ಆಸೀಫ್, ಕಲಿತಾ, ನತಾಶಾಗೆ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ದೆಹಲಿ ಪೊಲೀಸರು
ನವದೆಹಲಿ, ಜೂ.16: ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಎ.ಜೆ. ಭಂಭಾನಿಯರನ್ನು ಒಳಗೊಂಡ ದ್ವಿ ಸದಸ್ಯ ನ್ಯಾಯಪೀಠವು ಮಂಗಳವಾರ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾಗೆ 50,000 ರೂ. ವೈಯಕ್ತಿಕ ಬಾಂಡ್ಗಳ ಮೇಲೆ ಜಾಮೀನು ನೀಡಿದೆ.
ದೆಹಲಿ ಗಲಭೆ: ದೇವಾಂಗನಾ, ನತಾಶಾ, ಆಸಿಫ್ಗೆ ಹೈಕೋರ್ಟ್ ಜಾಮೀನು ಮಂಜೂರು
ಹಾಗೆಯೇ ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಯಾವುದೇ ಅಪರಾಧ ಎಸಗಿಲ್ಲ ಎಂದು ಕಂಡು ಬರುತ್ತದೆ ಎಂದು ಹೇಳಿದ್ದರು. ಹೈಕೋರ್ಟ್ನ ಈ ತೀರ್ಪಿಗೆ ದೆಹಲಿ ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ದೆಹಲಿ ಪೊಲೀಸರು ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಈ ಮೂವರೂ ಪ್ರಯತ್ನ ಮಾಡಿದ್ದಾರೆ. ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ದೆಹಲಿ ಈಶಾನ್ಯ ಭಾಗದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಸೀಲಾಂಪುರದ ಮದೀನಾ ಮಸೀದಿಯ ಬಳಿ ದಿನವಿಡೀ ಪ್ರತಿಭಟನೆ ನಡೆಸಿದ್ದರು.
ಅಷ್ಟೇ ಅಲ್ಲದೇ ಅಮೆರಿಕ ಅಧ್ಯಕ್ಷರು ಭೇಟಿ ನೀಡುವ ಸಂದರ್ಭದಲ್ಲಿ ಚಕ್ಕಾ ಜಾಮ್ ಕಾರ್ಯಕ್ರಮ ಮಾಡಿ ಅದರಲ್ಲಿ ಹಿಂಸಾಚಾರ ನಡೆಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಯತ್ನ ಮಾಡಿದ್ದರು ಎಂದು ಕೂಡಾ ಪೊಲೀಸರು ಆರೋಪ ಮಾಡಿದ್ದಾರೆ.
ಇನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪರ್ಷಿಯನ್ ಭಾಷೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ ಆಸೀಫ್ ಇಕ್ಬಾಲ್ ತನ್ಹಾ ಕಳೆದ ವರ್ಷ ಮೇನಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿ ಯುಎಪಿಎ ಅಡಿ ಬಂಧಿತರಾಗಿದ್ದು, ಈವರೆಗೂ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ವಿಶ್ವವಿದ್ಯಾನಿಲಯದಲ್ಲಿ ಬ್ಯಾಕ್ಲಾಗ್ ಪರೀಕ್ಷೆಗಳಿಗೆ ಹಾಜರಾಗಲು ಎರಡು ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಆ ಸಂದರ್ಭದಲ್ಲೂ ದೆಹಲಿ ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
''ಆದರೆ ಆಸಿಫ್ ಗಲಭೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಇರಲಿಲ್ಲ. ಗಲಭೆ ಮತ್ತು ಹಿಂಸಾಚಾರ ನಡೆದ ಯಾವುದೇ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿಲ್ಲ. ತನ್ಹಾಗೂ ಗಲಭೆಗೂ ಸಂಬಂಧವಿದೆ ಎಂಬ ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಯಾವುದೇ ಹಣವನ್ನು ಆಸಿಫ್ ಪಡೆದಿರುವ ಆರೋಪಗಳಿಲ್ಲ,'' ಎಂದು ಆಸಿಫ್ ವಕೀಲರು ವಾದಿಸಿದ್ದರು.
(ಒನ್ಇಂಡಿಯಾ ಸುದ್ದಿ)