ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮಾರ್ಚ್.3ಕ್ಕೆ ಗಲ್ಲುಶಿಕ್ಷೆ
ನವದೆಹಲಿ, ಫೆಬ್ರವರಿ.17: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ದೆಹಲಿ ಹೈಕೋರ್ಟ್ ಡೆತ್ ವಾರಂಟ್ ಜಾರಿಗೊಳಿಸಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಾರ್ಚ್.03ರಂದು ಗಲ್ಲುಶಿಕ್ಷೆ ವಿಧಿಸುವಂತೆ ವಾರಂಟ್ ಜಾರಿಗೊಳಿಸಿದೆ.
ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಗೆ ಕೇಂದ್ರ ಗೃಹ ಸಚಿವಾಲಯವು ಮೇಲ್ಮನವಿ ಸಲ್ಲಿಸಿದ್ದು, ದೋಷಿಗಳ ಗಲ್ಲುಶಿಕ್ಷೆಗೆ ವಾರಂಟ್ ಹೊರಡಿಸುವಂತೆ ಹೈಕೋರ್ಟ್ ಗೆ ಸೂಚನೆ ನೀಡಲು ಅರ್ಜಿ ಸಲ್ಲಿಸಿತ್ತು.
ನಿರ್ಭಯಾ ಪ್ರಕರಣ: ದೋಷಿ ವಿನಯ್ ಶರ್ಮಾ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಫೆಬ್ರವರಿ.13ರಂದು ದೋಷಿ ವಿನಯ್ ಶರ್ಮಾ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು, ಸದೃಢವಾಗಿರುವ ದೋಷಿಗೆ ಯಾವುದೇ ಆರೋಗ್ಯ ತಪಾಸಣೆ ಅಗತ್ಯವಿಲ್ಲ ಎಂದು ಹೇಳಿತ್ತು.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳ ಗಲ್ಲುಶಿಕ್ಷೆಗೆ ಹೊಸದಾಗಿ ದಿನಾಂಕ ನಿಗದಿಗೊಳಿಸುವುದು ಮತ್ತು ಡೆತ್ ವಾರಂಟ್ ಹೊರಡಿಸುವುದು ಪಟಿಯಾಲಾ ಹೌಸ್ ಕೋರ್ಟ್ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.
ಈ ಮೊದಲು ಎರಡು ಬಾರಿ ನಾಲ್ವರು ದೋಷಿಗಳ ಗಲ್ಲುಶಿಕ್ಷೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಜನವರಿ.22ರ ಬೆಳಗ್ಗೆ 6 ಗಂಟೆಗೆ ಮೊದಲ ಬಾರಿ ಗಲ್ಲುಶಿಕ್ಷೆ ವಿಧಿಸುವಂತೆ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸಿತ್ತು.
ದೋಷಿಗಳ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮೊದಲು ನೀಡಿದ ಆದೇಶಕ್ಕೆ ಪಟಿಯಾಲಾ ಹೌಸ್ ಕೋರ್ಟ್ ತಡೆ ನೀಡಿದ್ದು, ನಂತರದಲ್ಲಿ ಫೆಬ್ರವರಿ.01ರ ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶಿಸಿತ್ತು. ಅದಾಗಿ ಎರಡನೇ ಬಾರಿಯೂ ಗಲ್ಲುಶಿಕ್ಷೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್, ಸೋಮವಾರ 3ನೇ ಬಾರಿ ನಾಲ್ವರು ದೋಷಿಗಳ ಗಲ್ಲುಶಿಕ್ಷೆಗೆ ಡೆತ್ ವಾರಂಟ್ ಜಾರಿಗೊಳಿಸಿದೆ.
ಸದ್ಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.