಬರು ಸಚಿವರ ನಡುವೆ ನಡೆದ ಮಾತುಕತೆಯಂತೆಯೇ ಎಲ್ಲವೂ ನಡೆಯಲಿದೆ ಎನ್ನುವುದಕ್ಕೆ ಖಾತರಿ ಇಲ್ಲ' ಎಂದಿದ್ದರು.
ದುಡ್ಡು ಕೊಟ್ಟರೆ 15 ನಿಮಿಷದಲ್ಲೇ ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್
ನಾಲ್ಕು ನಿಮಿಷಗಳ ಮತ್ತೊಂದು ಹಿಂದಿ ವಿಡಿಯೋದಲ್ಲಿ 'ಭಾರತೀಯ ಮಾಧ್ಯಮಗಳ ಸ್ಥಿತಿ ಹೀನಾಯವಾಗಿದೆ. ಅದು ಕಾವಲುನಾಯಿಯಾಗಬೇಕಿತ್ತು. ಆದರೆ ಸರ್ಕಾರದ ಲ್ಯಾಪ್ಡಾಗ್ ಆಗಿದೆ' ಎಂದು ಟೀಕಿಸಿದ್ದರು.