ದೆಹಲಿಯಲ್ಲಿ ಆಕ್ಸಿಜನ್ ಟ್ಯಾಂಕರ್ಗಳ ಸಂಚಾರಕ್ಕೆ ಗ್ರೀನ್ ಕಾರಿಡಾರ್
ನವದೆಹಲಿ, ಏಪ್ರಿಲ್ 20: ಒಂದು ಕಡೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳು. ಇನ್ನೊಂದು ಕಡೆ ಆಕ್ಸಿಜನ್ ಹೊತ್ತು ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವ ಆಕ್ಸಿಜನ್ ಟ್ಯಾಂಕರ್. ಈ ಸಮಸ್ಯೆ ನಿವಾರಣೆಗೆ ದೆಹಲಿ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಆಕ್ಸಿಜನ್ ಸಾಗಿಸುವ ಟ್ಯಾಂಕರ್ಗಳ ಸಂಚಾರಕ್ಕೆ ಅನುಕೂಲಕ್ಕಾಗಿ ಪೊಲೀಸರು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಹರಿಯಾಣ ಗಡಿಯಿಂದ ಉತ್ತರ ದೆಹಲಿಯ ಪಶ್ಚಿಮ ವಿಹಾರ್ನ COVID-19 ಆಸ್ಪತ್ರೆಗೆ 19,500 ಲಿಕ್ವಿಡ್ ಆಕ್ಸಿಜನ್ ಸಾಗಿಸುವ ಎರಡು ಟ್ಯಾಂಕರ್ಗಳಿಗೆ ಗ್ರೀನ್ ಕಾರಿಡಾರ್ ರಚಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!
ನವದೆಹಲಿಯ ಶ್ರೀ ಆಕ್ಷನ್ ಬಾಲಾಜಿ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಅಗತ್ಯವಿರುವ ಲಿಕ್ವಿಡ್ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು. ರೋಗಿಗಳ ಜೀವ ಉಳಿಸುವುದಕ್ಕೆ ತುರ್ತು ಅಗತ್ಯವಾಗಿ ಬೇಕಿರುವ ಆಕ್ಸಿಜನ್ ಸಾಗಿಸಲು ಹೊರಟ ಟ್ಯಾಂಕರ್ಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ:
ನವದೆಹಲಿಯಲ್ಲಿ ಒಂದೇ ದಿನ 23686 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 877146ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಯಿಂದ 240 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12361ಕ್ಕೆ ಏರಿಕೆಯಾಗಿದೆ. ಸೋಂಕಿತರ ಪ್ರಾಣ ಉಳಿಸುವುದಕ್ಕೆ ರಾಜ್ಯ ಸರ್ಕಾರವು ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.