ದೆಹಲಿ ಗಲಭೆ; ದೀಪ್ ಸಿಧು ಪತ್ತೆಗೆ ಲಕ್ಷ ನಗದು ಬಹುಮಾನ ಘೋಷಣೆ
ನವದೆಹಲಿ, ಫೆಬ್ರುವರಿ 03: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ದೆಹಲಿಯ ಕೆಂಪು ಕೋಟೆ ಮೇಲೆ ಸಿಖ್ಖರ ಧ್ವಜ ಹಾರಿಸಲು ಪ್ರಚೋದನೆ ನೀಡಿದ ಆರೋಪ ಪಂಜಾಬಿ ನಟ ದೀಪ್ ಸಿಧು ಮೇಲೆ ಕೇಳಿಬಂದಿದ್ದು, ತಲೆ ಮರೆಸಿಕೊಂಡಿರುವ ಆತನ ಪತ್ತೆಗೆ ಸಹಕರಿಸಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಇದರೊಂದಿಗೆ ಗಲಭೆಗೆ ಕಾರಣವಾದ ನಾಲ್ಕು ಪ್ರಮುಖ ವ್ಯಕ್ತಿಗಳ ಬಂಧನಕ್ಕೆ ಸಹಕರಿಸಿದವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಸತ್ಯ ಹೊರತರುತ್ತೇನೆ; ನಾಪತ್ತೆ ನಂತರ ವಿಡಿಯೋ ಪೋಸ್ಟ್ ಮಾಡಿದ ಪಂಜಾಬಿ ನಟ
ದೀಪ್ ಸಿಧು, ಜುಗರಾಜ್ ಸಿಂಗ್ ಹಾಗೂ ದೀಪ್ ಸಿಧು ಜೊತೆಗಿದ್ದ ಮತ್ತಿಬ್ಬರ ಪತ್ತೆಗೆ ಸಹಕರಿಸಿದರೆ ಒಂದು ಲಕ್ಷ ರೂಪಾಯಿ ನೀಡಲಾಗುವುದು. ಜಜ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಇಕ್ಬಾಲ್ ಸಿಂಗ್ ಎಂಬುವರ ಬಂಧನಕ್ಕೆ ಸಹಾಯ ಮಾಡಿದರೆ 50 ಸಾವಿರ ರೂ ನಗದು ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜನವರಿ 26ರಂದು ನಡೆದ ಗಲಭೆ ಪ್ರಕರಣದಲ್ಲಿ ಇವರೆಲ್ಲರೂ ಆರೋಪಿಗಳಾಗಿದ್ದಾರೆ.
ಜನವರಿ 29ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ದೀಪ್ ಸಿಧು, "ನನಗೆ ಸತ್ಯ ಹೊರತರಲು ಸಮಯ ಕೊಡಿ, ನಾನು ತನಿಖೆಗೆ ಹಾಜರಾಗುತ್ತೇನೆ" ಎಂದು ಕೇಳಿಕೊಂಡು ಎರಡು ದಿನಗಳ ನಂತರ ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದರು.
ಜಂಟಿ ಆಯುಕ್ತ ಬಿಕೆ ಸಿಂಗ್ ಹಾಗೂ ಮೂವರು ಡಿಸಿಪಿಗಳಾದ ಜಾಯ್ ಟರ್ಕಿ, ಬೇಶಾಮ್ ಸಿಂಗ್, ಮೋನಿಕಾ ಭಾರದ್ವಾಜ್ ಅವರ ನೇತೃತ್ವದಲ್ಲಿ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.
ರಾಜಧಾನಿಯಲ್ಲಿ ಗಣರಾಜ್ಯ ದಿನದಂದು ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಕಾನೂನಿನಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್, ನ್ಯಾಯಾಧೀಶ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠವು, ಗಣರಾಜ್ಯೋತ್ಸವದಂದು ನಡೆದ ಗಲಭೆ ಸಂಬಂಧ ಪೊಲೀಸರಿಂದ ಬಂಧಿಸಲಾದ ವ್ಯಕ್ತಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕರಿಸಿರುವುದಾಗಿ ತಿಳಿದುಬಂದಿದೆ.