ರಾಷ್ಟ್ರ ರಾಜಧಾನಿ ಮೇಲಿ ಬಿದ್ದಿದೆಯಾ ಐಸಿಸ್ ಉಗ್ರರ ಕರಿನೆರಳು?
ನವದೆಹಲಿ, ನವೆಂಬರ್.25: ದೇಶಾದ್ಯಂತ ವಾಯುಮಾಲಿನ್ಯಕ್ಕೆ ಸುದ್ದಿಯಾಗಿದ್ದ ರಾಷ್ಟ್ರ ರಾಜಧಾನಿ ಮೇಲೆ ಉಗ್ರರ ಕರಿನೆರಳು ಬಿದ್ದಿದೆ. ಇಸ್ಲಾಂ ರಾಷ್ಟ್ರಗಳಲ್ಲಿ ನೆತ್ತರು ಹರಿಸಿದ ಉಗ್ರರು ಭಾರತದಲ್ಲೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದಾರೆ.
ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದೇಶವೇ ಬಿಚ್ಚಿ ಬೀಳುವಂತಾ ವಿಷಯವೊಂದು ಹೊರ ಬಿದ್ದಿದೆ. ಇಂದು ದಾಳಿ ನಡೆಸಿದ ದೆಹಲಿ ವಿಶೇಷ ಪೊಲೀಸರ ತಂಡ ಮೂವರು ಉಗ್ರರನ್ನು ಬಂಧಿಸಿದೆ. ಶಾಂತಿ ಕದಡಲು ಸ್ಕೆಚ್ ಹಾಕಿದ್ದ ಉಗ್ರರ ಪ್ಲಾನ್ ಉಲ್ಟಾ ಹೊಡೆದಿದೆ. ರಾಷ್ಟ್ರ ರಾಜಧಾನಿಯಲ್ಲೇ ಸ್ಫೋಟಕ್ಕೆ ಸಂಚು ರೂಪಿಸಿದ್ದ ತಂಡಕ್ಕೆ ಪೊಲೀಸರು ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ. ದೆಹಲಿಯಲ್ಲಿ ನಡೆಯಬೇಕಿದ್ದ ಅನಾಹುತವನ್ನು ಕೂದಲೆಳೆಯಲ್ಲಿ ತಪ್ಪಿಸಿದ್ದಾರೆ.
ಬಾಂಗ್ಲಾ ಉಗ್ರರಿಗಾಗಿ ಬೆಂಗಳೂರಲ್ಲಿ ಪಿಜಿ ಹಡುಕಾಡಿದ ಎನ್ಐಎ
ದೇಶದಲ್ಲೇ ನಿಷೇಧಿಸಲ್ಪಟ್ಟ ಅತ್ಯಾಧುನಿಕ ಹಾಗೂ ಸುಧಾರಿತ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಉಗ್ರರ ತಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದೆಹಲಿಯಲ್ಲೇ ಕುಳಿತಿದ್ದ ಈ ಮೂವರು ಉಗ್ರರಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಜೊತೆ ನಂಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೂವರು ಉಗ್ರರನ್ನು ಬಂಧಿಸಿದ ಪೊಲೀಸ್
ಮೂವರು ಉಗ್ರರನ್ನು ಬಂಧಿಸಿರುವ ಬಗ್ಗೆ ದೆಹಲಿ ವಿಶೇಷ ಪೊಲೀಸ್ ಪಡೆಯ ಡಿಸಿಪಿ ಕುಶ್ವಾಹ್ ಮಾಹಿತಿ ನೀಡಿದ್ದಾರೆ. ಇಂದು ದಾಳಿ ನಡೆಸಿರುವ ಪೊಲೀಸರು ಮೂವರು ಉಗ್ರರನ್ನು ಅರೆಸ್ಟ್ ಮಾಡಿದ್ದಾರೆ. ರಂಜಿತ್ ಅಲಿ, ಇಸ್ಲಾಮ್, ಹಾಗೂ ಜಮಾಲ್ ಬಂಧಿತ ಉಗ್ರರು ಎನ್ನಲಾಗಿದೆ. ಇನ್ನು, ಬಂಧಿತ ಉಗ್ರರೆಲ್ಲ ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ.
ಮೂವರು ಉಗ್ರರ ಬಳಿ ಸಿಕ್ಕಿದ್ದು ಏನು?
ಇನ್ನು, ಪೊಲೀಸರ ದಾಳಿ ವೇಳೆ ಬಂಧಿತ ಉಗ್ರರ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ. ಒಂದು ಕೆಜಿ ಸ್ಫೋಟಕ, ಐಇಡಿ, ಹಾಗೂ ಬಾಂಬ್ ತಯಾರಿಕಾ ವಸ್ತುಗಳಿದ್ದು, ಎಲ್ಲವನ್ನೂ ಪೊಲೀಸರು ವಶಕ್ಕೆ ಪೆಡಿದಿದ್ದಾರೆ.
ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆ ಜೊತೆ ಲಿಂಕ್
ಇಸ್ಲಾಂ ರಾಷ್ಟ್ರಗಳಲ್ಲಿ ನೆತ್ತರು ಹರಿಸಿದ ಐಸಿಸ್ ಕರಿನೆರಳು ಇದೀಗ ಭಾರತದ ಮೇಲೂ ಬಿದ್ದಿದೆ. ಇಂದು ಬಂಧಿಸಲ್ಪಟ್ಟಿರುವ ಮೂವರು ಉಗ್ರರು ಇದೇ ಐಸಿಸ್ ಸಂಘಟನೆಯಿಂದ ಪ್ರಭಾವಿತರಾಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ದೆಹಲಿಯಲ್ಲಿ ಕೆಲವರ ಜೊತೆ ಬಂಧಿತರು ನಂಟು ಹೊಂದಿದ್ದು, ಅದು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಗ್ರ ಚಟುವಟಿಕೆಗೆಳಿಗೆ ಬಿಗ್ ಪ್ಲಾನ್
ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎನ್ನಲಾದ ಈ ಬಂಧಿತ ಉಗ್ರರು ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ದೆಹಲಿ ಅಷ್ಟೇ ಅಲ್ಲದೇ, ದೇಶದ ವಿವಿಧ ಪ್ರದೇಶಗಳಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ಕೂದಲೆಳೆಯಲ್ಲೇ ತಪ್ಪಿದಂತಾಗಿದೆ.