Nirbhaya Case: ದೋಷಿ ಮೇಲೆ ತಿಹಾರ್ ಜೈಲಿನಲ್ಲೇ ನಡೆದಿತ್ತಾ ಹಲ್ಲೆ?
ನವದೆಹಲಿ, ಫೆಬ್ರವರಿ.13: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿ ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಗುರುವಾರ ದೋಷಿ ಪರ ವಕೀಲರು ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಬಾನುಮತಿ ನೇತೃತ್ವದ ಪೀಠವು ಅರ್ಜಿಯ ತೀರ್ಪನ್ನು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಕಾಯ್ದಿರಿಸಿದೆ.
ನಿರ್ಭಯ ಹಂತಕರಿಗೆ ಫೆ.11ರ ತನಕ ಗಲ್ಲು ಶಿಕ್ಷೆ ಇಲ್ಲ
ಇನ್ನು, ಸರ್ಕಾರದ ಪರವಾಗಿ ಸ್ಯಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದು, ದೋಷಿಯನ್ನು ಏಕಾಂತ ಬಂಧನದಲ್ಲಿ ಇರಿಸಿಲ್ಲ. ದೋಷಿ ಪರ ವಕೀಲ ಎ.ಪಿ ಸಿಂಗ್ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿವಾದ ಮಂಡಿಸಿದರು.
ದೋಷಿ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪ
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿ ವಿನಯ್ ಕುಮಾರ್ ಶರ್ಮಾ ಪರ ವಾದ ಮಂಡಿಸಿದ ವಕೀಲ ಎ.ಪಿ. ಸಿಂಗ್ ತಮ್ಮ ಕಕ್ಷಿದಾರನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ತಿಹಾರ್ ಜೈಲಿನಲ್ಲಿ ಪೊಲೀಸರು ತಮ್ಮ ಕಕ್ಷಿದಾರನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದರು.
ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದ ವಕೀಲ
ದೋಷಿ ವಿನಯ್ ಕುಮಾರ್ ಶರ್ಮಾ ಮೇಲೆ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ತಮ್ಮ ಕಕ್ಷಿದಾರರಿಗೆ ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ತಮ್ಮ ಕಕ್ಷಿದಾರನ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಕೀಲ ಎ. ಪಿ. ಸಿಂಗ್ ವಾದ ಮಂಡಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀರ್ಮಾನದ ಕುರಿತು ಪ್ರಶ್ನೆ
ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿ ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತರಾತುರಿಯಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸುವ ಅಗತ್ಯವಾದರೂ ಏನಿತ್ತು. ಅರ್ಜಿಯನ್ನು ಸರಿಯಾಗಿ ಪರಾಮರ್ಶಿಸದೇ ರಾಷ್ಟ್ರಪತಿಗಳು ಈ ತೀರ್ಮಾನ ತೆಗೆದುಕೊಂಡರೆ ಎಂದು ದೋಷಿ ಪರ ವಕೀಲ ಎ.ಪಿ.ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಎರಡು ಬಾರಿ ದೋಷಿಗಳ ಗಲ್ಲುಶಿಕ್ಷೆ ಮುಂದೂಡಿಕೆ
ಈ ಮೊದಲು ಜನವರಿ.22ರ ಬೆಳಗ್ಗೆ 6 ಗಂಟೆಗೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಹೈಕೋರ್ಟ್ ದಿನಾಂಕ ನಿಗದಿಪಡಿಸಿತ್ತು. ನಂತರದಲ್ಲಿ ತನ್ನ ಆದೇಶಕ್ಕೆ ತಡೆ ನೀಡಿದ್ದ ಕೋರ್ಟ್, ಫೆಬ್ರವರಿ.01ರಂದು ಗಲ್ಲುಶಿಕ್ಷೆ ವಿಧಿಸುವುದಕ್ಕೆ ಡೆತ್ ವಾರಂಟ್ ಹೊರಡಿಸಿತ್ತು. ಆದರೆ, ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಬಾಕಿ ಇರುವಂತೆ ಗಲ್ಲುಶಿಕ್ಷೆ ಜಾರಿಗೊಳಿಸಬಾರದು ಎಂದು ದೋಷಿಗಳ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಒಂದು ವಾರದ ಅವಧಿಯಲ್ಲಿ ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿತ್ತು.