ಪತಿಯನ್ನು ಕೊಂದಿದ್ದು ಪತ್ನಿಯೇ! ರೋಚಕ ಪ್ರಕರಣ ಭೇದಿಸಿದ ಪೊಲೀಸರು
ನವದೆಹಲಿ, ಏಪ್ರಿಲ್ 24: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಿ. ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ಅವರ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಒಂದು ವಾರದಲ್ಲಿ ಭೇದಿಸಿದ್ದಾರೆ.
ಇದು ಸಹಜ ಸಾವಲ್ಲ, ಕೊಲೆ ಎಂದು ತನಿಖೆಯ ವೇಳೆ ಸಾಬೀತಾಗಿದ್ದು, ವೈವಾಹಿಕ ಬದುಕಿನ ಕುರಿತು ಸಂತೃಪ್ತಿ ಇಲ್ಲದ ಕಾರಣಕ್ಕೆ ರೋಹಿತ್ ಪತ್ನಿ ಅಪೂರ್ವ ತಿವಾರಿ ಅವರೇ ಪತಿಯನ್ನು ಕೊಂದಿದ್ದಾರೆಂಬ' ಆಘಾತಕಾರಿ ಸಂಗತಿಯನ್ನು ಪೊಲೀಸರು ಹೊರಹಾಕಿದ್ದಾರೆ.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಗನದು ಕೊಲೆ ಎಂಬ ಅನುಮಾನ
ರೋಹಿತ್ ಸಾವಿಗೆ ಸಂಬಂಧಿಸಿದಂತೆ ಹೊರಬಂದ ವೈದ್ಯಕೀಯ ವರದಿಯಲ್ಲಿ ಇದು ಸಹಜ ಸಾವಲ್ಲ, ಅವರು ಉಸಿರುಗಟ್ಟಿ ಸತ್ತಿದ್ದಾರೆ ಎನ್ನಲಾಗಿತ್ತು. ಇದೇ ಎಳೆಯನ್ನಿಟ್ಟುಕೊಂಡು ಪೊಲೀಸರು ರೋಹಿತ್ ಶೇಖರ್ ಅವರ ಮನೆಕೆಲಸದವರನ್ನೂ, ಅವರ ಪತ್ನಿ ಅಪೂರ್ವ ಸವರನ್ನೂ ನಿಗೂಢ ಸ್ಥಳವೊಂದಕ್ಕೆ ಕರೆದೊಯ್ದು ತನಿಖೆ ನಡೆಸಿದ್ದರು. ಈ ಸಂದರ್ಭದಲ್ಲಿ ಪತಿಯನ್ನು ತಾನೇ ಕೊಂದಿದ್ದಾಗಿ ಅಪೂರ್ವ ಅವರು ಸುಳಿವು ಬಿಟ್ಟುಕೊಟ್ಟಿದ್ದರು.
ಏನಿದು ಪ್ರಕರಣ?
ರೋಹಿತ್ ಶೇಖರ್ ಅವರು ಏಪ್ರಿಲ್ 15 ರಂದು ಉತ್ತರಾಖಂಡದಿಂದ ರಾತ್ರಿ ತಡವಾಗಿ ಮನೆಗೆ ಬಂದಿದ್ದರು. ಕುಡಿದಿದ್ದ ಅವರು ಗೋಡೆಯ ಸಹಾಯದಿಂದಲೇ ತಮ್ಮ ರೂಮಿಗೆ ತೆರಳಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆದರೆ ಅದರ ಮರುದಿನ ಅಪರಾಹ್ನ 4:00 ಗಂಟೆಯ ವೇಳೆಗೆ ರೋಹಿತ್ ಅವರ ಮೂಗಿನಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ದಾರಿ ಮಧ್ಯೆಯೇ ಅಸುನೀಗಿದ್ದರು.
ಹೃದಯಾಘಾತ ಎಂಬ ಸುಳ್ಳು ಸುದ್ದಿ
ಈ ಘಟನೆಯ ನಂತರ ಮೇಲ್ನೋಟಕ್ಕೆ ರೋಹಿತ್ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಹೇಳಿದ್ದರು. ಅವರ ಕುಟುಂಬಸ್ಥರೂ ಹಾಗೆಯೇ ನಂಬಿದ್ದರು. ಆದರೆ ಮೂಗಿನಲ್ಲಿ ರಕ್ತ ಸೋರುತ್ತಿದ್ದರಿಂದ ವಿವರವಾಗಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಅವರದು ಸಹಜ ಸಾವಲ್ಲ, ಉಸಿರುಗಟ್ಟಿಸಿ, ಒತ್ತಾಯಪೂರ್ವಕವಾಗಿ ಕೊಲ್ಲಲಾಗಿದೆ ಎಂಬ ಅಂಶ ಹೊರಗೆ ಬಂದಿತ್ತು.
ಎನ್ ಡಿ ತಿವಾರಿ ಪುತ್ರನ ನಿಗೂಢ ಸಾವು, ರೋಹಿತ್ ಪತ್ನಿಯ ಬಂಧನ
|
ಕೊಲೆ ಮಾಡುವುದಕ್ಕೆ ಕಾರಣ?
ಅಪೂರ್ವ ಅವರನ್ನು ಪೊಲಿಸರು ವಿಚಾರಣೆಗೊಳಪಡಿಸಿದಾಗ, ಅವರಿಬ್ಬರ ನಡುವಲ್ಲಿ ಉತ್ತಮ ಬಾಂಧವ್ಯವಿರಲಿಲ್ಲ ಎಂಬುದು ಪೊಲೀಸರಿಗೆ ತಿಳಿದಿದೆ. ತಮ್ಮ ವೈವಾಹಿಕ ಜೀವನದ ಬಗ್ಗೆ ಅಪೂರ್ವ ಅವರಲ್ಲಿ ಬೇಸರವಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. ಮಾತ್ರವಲ್ಲ, ರೋಹಿತ್ ಅವರಿಗೆ ಕುಡಿತದ ಚಟವಿದ್ದಿದ್ದು, ಅಪೂರ್ವ ಅವರಿಗೆ ಇಷ್ಟವಿರಲಿಲ್ಲ. ಈ ಎಲ್ಲ ಕಾರಣದಿಂದ ಅವರು ಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದು, ಕುಡಿದು ಬಂದಿದ್ದ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಮನೆಕೆಲಸದ ಇಬ್ಬರೂ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗನನ್ನು ಒಪ್ಪಿಕೊಂಡಿದ್ದ ತಂದೆ
ಎನ್ ಡಿ ತಿವಾರಿ ಅವರ ಮಗ ತಾನು ಎಂದು ಹಲವು ದಿನಗಳ ಕಾನೂನು ಹೋರಾಟ ನಡೆಸಿದ್ದ ರೋಹಿತ್ ಶೇಖರ್, ಕೊನೆಗೂ ಎನ್ ಡಿ ತಿವಾರಿ ಅವರು ತಮ್ಮನ್ನೂ, ತಮ್ಮ ತಾಯಿಯನ್ನೂ ಒಪ್ಪಿಕೊಳ್ಳುವಂತೆ ಮಾಡಿದ್ದರು. ಡಿಎನ್ ಎ ವರದಿಯೂ ರೋಹಿತ್ ಎನ್ ಡಿ ತಿವಾರಿ ಅವರ ಮಗ ಎಂಬುದನ್ನು ದೃಢಪಡಿಸಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ರೋಹಿತ್ ಅವರ ತಾಯಿಯನ್ನು ಎನ್ ಡಿ ತಿವಾರಿ ವಿವಾಹ ಸಹ ಆಗಿದ್ದರು.