ಸ್ವಾತಂತ್ರ್ಯ ದಿನದಂದು ಉಗ್ರದಾಳಿಯ ಬೆದರಿಕೆ: ದೆಹಲಿಯಲ್ಲಿ ಕಟ್ಟೆಚ್ಚರ
ನವದೆಹಲಿ, ಜುಲೈ 19: ರಾಜಧಾನಿ ದೆಹಲಿ ಮೇಲೆ ಉಗ್ರ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್(ಜೆಇಎಂ) ಉಗ್ರ ಸಂಘಟನೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ರಾಜಧಾನಿಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.
ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ದಿನದಂದು ದೆಹಲಿ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉಗ್ರಗಾಮಿಗಳಿಂದ ಮತ್ತೊಂದು ರಣಹೇಡಿ ಪಿತೂರಿ, ನೌಕಾ ಸೇನೆ ಮೇಲೆ ಗುರಿ!
ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಸಯ್ಯದ್ ಮುನೀರ್ ಉಲ್ ಹಸನ್ ಖ್ವಾದ್ರಿ, ಆಶಿಖ್ ಬಾಬಾ ಮತ್ತು ತಾರಿಖ್ ಅಹ್ಮದ್ ದರ್ ಎಂಬ ಮೂವರು ಉಗ್ರರನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದು, ಇವರ ಮೂಲಕ ಹಲವು ಆಘಾತಕಾರಿ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಕಾಶ್ಮೀರದ ಯುವಕರನ್ನು ತಪ್ಪು ಹಾದಿಗೆಳೆಯುವ, ಅವರಲ್ಲಿ ಭಾರತದ ಬಗ್ಗೆ ದ್ವೇಷ ಬಿತ್ತುವ ಕೆಲಸವನ್ನು ಈ ಉಗ್ರರು ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಬುರಾನ್ ವಾನಿ ಮತ್ತಿತರ ಸಾವಿವ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಕಣಿವೆ ರಾಜ್ಯದಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿರುವುದಾಗಿ ಈ ಉಗ್ರರು ಒಪ್ಪಿಕೊಂಡಿದ್ದಾರೆ.
ರಾಜಧಾನಿ ದೆಹಲಿ ಮೇಲೆಯೂ ಉಗ್ರ ದಾಳಿ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂಬುದನ್ನೂ ಇವರೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಪ್ರಸಿದ್ಧ ಸ್ಮಾರಕಗಳ ಬಳಿ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.