ಮಾ.03ರಂದು ನಿರ್ಭಯಾ ಅತ್ಯಾಚಾರ ದೋಷಿಗಳ ಗಲ್ಲುಶಿಕ್ಷೆ ಅನುಮಾನ
ನವದೆಹಲಿ, ಫೆಬ್ರವರಿ.25: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಮಾರ್ಚ್.03ರಂದು ಗಲ್ಲುಶಿಕ್ಷೆ ವಿಧಿಸುವುದು ಅಮಾಮಾನವಾಗಿದೆ. ಏಕೆಂದರೆ ದೋಷಿಗಳಿಗೆ ಪ್ರತ್ಯೇಕವಾಗಿ ಗಲ್ಲುಶಿಕ್ಷೆಗೆ ಗುರಿಪಡಿಸಲು ನಿರ್ದೇಶನ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್.05ಕ್ಕೆ ಮುಂದೂಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಬಾನುಮತಿ ನೇತೃತ್ವದ ನ್ಯಾ.ಅಶೋಕ್ ಭೂಷಣ್, ನ್ಯಾ. ನವಿನ್ ಸಿನ್ಹಾರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಈಗಾಗಲೇ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಾಲ್ವರು ದೋಷಿಗಳಿಗೆ ಮಾರ್ಚ್.03ರಂದು ಗಲ್ಲುಶಿಕ್ಷೆ ವಿಧಿಸುವಂತೆ ಡೆತ್ ವಾರಂಟ್ ಜಾರಿಗೊಳಿಸಿತ್ತು.
ನಿರ್ಭಯಾ ದೋಷಿ ಪ್ರತ್ಯೇಕ ಗಲ್ಲುಶಿಕ್ಷೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ
ಇದೀಗ ಕೇಂದ್ರ ಸರ್ಕಾರವು ಸಲ್ಲಿಸಿದ ಅರ್ಜಿ ವಿಚಾರಣೆಯು ಮಾರ್ಚ್.05ಕ್ಕೆ ಮುಂದೂಡಿಕೆಯಾಗಿದ್ದು, ಈ ಅರ್ಜಿ ಇತ್ಯರ್ಥವಾಗುವರೆಗೂ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೂರನೇ ಬಾರಿಯೂ ದೋಷಿಗಳು ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
ಎರಡು ಬಾರಿ ಮುಂದೂಡಿಕೆಯಾಗಿರುವ ಗಲ್ಲುಶಿಕ್ಷೆ:
ಈ ಮೊದಲು ಎರಡು ಬಾರಿ ನಾಲ್ವರು ದೋಷಿಗಳ ಗಲ್ಲುಶಿಕ್ಷೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಜನವರಿ.22ರ ಬೆಳಗ್ಗೆ 6 ಗಂಟೆಗೆ ಮೊದಲ ಬಾರಿ ಗಲ್ಲುಶಿಕ್ಷೆ ವಿಧಿಸುವಂತೆ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸಿತ್ತು. ದೋಷಿಗಳ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಹಿನ್ನೆಲೆ ಮೊದಲು ನೀಡಿದ ಆದೇಶಕ್ಕೆ ಪಟಿಯಾಲಾ ಹೌಸ್ ಕೋರ್ಟ್ ತಡೆ ನೀಡಿದ್ದು, ನಂತರದಲ್ಲಿ ಫೆಬ್ರವರಿ.01ರ ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶಿಸಿತ್ತು.
ಎರಡನೇ ಬಾರಿಯೂ ಗಲ್ಲುಶಿಕ್ಷೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್, ಸೋಮವಾರ 3ನೇ ಬಾರಿ ನಾಲ್ವರು ದೋಷಿಗಳ ಗಲ್ಲುಶಿಕ್ಷೆಗೆ ಡೆತ್ ವಾರಂಟ್ ಜಾರಿಗೊಳಿಸಿದೆ. ಇದೀಗ ಸುಪ್ರೀಂಕೋರ್ಟ್ ನಲ್ಲಿ ಇದೇ ಪ್ರಕರಣದ ಅರ್ಜಿಯೊಂದು ಬಾಕಿ ಉಳಿದಿದ್ದು, ಮೂರನೇ ಬಾರಿಯೂ ಗಲ್ಲುಶಿಕ್ಷೆ ಮುಂದೂಡಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.
ಸದ್ಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.