ಹೊಸ ಮಾದರಿಯ ಬಾರ್: ಇಲ್ಲಿ ಉಸಿರಾಡಿ ಖುಷಿಯಲ್ಲಿ ತೇಲಾಡಿ!
Recommended Video
ನವದೆಹಲಿ, ನವೆಂಬರ್ 15: ಬಾರ್ ಎಂಬ ಪದ ಕೇಳಿದರೆ ಮದ್ಯಪ್ರಿಯರ ಕಿವಿ ಹಿಗ್ಗುತ್ತದೆ. ಅಮಲೇರಿಸಿ ಜಗತ್ತನ್ನು ಮರೆಸುವ ಈ ಜಾಗದಿಂದ ಹೊರಬಂದರೆ ಅನೇಕರು ಕಾಲು ಭೂಮಿ ಮೇಲೆ ನೇರವಾಗಿ ಇರುವುದಿಲ್ಲ. ತೂರಾಡುತ್ತಾ ಮನೆ ಸೇರುತ್ತಾರೆ. ಆದರೆ ದೆಹಲಿಯಲ್ಲಿ ಹೊಸ ಬಾರ್ ಆರಂಭವಾಗಿದೆ. ಇದರ ಒಳಗೆ ಹೋದವರು ತೂರಾಡವುದಿಲ್ಲ, ಬಳಿಕ 'ಉಸಿರಾಟ' ನಡೆಸಿದ ಖುಷಿಯಲ್ಲಿ ತೇಲಾಡಬಹುದು. ಇಂತಹ ಹತ್ತಾರು ಬಾರ್ಗಳು ಶೀಘ್ರದಲ್ಲಿಯೇ ರಾಜಧಾನಿಯಲ್ಲಿ ತಲೆ ಎತ್ತುವ ಸಾಧ್ಯತೆ ಇದೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಂಗಳೂರಿಗೂ ಈ ಬಾರ್ ಕಾಲಿಟ್ಟರೆ ಅಚ್ಚರಿಯಿಲ್ಲ. ಹಾಗೆಂದು ಈ 'ಬಾರ್' ನಮ್ಮಲ್ಲಿಯೂ ತೆರೆಯಲಿ ಎಂದು ಪಾನಪ್ರಿಯರು ಸ್ವಾಗತಿಸುವಂತಿಲ್ಲ. ಏಕೆಂದರೆ ಇದು ಮದ್ಯದ ಬಾರ್ಗಿಂದಲೂ ಜೀವಕ್ಕೆ ದುಬಾರಿ. ಇದರ ಒಳಗೆ ಹೋಗುವವರು ಮದ್ಯಪ್ರಿಯರಲ್ಲ. ಬದಲಾಗಿ 'ಜೀವ ಪ್ರಿಯ'ರು. ಅರ್ಥಾತ್ ಈ ಬಾರ್ ಇರುವುದು ಆಲ್ಕೋಹಾಲ್ ಸೇವನೆಗೆ ಅಲ್ಲ, ಜೀವ ಉಳಿಸಿಕೊಳ್ಳಲು.
ಊಟಕ್ಕಾಗಿ ವಿಷಾನಿಲ: ದಿನಾಚರಣೆ ಕಥೆಯಲ್ಲಿ ಮಕ್ಕಳ ವ್ಯಥೆ!
ನಿಜ. ಅತಿಯಾದ ವಾಯುಮಾಲಿನ್ಯದಿಂದ 'ಹೊಂಜು' ಆವರಿಸಿ ಉಸಿರಾಟವೇ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ದೆಹಲಿಯಲ್ಲಿ ಶುದ್ಧ ಗಾಳಿಗಾಗಿ ಜನರು ಪರದಾಡುತ್ತಿದ್ದಾರೆ. ಮೂಗಿನ ಮೂಲಕ ಶ್ವಾಸಕೋಶದೊಳಗೆ ಎಳೆದುಕೊಳ್ಳುವ ಗಾಳಿಯಲ್ಲಿ ಆಮ್ಲಜನಕ ಎಷ್ಟು ಪ್ರಮಾಣದಲ್ಲಿ ಇದೆಯೋ ಗೊತ್ತಿಲ್ಲ, ಆದರೆ ವಿಷಕಾರಿ ಕಣಗಳಂತೂ ಭರಪೂರವಿದೆ. ಇನ್ನು ಜನರು ದೆಹಲಿಯಲ್ಲಿ ಉಸಿರಾಡಲು ಆಕ್ಸಿಜನ್ ಸಿಲಿಂಡರ್ ಹೊತ್ತೊಯ್ಯಬೇಕು, ಇಲ್ಲವೇ ಉಸಿರಾಡಲು ಆಕ್ಸಿಜನ್ ಕೊಡುವ ಕೇಂದ್ರಗಳನ್ನೇ ಸ್ಥಾಪಿಸಬೇಕಾಗುತ್ತದೆ ಎಂಬ ತಮಾಷೆಯ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದು ತಮಾಷೆಯಲ್ಲ, ವಾಸ್ತವವಾಗಿಯೂ ಅನುಷ್ಠಾನಗೊಳ್ಳುತ್ತಿದೆ.
ಆಕ್ಸಿ ಪ್ಯೂರ್ ಬಾರ್
ದೆಹಲಿಯ ಗಾಳಿಯಲ್ಲಿ ವಿಷಕಾರಿ ಅಂಶಗಳ ಪ್ರಮಾಣ ಹೆಚ್ಚಾಗಿ ಗುಣಮಟ್ಟ ಕುಸಿಯುತ್ತಿರುವುದರಿಂದ ಉಸಿರಾಟದ ಗಂಭೀರ ಸಮಸ್ಯೆ ಉಂಟಾದ ಬೆನ್ನಲ್ಲೇ, ಸಾಕೇತ್ನಲ್ಲಿ 'ಆಕ್ಸಿ ಪ್ಯೂರ್' ಎಂಬ ಆಕ್ಸಿಜನ್ ಬಾರ್ ತೆರೆಯಲಾಗಿದೆ. ಇಲ್ಲಿ 15 ನಿಮಿಷಗಳ ಕಾಲ ಪರಿಶುದ್ಧ ಆಮ್ಲಜನಕ ಸಿಗುತ್ತದೆ ಎಂಬ ಆಫರ್ ನೀಡಲಾಗುತ್ತಿದೆ. ಬೇರೆ ಆಮ್ಲಜನಕ ವ್ಯವಸ್ಥೆಗಳಿಗೆ ಹೋಲಿಸಿದರೆ ಈ ದರ ಬಹಳ ಕಡಿಮೆಯಂತೆ!
ಪರಿಮಳಯುಕ್ತ ಗಾಳಿ ಬೇಕೇ?
ಅಂದಹಾಗೆ, ಆಕ್ಸಿ ಪ್ಯೂರ್ ಆರಂಭವಾಗಿದ್ದು ಈ ವರ್ಷದ ಮೇ ತಿಂಗಳಿನಲ್ಲಿ. ಆರ್ಯವೀರ್ ಕುಮಾರ್ ಎಂಬುವವರು ಈ ಬಾರ್ ತೆರೆದಿದ್ದಾರೆ. ಈ ಬಾರ್ ದೆಹಲಿ ನಾಗರಿಕರಿಗೆ ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾಗಿರುವ ಪರಿಶುದ್ಧ ಗಾಳಿಯನ್ನು ಪೂರೈಸುತ್ತಿದೆ. ಅಂದಹಾಗೆ ಗಾಳಿಗೆ ಪರಿಮಳವಿಲ್ಲ. ಸಹಜ ಗಾಳಿಯೊಳಗೆ ಬೆರೆಯುವ ಪರಿಮಳ ಅಥವಾ ದುರ್ವಾಸನೆಯೇ ನಮ್ಮ ಮೂಗಿಗೂ ತಟ್ಟುತ್ತದೆ. ಆದರೆ ಈ ಬಾರ್ನಲ್ಲಿ 7 ವೈವಿಧ್ಯಮಯ ಪರಿಮಳಯುಕ್ತ ಆಮ್ಲಜನಕ ಸಿಗುತ್ತದೆ. ಲೆಮನ್ ಗ್ರಾಸ್, ಕಿತ್ತಳೆ, ದಾಲ್ಚಿನ್ನಿ, ಪುದೀನ, ನೇರಳೆ, ನೀಲಗಿರಿ, ಪೆಪ್ಪರ್ಮಿಂಟ್- ಹೀಗೆ ಯಾವ ಸುವಾಸನೆಯ ಗಾಳಿ ಬೇಕೋ ನೀವು ಆಯ್ದುಕೊಳ್ಳಬಹುದು.
ಜನರು ಮುಖ ಮುಚ್ಚಿಕೊಳ್ಳದೇ ವಿಧಿಯಿಲ್ಲ: ಯಾರಿಗೆ ಹೇಳೋಣಾ ಇವರ ಪ್ರಾಬ್ಲಮ್?
ದಿನಕ್ಕೆ ಒಂದು ಬಾರಿ ಸಾಕು
'ವಾತಾವರಣದ ಒತ್ತಡವನ್ನು ನಿಯಂತ್ರಿಸುವ ಮೂಲಕ ನಾವು ಹದಿನೈದು ನಿಮಿಷಗಳವರೆಗೆ ವಿಭಿನ್ನ ಸುವಾಸನೆಯ ಆಮ್ಲಜನಕವನ್ನು ಒದಗಿಸುತ್ತೇವೆ. ಇದರಿಂದ ಅನೇಕ ಅನುಕೂಲಗಳಿವೆ. ಗ್ರಾಹಕರಿಗೆ ಒಂದು ನಳಿಗೆಯನ್ನು ನೀಡಲಾಗುತ್ತದೆ. ಅದರಿಂದ ಬರುವ ಆಮ್ಲಜನಕವನ್ನು ಗ್ರಾಹಕರು ಒಳಗೆಳೆದುಕೊಳ್ಳಬೇಕು. ಈ ನಿರ್ದಿಷ್ಟ ಆಮ್ಲಜನಕವನ್ನು ಒಬ್ಬ ವ್ಯಕ್ತಿ ದಿನಕ್ಕೆ ಒಂದು ಬಾರಿ ಮಾತ್ರ ನಿರ್ದಿಷ್ಟ ಅವಧಿಯಲ್ಲಿ ಉಸಿರಾಡಬೇಕು. ಅದಕ್ಕಿಂತ ಹೆಚ್ಚು ಸಲ ಮಾಡಬಾರದು' ಎಂದು ಆಕ್ಸಿಜನ್ ಬಾರ್ನ ಸಿಬ್ಬಂದಿ ಮುಖ್ಯಸ್ಥ ಬೋನಿ ಇರೆಂಗ್ಬಾಮ್ ತಿಳಿಸಿದ್ದಾರೆ.
ಆಕ್ಸಿ ಪ್ಯೂರ್ನಿಂದ ಹಲವು ಲಾಭ
ಆಕ್ಸಿ ಪ್ಯೂರ್ನಲ್ಲಿನ ಶುದ್ಧ ಗಾಳಿಯನ್ನು ಉಸಿರಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಆಕ್ಸಿಜನ್ ಬಾರ್ ಹೇಳುತ್ತದೆ. ಇದು ದೇಹಕ್ಕೆ ಎನರ್ಜಿಕೊಡುವುದರ ಜತೆಗೆ ಮನಸ್ಸನ್ನು ಕೂಡ ಶುದ್ಧಗೊಳಿಸುತ್ತದೆ. ಇದರಿಂದ ನಿದ್ರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜತೆಗೆ ಚರ್ಮಕ್ಕೆ ಹೊಳಪು ಸಿಗುತ್ತದೆ. ಅಲ್ಲದೆ, ಖಿನ್ನತೆಯ ಸಮಸ್ಯೆಯನ್ನು ಗುಣಪಡಿಸಬಲ್ಲದು ಮತ್ತು ದೇಹದ ಪಚನಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತ್ತದೆ ಎಂದು ಬೋನಿ ವಿವರಿಸಿದ್ದಾರೆ.
ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಕೆರಳಿ ಕೆಂಡವಾದ ಸಿಎಂ ಕೇಜ್ರಿವಾಲ್!